ಮನೆ ರಾಷ್ಟ್ರೀಯ ಅಳಿಯನಿಗೆ ರಾಜ ಮರ್ಯಾದೆ; 158 ಬಗೆಯ ತಿಂಡಿ-ತಿನಿಸುಗಳು..

ಅಳಿಯನಿಗೆ ರಾಜ ಮರ್ಯಾದೆ; 158 ಬಗೆಯ ತಿಂಡಿ-ತಿನಿಸುಗಳು..

0

ಅಮರಾವತಿ : ಆಂದ್ರಪ್ರದೇಶದ ತೆನಾಲಿ ಇನ್ನಿತರ ಭಾಗಗಳಲ್ಲಿ ಹಬ್ಬಗಳ ಸಮಯದಲ್ಲಿ ಅಳಿಯಂದಿರಿಗೆ ರಾಜ ಮರ್ಯಾದೆ ನೀಡಲಾಗುತ್ತದೆ. ಈ ಪ್ರದೇಶದಲ್ಲಿ ಹಿಂದಿನಿಂದಲೂ ಇಂತಹ ಸಂಪ್ರದಾಯ ಇದೆ. ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದ ಕುಟುಂಬವೊಂದು ಅಳಿಯನಿಗಾಗಿ 158 ಬಗೆಯ ಖಾದ್ಯಗಳನ್ನು ತಯಾರಿಸಿ ಭಾರೀ ಔತಣಕೂಟ ಆಯೋಜಿಸಿ ಮಕರ ಸಂಕ್ರಾಂತಿಯನ್ನು ಆಚರಿಸಿದೆ.

ತೆನಾಲಿಯ ಪ್ರಸಿದ್ಧ ಉದ್ಯಮಿ ದಂಪತಿ ವಂದನಪು ಮುರಳೀಕೃಷ್ಣ ಮತ್ತು ಮಾಧವಿಲತಾ, ಗೋದಾವರಿ ಜಿಲ್ಲೆಯ ರಾಜಮಹೇಂದ್ರವರಂ ಮೂಲದ ತಮ್ಮ ಅಳಿಯ ಶ್ರೀದತ್ತ ಅವರಿಗೆ ಈ ವಿಶೇಷ ಔತಣಕೂಟ ಏರ್ಪಡಿಸಿತ್ತು. ಮಗಳು ಮೌನಿಕಾ ಕಳೆದ ವರ್ಷ ಶ್ರೀದತ್ತ ಅವರೊಂದಿಗೆ ಸಪ್ತಪದಿ ತುಳಿದಿದ್ದರು. ಈ ಸಂಕ್ರಾಂತಿಯು ಅಳಿಯನಿಗೆ ಮೊದಲ ಸಂಕ್ರಾಂತಿ ಹಬ್ಬವಾಗಿದ್ದು, ಈ ವಿಶೇಷ ಆತಿಥ್ಯ ನೀಡಲಾಯಿತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮುರಳಿಕೃಷ್ಣ ಅವರು, ಸಂಕ್ರಾಂತಿ, ಯುಗಾದಿ ಮತ್ತು ದಸರಾದಂತಹ ಹಬ್ಬಗಳ ವೇಳೆ ಗೋದಾವರಿ ಜಿಲ್ಲೆಗಳಲ್ಲಿ ಅಳಿಯಂದಿರನ್ನು ಬಹಳ ಪ್ರೀತಿಯಿಂದ ಸ್ವಾಗತಿಸುವ ಸಂಪ್ರದಾಯವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ನಮ್ಮ ಅಳಿಯನಿಗೆ ಮದುವೆಯ ನಂತರ ಇದು ಮೊದಲ ಸಂಕ್ರಾಂತಿಯಾಗಿತ್ತು. ನಾವು ಇದನ್ನು ವಿಶೇಷವಾಗಿ ಆಚರಿಸಿದ್ದೇವೆ ಎಂದಿದ್ದಾರೆ.

ಶ್ರೀದತ್ತ ಅವರು ಮಾತನಾಡಿ, ಈ ಸಂಕ್ರಾಂತಿ ಹಬ್ಬವು ಒಳ್ಳೆಯ ಅನುಭವ ನೀಡಿತು. ಅಳಿಯನಾಗಿ ಆಚರಿಸಿದ ಈ ಮೊದಲ ಹಬ್ಬ ಸದಾ ನೆನಪಿನಲ್ಲಿ ಉಳಿಯಲಿದೆ ಎಂದು ಹೇಳಿಕೊಂಡಿದ್ದಾರೆ. ಅಮಲಾಪುರಂನಲ್ಲಿ ಮತ್ತೊಬ್ಬ ಅಳಿಯ ಹಬ್ಬದ ದಿನ ಟೆಸ್ಲಾ ಎಲೆಕ್ಟ್ರಿಕ್ ವಾಹನದಲ್ಲಿ ಬಂದು ಗಮನ ಸೆಳೆದಿದ್ದಾರೆ. ಟೆಸ್ಲಾ ಇವಿಯಲ್ಲಿ ಬಂದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.