ಮುಂಬೈ : ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಅವರ ಸಾವಿನ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಳವಳ ವ್ಯಕ್ತಪಡಿಸಿದ್ದಾರೆ. ವಿಮಾನ ಪತನ ಪ್ರಕರಣವನ್ನ ಉನ್ನತಮಟ್ಟದ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ಅಜಿತ್ ಪವಾರ್ ಸಾವಿನ ಕುರಿತು ಮಾತನಾಡಿರುವ ಅವರು, ಅಜಿತ್ ಪವಾರ್ ಎನ್ಡಿಎ ತೊರೆದು ಇಂಡಿಯಾ ಒಕ್ಕೂಟ ಸೇರಬೇಕಿತ್ತು. ಅವರು ಎನ್ಡಿಎ ಒಕ್ಕೂಟ ತೊರೆಯುವ ಮಾತುಗಳು ದಟ್ಟವಾಗಿತ್ತು. ಈಗ ಏನಾಗಿದೆ ನೋಡಿ. ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಉನ್ನತಮಟ್ಟದ ತನಿಖೆ ನಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ. ಅಪಘಾತ ಹೇಗೆ ಸಂಭವಿಸಿತು ಅನ್ನೋದು ಗೊತ್ತಾಗಬೇಕು ಎಂದು ಹೇಳಿದ್ದಾರೆ.
ಇದಕ್ಕೆ ದನಿಗೂಡಿಸಿರುವ ಆಪ್ ನಾಯಕಿ ಸೋಮನಾಥ್ ಭಾರ್ತಿ, ಪವಾರ್ ಅವರ ಸಾವು ಅಪಘಾತವೇ ಅಥವಾ ವಿಧ್ವಂಸಕ ಕೃತ್ಯವೇ ಎಂದು ಪ್ರಶ್ನೆ ಮಾಡಿದ್ದಾರೆ. ವಿಮಾನ ದುಂತರದಲ್ಲಿ ಡಿಸಿಎಂ ಅಜಿತ್ ಪವಾರ್ ಅವರ ಸಾವಿನ ಸುದ್ದಿ ತಿಳಿದು ಆಘಾತವಾಯಿತು. ಮಹಾರಾಷ್ಟ್ರ ಪುರಸಭೆ ಚುನಾವಣೆಯಲ್ಲಿ ಅಜಿತ್ ಪವಾರ್ ಅವರ ಬಣ ಶರದ್ ಪವಾರ್ ಅವರ ಬಣದೊಂದಿಗೆ ಮೈತ್ರಿ ಮಾಡಿಕೊಂಡಿತ್ತು.
ಹೀಗಾಗಿ ಎರಡೂ ಬಣಗಳು ಮತ್ತೆ ವಿಲೀನಗೊಳ್ಳಬಹುದು. ಇದು ಬಿಜೆಪಿ-ಶಿವಸೇನೆ ಸರ್ಕಾರವನ್ನು ತೊಂದರೆಗೊಳಿಸುತ್ತಿತ್ತು. ಅಷ್ಟರಲ್ಲೇ ಅಪಘಾತ ಸಂಭವಿಸಿರೋದು ಅನುಮಾನ ಮೂಡಿಸಿದೆ. ಇದು ಅಪಘಾತವೋ ಅಥವಾ ವಿಧ್ವಂಸಕ ಕೃತ್ಯವೋ ಅನ್ನೋದನ್ನ ತನಿಖೆ ಮಾಡಬೇಕು ಎಂದು ಒತ್ತಾಯಿಸಿ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಕೂಡ ಪವಾರ್ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ. ಮೊದಲು ವಿಜಯ್ ರೂಪಾನಿ ಜಿ ಅವರ ವಿಮಾನ ಅಪಘಾತ, ಅದಕ್ಕೂ ಮುನ್ನ ಬಿಪಿನ್ ರಾವತ್ ಮತ್ತು ಈಗ ಅಜಿತ್ ಪವಾರ್ ಅವರ ಅಪಘಾತ ಆಗಿದ. ಇವುಗಳಲ್ಲಿ ಯಾವುದರ ತನಿಖಾ ವರದಿಯನ್ನೂ ಸಾರ್ವಜನಿಕಗೊಳಿಸದಿರುವುದು ಅನುಮಾನ ಮೂಡಿಸುತ್ತದೆ. ಹಾಗಾಗಿ ಇದರ ಬಗ್ಗೆ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.















