ಚೆನ್ನೈ, ತಮಿಳುನಾಡು: ನಿರಂತರ ಮಾತುಕತೆಗಳ ನಂತರ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಶನಿವಾರ ವಿಜಯ್ ಅವರಿಗೆ ಬೆಂಬಲ ಘೋಷಿಸಿದೆ. ತಮಿಳುನಾಡಿನಲ್ಲಿ ಮುಂದಿನ ಸರ್ಕಾರ ರಚಿಸಲು ಟಿವಿಕೆ ಗೆ ಬೇಷರತ್ ಬೆಂಬಲ ಪತ್ರವನ್ನು ಅಧಿಕೃತವಾಗಿ ನೀಡಿದೆ ಎನ್ನಲಾಗಿದೆ.
ವಿಸಿಕೆ ಸಂಸ್ಥಾಪಕ ಮತ್ತು ಲೋಕಸಭಾ ಸಂಸದ ಥೋಲ್ ತಿರುಮಾವಲವನ್, ಟಿವಿಕೆ ಪ್ರಧಾನ ಕಾರ್ಯದರ್ಶಿ (ಚುನಾವಣಾ ತಂತ್ರ) ಆಧವ್ ಅರ್ಜುನ ಅವರಿಗೆ ಬೆಂಬಲ ಪತ್ರವನ್ನು ಹಸ್ತಾಂತರಿಸಿದರು. ಸಭೆಯಿಂದ ಹೊರಬಂದ ಆಧವ್, ತಮ್ಮ ಪಕ್ಷದ ನಾಯಕ ಮತ್ತು ಮುಖ್ಯಮಂತ್ರಿಯಾಗಿ ಆಯ್ಕೆಯಾದ ವಿಜಯ್ ಅವರನ್ನು ಭೇಟಿ ಮಾಡಲು ಹೊರಡುವ ಮೊದಲು ಮಾಧ್ಯಮಗಳಿಗೆ ಪತ್ರವನ್ನು ಪ್ರದರ್ಶಿಸುತ್ತಾ “ವೆಟ್ರಿ, ವೆಟ್ರಿ, ವೆಟ್ರಿ” ಎಂದು ಮೂರು ಬಾರಿ ಪುನರಾವರ್ತಿಸಿದರು. ಈ ಸರ್ಕಾರ ರಚನೆ ಸಂಬಂಧ ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿದ್ದ ಎಲ್ಲ ನಾಟಕೀಯ ಬೆಳವಣಿಗೆಗಳಿಗೆ ತೆರೆ ಬಿದ್ದಿದೆ. 234 ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ ಈಗ 118 ಶಾಸಕರ ಬೆಂಬಲವನ್ನು ಪಡೆದುಕೊಂಡಿದೆ. ತಮಿಳುನಾಡು ರಾಜ್ಯಪಾಲರಿಗೆ ವಿಸಿಕೆ ಕಳುಹಿಸಿದ ಪತ್ರದ ಪ್ರಕಾರ, ಪಕ್ಷದ ಅಧ್ಯಕರು, ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಉದ್ದೇಶಕ್ಕಾಗಿ ಟಿವಿಕೆ ಅಧ್ಯಕ್ಷ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ ಅವರ ನೇತೃತ್ವದಲ್ಲಿ ನಂಬಿಕೆ ಇಟ್ಟಿರುವುದಾಗಿ ಹಾಗೂ ತಮ್ಮ ಇಬ್ಬರು ಶಾಸಕರು ಬೆಂಬಲವನ್ನು ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗುತ್ತಿದೆ.
