ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದಂಪತಿ ಇಂದು (ಮೇ 19) ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಪತಿಯ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಈ ಹಿಂದೆ ದರ್ಶನ್ ಅವರೊಂದಿಗೆ ಆಚರಿಸಿದ್ದ ವಾರ್ಷಿಕೋತ್ಸವ ಸಂಭ್ರಮದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಲ್ಲಿ ಹಂಚಿಕೊಂಡಿದ್ದಾರೆ. ದರ್ಶನ್ ಜೈಲಿನಿಂದ ಹೊರಗಿದ್ದಾಗ ಪತ್ನಿ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದರು. ಆದರೆ, ಈಗ ಇಬ್ಬರೂ ದೂರ ದೂರ ಇದ್ದಾರೆ. ಹೀಗಾಗಿ, ಅದ್ದೂರಿಯಾಗಿ ವಿವಾಹ ವಾರ್ಷಿಕೋತ್ಸವ ಆಚರಣೆ ಅಸಾಧ್ಯವಾಗಿದೆ.
ದರ್ಶನ್ ಅವರ ಜೊತೆಗೆ ಫೋಟೋಗಳನ್ನು ಹಂಚಿಕೊಂಡಿರುವ ವಿಜಯಲಕ್ಷ್ಮಿ ಭಾವುಕ ಸಂದೇಶವೊಂದನ್ನೂ ಬರೆದುಕೊಂಡಿದ್ದಾರೆ. ʻಬಿರುಗಾಳಿಯೇ ಬರಲಿ, ಮೌನವೇ ಇರಲಿ ಪ್ರತಿಯೊಂದು ಕ್ಷಣದಲ್ಲೂ ನಾನು ನಿನ್ನ ಕೈ ಹಿಡಿಯುತ್ತೇನೆ. ಸಂದರ್ಭಗಳು ನಮ್ಮನ್ನು ದೂರ ಮಾಡಲು ಪ್ರಯತ್ನಿಸಿದರೂ, ನನ್ನ ಹೃದಯ ಯಾವಾಗಲೂ ನಿನ್ನನ್ನೇ ಆರಿಸಿಕೊಳ್ಳುತ್ತದೆ. ಇಡೀ ಜಗತ್ತೇ ನಿನಗೆ ಎದುರಾಗಿ ನಿಂತರೂ, ನಾನು ನಿನ್ನ ಜೊತೆಗೆ ನಿಲ್ಲುತ್ತೇನೆ, ಎಲ್ಲದರ ಮಧ್ಯೆಯೂ ನಿನ್ನನ್ನೇ ಆರಿಸಿಕೊಳ್ಳುತ್ತೇನೆʼ ಎಂದು ಬರೆದುಕೊಂಡಿದ್ದಾರೆ.
ವಾರ್ಷಿಕೋತ್ಸವ ಹಿನ್ನೆಲೆ ಪತ್ನಿ ಮತ್ತು ಮಗನ ಭೇಟಿಗೆ ಅವಕಾಶ ಕೇಳಿದ್ದ ದರ್ಶನ್ಗೆ ಜೈಲಾಧಿಕಾರಿಗಳು ಆನಿವರ್ಸರಿ ದಿನವೇ ಗಿಫ್ಟ್ ಕೊಟ್ಟಿದ್ದಾರೆ. ದರ್ಶನ್ ಮನವಿಗೆ ಒಪ್ಪಿ ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿನೀಶ್ ಭೇಟಿಗೆ ಅವಕಾಶ ಕಲ್ಪಿಸಿದ್ದಾರೆ. ಮೇ 15 ರಂದು ಜೈಲು ಎಸ್ಪಿ ಅಂಕುಶ್ ಕುಮಾರ್ ಅವರಿಗೆ ದರ್ಶನ್ ಅವಕಾಶ ಕೇಳಿ ಪತ್ರ ಬರೆದಿದ್ದರು. ಬಳಿಕ ವಿಜಯಲಕ್ಷ್ಮಿ ಅವರೂ ಅಲೋಕ್ ಕುಮಾರ್ ಅವರನ್ನ ಭೇಟಿಯಾಗಿ ಅವಕಾಶ ಕೇಳಿದ್ದರು. ಇದಕ್ಕೆ ಒಪ್ಪಿದ ಜೈಲಾಧಿಕಾರಿಗಳು ಜೈಲು ಮ್ಯಾನುವಲ್ ಪ್ರಕಾರ ಒಳ ಸಂದರ್ಶನಕ್ಕೆ ಅವಕಾಶ ನೀಡಿದ್ದಾರೆ. ಜೈಲು ನಿಯಮದ ಪ್ರಕಾರ ತೀವ್ರ ಅನಾರೋಗ್ಯ ಅಥವಾ ಮಾನಸಿಕ ಖಿನ್ನತೆ ಇದ್ದವರಿಗೆ ಒಳ ಸಂದರ್ಶನಕ್ಕೆ ಅವವಾಶವಿದೆ. ದರ್ಶನ್ಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಮಾನಸಿಕವಾಗಿ ಕುಗ್ಗಿಹೋಗಿರುವುದರಿಂದ ಕೊಠಡಿಯಲ್ಲಿ 30 ನಿಮಿಷಗಳ ಭೇಟಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
















