ತುಮಕೂರು : ಇಂದು ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವ ಹಿನ್ನೆಲೆ ಮಠದಲ್ಲಿ ಸಂಭ್ರಮ ಕಳೆಗಟ್ಟಿದೆ. ಪ್ರಾತಃ ಕಾಲದಿಂದಲೇ ಪೂಜಾ ಕೈಂಕರ್ಯಗಳು ಶುರುವಾಗಿದ್ದು, ಶಿವಕುಮಾರ ಶ್ರಿಗಳ ಗದ್ದುಗೆಗೆ ಫಲ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ.
ಲಿಂಗೈಕ್ಯ ಶ್ರಿಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯುತ್ತಿದ್ದು, ಸಿದ್ದಗಂಗಾ ಮಠಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಗದ್ದುಗೆಗೆ ಪೂಜೆ ಮಾಡುತ್ತಿದ್ದಾರೆ. ಮಂತ್ರಘೋಷಗಳಿಂದ ಪೂಜೆ ನಡೆಯುತ್ತಿದೆ. ಬೆಳಗ್ಗೆ 10:30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಮಠಕ್ಕೆ ಆಗಮಿಸಲಿದ್ದು, 12:30ರವರೆಗೆ ಮಠದ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಶಿವೈಕ್ಯ ಶಿವಕುಮಾರ ಶ್ರೀಗಳ ಜನ್ಮದಿನೋತ್ಸವ ಹಿನ್ನೆಲೆ ಮಠದಲ್ಲಿ ರುದ್ರಾಕ್ಷಿ ಮಂಟಪ ಮೆರವಣಿಗೆ ಮಾಡಲಾಯಿತು. ರುದ್ರಾಕ್ಷಿ ಮಂಟಪದಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿ ಇರಿಸಿ ಮೆರವಣಿಗೆ ಮಾಡಿದ್ದು, ಶಿವಕುಮಾರ ಶ್ರೀಗಳ ಗದ್ದಿಗೆಯಿಂದ ಹೊಸ ಮಠದ ಬಸವಣ್ಣರ ಪುತ್ಥಳಿವರೆಗೂ ಮೆರವಣಿಗೆ ನಡೆದಿದೆ. ಕಲಶ ಹೊತ್ತ ಮಹಿಳೆಯರು ರುದ್ರಾಕ್ಷಿ ಮಂಟಪಕ್ಕೆ ಸ್ವಾಗತ ಕೋರಿದ್ದಾರೆ.