ಈ ಕುರಿತು ತಮಿಳುನಾಡಿನ ಜನರಿಗೆ ಸ್ಥಿರ ಮತ್ತು ಪ್ರಜಾಪ್ರಭುತ್ವ ಆಡಳಿತವನ್ನು ಖಚಿತಪಡಿಸಿಕೊಳ್ಳುವ ಹಿತಾಸಕ್ತಿಯಿಂದ ಬೆಂಬಲವನ್ನು ತಿಳಿಸಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ರಾಜ್ಯಪಾಲರು ತಮ್ಮ ಬೇಷರತ್ತಾದ ಬೆಂಬಲವನ್ನು ಮಾನ್ಯ ಮಾಡುವಂತೆ ಪತ್ರದಲ್ಲಿ ಕೋರಲಾಗಿದೆ. ವಿಸಿಕೆ ಸಂಸ್ಥಾಪಕ ಮತ್ತು ಲೋಕಸಭಾ ಸಂಸದ ಥೋಲ್ ತಿರುಮಾವಲವನ್ ಅವರು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ವರ್ಚುಯಲ್ ಉನ್ನತ ಮಟ್ಟದ ಸಭೆಯಲ್ಲಿ ಟಿವಿಕೆ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಪಕ್ಷ ಎದುರಿಸಬೇಕಾದ ಹಲವಾರು ಪರಿಣಾಮಗಳ ಕುರಿತು ಚರ್ಚಿಸಿದರು. ಇಬ್ಬರು ಶಾಸಕರ ಪಕ್ಷ ಯಾರಿಗೆ ಬೆಂಬಲ ನೀಡುತ್ತದೆ ಎಂಬುದರ ಕುರಿತು ಶನಿವಾರ ಬೆಳಿಗ್ಗೆ ನಿರ್ಧಾರ ಪ್ರಕಟಿಸುವುದಾಗಿ ತಿರುಮಾವಲವನ್ ಶುಕ್ರವಾರ ಹೇಳಿದ್ದರು. ಆದರೆ, ಶನಿವಾರ ಬೆಳಗ್ಗೆ ಮಾಧ್ಯಮ ಸಂವಾದಕ್ಕಾಗಿ ಪಕ್ಷದ ಕಚೇರಿಗೆ ಭೇಟಿ ನೀಡಲು ಅವರು ನಿರಾಕರಿಸಿದ್ದರು.
ಆದರೆ ಅವರ ಪಕ್ಷದ ಸಹೋದ್ಯೋಗಿಗಳು ಸಂಜೆ 4 ಗಂಟೆಗೆ ಮಾಧ್ಯಮ ಸಂವಾದದ ಸ್ಥಳ ಮತ್ತು ಸಮಯವನ್ನು ಪ್ರಕಟಿಸುವುದಾಗಿ ಘೋಷಿಸಿದರು. ಮತ್ತು ಅನಾನುಕೂಲತೆಗಾಗಿ ಕ್ಷಮೆಯಾಚಿಸಿದರು. 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ 234 ಸದಸ್ಯ ಬಲದ ವಿಧಾನಸಭೆಯಲ್ಲಿ ಸರ್ಕಾರ ರಚನೆ ಮಾಡಲು 118 ಶಾಸಕರ ಬೆಂಬಲ ಬೇಕಾಗುತ್ತದೆ. ಹೀಗಾಗಿ ವಿಜಯ್ ಇತರ ಪಕ್ಷಗಳ ಬೆಂಬಲ ಯಾಚಿಸಿದ್ದರು. ಕಾಂಗ್ರೆಸ್ ಐದು ಸ್ಥಾನಗಳನ್ನು ಹೊಂದಿದ್ದು, ಅದು ಮೊದಲಿಗೆ ಟಿವಿಕೆಗೆ ಬೆಂಬಲ ಘೋಷಿಸಿತ್ತು. ಆದರೆ ಇದರಿಂದಲೂ ಬಹುಮತಕ್ಕೆ ಇನ್ನೂ ಆರು ಶಾಸಕರ ಕೊರತೆ ಉಂಟಾಗಿತ್ತು. ಇನ್ನು ಶುಕ್ರವಾರ ಎಡಪಕ್ಷಗಳ ನಾಲ್ವರು ಶಾಸಕರು ಬೇಷರತ್ ಬೆಂಬಲ ನೀಡಿದ್ದರಿಂದ ಟಿವಿಕೆ ಸಂಖ್ಯಾಬಲ 116ಕ್ಕೆ ಏರಿಕೆಯಾಗಿತ್ತು. ಆದರೆ ವಿಸಿಕೆ ಅಧಿಕೃತ ಬೆಂಬಲ ನೀಡಿರಲಿಲ್ಲ. ಇಂದು ಅದು ತನ್ನ ಅಧಿಕೃತ ಬೇಷರತ್ ಬೆಂಬಲವನ್ನು ಘೋಷಿಸಿದೆ. ಹೀಗಾಗಿ ಟಿವಿಕೆ ಸಂಖ್ಯಾ ಬಲ 118ಕ್ಕೆ ಏರಿಕೆಯಾಗಿದೆ. ಈ ಮೂಲಕ ಸರ್ಕಾರ ರಚನೆಗೆ ಹಾದಿ ಸುಗಮವಾದಂತಾಗಿದೆ ಎನ್ನಲಾಗಿದೆ.
















