ಗಾಂಧೀನಗರ : 75 ವರ್ಷಗಳನ್ನು ಪೂರೈಸುತ್ತಿರುವ ಸೋಮನಾಥ ದೇಗುಲದ ಅಮೃತ ಮಹೋತ್ಸವದಲ್ಲಿ ಭಾಗಿಯಾಗಿ, ಪ್ರಧಾನಿ ನರೇಂದ್ರ ಮೋದಿ ಧಾರ್ಮಿಕ ವಿಧಿವಿಧಾನ ಹಾಗೂ ಕುಂಭಾಭಿಷೇಕ ನೆರವೇರಿಸಿದರು. 12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಹಾಗೂ ಭಾರತದ ಆಧ್ಯಾತ್ಮಿಕ ಪರಂಪರೆಯ ಸಂಕೇತವಾದ ಪುನರ್ನಿರ್ಮಿಸಲಾದ ಸೋಮನಾಥ ದೇವಾಲಯವು 75 ವರ್ಷಗಳನ್ನು ಪೂರೈಸುತ್ತಿದೆ.
ಇದರ ಸ್ಮರಣಾರ್ಥ ಸೋಮನಾಥ ದೇವಾಲಯದಲ್ಲಿ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಈ ವೇಳೆ ಪ್ರಧಾನಿ ಮೋದಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಭಾರತದ 11 ಪವಿತ್ರ ಯಾತ್ರಾ ಸ್ಥಳಗಳಿಂದ ಸಂಗ್ರಹಿಸಲಾದ ಪವಿತ್ರ ನೀರಿನಿಂದ ಕುಂಭಾಭಿಷೇಕ ನೆರವೇರಿಸಿದರು. ವಿಶೇಷ ಪೂಜೆ ಬಳಿಕ ಅದ್ಧೂರಿ ಆಚರಣೆಯ ಭಾಗವಾಗಿ ಭಾರತೀಯ ವಾಯುಪಡೆಯ ಹೆಸರಾಂತ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡವು ನೀಡಿದ ಅದ್ಭುತವಾದ ವೈಮಾನಿಕ ಪ್ರದರ್ಶನವನ್ನು ಪ್ರಧಾನಿ ಮೋದಿ ವೀಕ್ಷಿಸಿದರು.
ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಉಪಮುಖ್ಯಮಂತ್ರಿ ಹರ್ಷ ಸಾಂಘವಿ ಸೇರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಮೋದಿ ಸೋಮನಾಥನ ಶ್ರೀಮಂತ ಪರಂಪರೆಗೆ ಸಮರ್ಪಿತವಾದ ಸ್ಮರಣಾರ್ಥ ಅಂಚೆ ಚೀಟಿ ಮತ್ತು ನಾಣ್ಯವನ್ನು ಬಿಡುಗಡೆ ಮಾಡಿದರು. ಸೋಮನಾಥ ದೇಗುಲ ತಲುಪುವ ಮುನ್ನ ಮೋದಿ ರೋಡ್ ಶೋ ನಡೆಸಿದರು. ಸೋಮನಾಥ ದೇಗುಲದ ಕಾರ್ಯಕ್ರಮದ ನಂತರ ಸಂಜೆ ಪ್ರಧಾನಿ ಮೋದಿ ವಡೋದರಾಕ್ಕೆ ಭೇಟಿ ನೀಡಲಿದ್ದು, ಸರ್ದಾರ್ ಧಾಮ್ ಹಾಸ್ಟೆಲ್ ಅನ್ನು ಉದ್ಘಾಟಿಸಲಿದ್ದಾರೆ.
















