ಮನೆ ಸುದ್ದಿ ಜಾಲ 37 ಬಾರಿ ಅಂಡಾಣು ದಾನ ಮಾಡಿದ ಏಜೆಂಟ್ ಆದ ಮಹಿಳೆ: 5 ಸಾವಿರ ಪುಟಗಳ ಚಾರ್ಜ್​​​ಶೀಟ್​​ನಲ್ಲಿ ...

37 ಬಾರಿ ಅಂಡಾಣು ದಾನ ಮಾಡಿದ ಏಜೆಂಟ್ ಆದ ಮಹಿಳೆ: 5 ಸಾವಿರ ಪುಟಗಳ ಚಾರ್ಜ್​​​ಶೀಟ್​​ನಲ್ಲಿ  ಬಯಲಾದ ಐವಿಎಫ್ ಅಕ್ರಮ ಜಾಲ

0

ಮಹಾರಾಷ್ಟ್ರ:ಮಹಾರಾಷ್ಟ್ರದ ಉಲ್ಹಾಸ್ನಗರ ಮತ್ತು ಬದ್ಲಾಪುರ ಭಾಗದಲ್ಲಿ ಅಕ್ರಮ ಅಂಡಾಣು ದಾನ ಜಾಲ ಬೆಳಕಿಗೆ ಬಂದಿದ್ದು, ಈ ಪ್ರಕರಣ ಇದೀಗ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ. ಬಡ ಮತ್ತು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಮಹಿಳೆಯರನ್ನು ಗುರಿಯಾಗಿಸಿಕೊಂಡು ಅಂಡಾಣು ದಾನದ ಹೆಸರಿನಲ್ಲಿ ಅಕ್ರಮ ವ್ಯವಹಾರ ನಡೆಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು 88 ದಿನಗಳ ಸುದೀರ್ಘ ಪರಿಶೀಲನೆಯ ಬಳಿಕ ಸುಮಾರು 5,000 ಪುಟಗಳ ಚಾರ್ಜ್ಶೀಟ್ ಅನ್ನು ಉಲ್ಹಾಸ್ನಗರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಒಟ್ಟು 15 ಮಂದಿಯನ್ನು ಆರೋಪಿಗಳಾಗಿ ಉಲ್ಲೇಖಿಸಲಾಗಿದೆ. ಇವರಲ್ಲಿ 5 ಮಂದಿ ವೈದ್ಯರು, ಮಹಿಳಾ ಏಜೆಂಟ್ಗಳು ಮತ್ತು ಈ ದಂಧೆಗೆ ಸಂಬಂಧ ಹೊಂದಿದ್ದರೆಂದು ಶಂಕೆ ಇರುವ ಇತರರು ಸೇರಿದ್ದಾರೆ. ಪ್ರಕರಣಕ್ಕೆ ನೇರವಾಗಿ ಸಂಬಂಧ ಹೊಂದಿದ್ದಾರೆ ಎನ್ನಲಾದ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನೂ ಪರೋಕ್ಷವಾಗಿ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನ ಇರುವ 7 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ.

ತನಿಖೆಯಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ, ಸುಮಾರು 30 ಮಹಿಳೆಯರನ್ನು ಬಳಸಿ 250 ಕ್ಕೂ ಹೆಚ್ಚು ಅಂಡಾಣು ದಾನ ಪ್ರಕ್ರಿಯೆಗಳು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾರ್ಜ್ಶೀಟ್ನಲ್ಲಿ 25 ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಲಾಗಿದೆ. ಈ ಅಕ್ರಮ ಜಾಲದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಏಜೆಂಟ್ಗಳು ಬಡ ಮಹಿಳೆಯರನ್ನು ಹಣದ ಆಮಿಷ ತೋರಿಸಿ ಈ ದಂಧೆಗೆ ಸೆಳೆಯುತ್ತಿದ್ದರು ಎಂದು ಆರೋಪಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಳಾದ ಮಹಿಳೆ ಕನಿಷ್ಠ 37 ಬಾರಿ ಅಂಡಾಣು ದಾನ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾನೂನಿನ ಪ್ರಕಾರ ಒಬ್ಬ ಮಹಿಳೆ ಜೀವನದಲ್ಲಿ ಒಮ್ಮೆ ಮಾತ್ರ ಅಂಡಾಣು ದಾನ ಮಾಡಲು ಅವಕಾಶವಿದೆ. ಆದರೆ ಈಕೆ ಹಲವು ಬಾರಿ ನಿಯಮ ಉಲ್ಲಂಘಿಸಿ ದಾನ ಮಾಡಿದ್ದಲ್ಲದೆ, ನಂತರ ಏಜೆಂಟ್ ಆಗಿ ಇತರ ಮಹಿಳೆಯರನ್ನು ಈ ಜಾಲಕ್ಕೆ ಕರೆತಂದಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಈ ಜಾಲದಲ್ಲಿ ಭಾಗಿಯಾದ ಮಹಿಳೆಯರಿಗೆ ಪ್ರತಿ ಸೈಕಲ್ಗೆ 25 ಸಾವಿರದಿಂದ 30 ಸಾವಿರ ರೂಪಾಯಿವರೆಗೆ ಹಣ ನೀಡಲಾಗುತ್ತಿತ್ತು. ಆದರೆ ಅವರಿಗೆ ಸೂಕ್ತ ವೈದ್ಯಕೀಯ ಆರೈಕೆ ಅಥವಾ ಸುರಕ್ಷಿತ ಮೇಲ್ವಿಚಾರಣೆ ನೀಡಲಾಗುತ್ತಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಂಡಾಣು ಉತ್ಪಾದನೆ ಹೆಚ್ಚಿಸಲು ನಿರಂತರವಾಗಿ ಹಾರ್ಮೋನ್ ಇಂಜೆಕ್ಷನ್ ನೀಡಲಾಗುತ್ತಿತ್ತು. ಬಳಿಕ ಅಂಡಾಣುಗಳನ್ನು ಹೊರತೆಗೆದು ಲಕ್ಷಾಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಮುಂಬೈ, ಥಾಣೆ, ಪುಣೆ ಮತ್ತು ಬಾರಾಮತಿ ಭಾಗಗಳ ಹಲವು ಐವಿಎಫ್ ಕೇಂದ್ರಗಳಲ್ಲಿ ಒಂದೇ ಮಹಿಳೆಯರನ್ನು ಪದೇ ಪದೇ ದಾನಿಗಳಾಗಿ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ನ ಮಾಲ್ಟಿ ಐವಿಎಫ್ ಕೇಂದ್ರದ ನಿರ್ದೇಶಕ ಡಾ. ಅಮೋಲ್ ಪಾಟೀಲ್ ಸೇರಿದಂತೆ ಹಲವು ಮಂದಿಯನ್ನು ಬಂಧಿಸಲಾಗಿದೆ. ಮಹಿಳಾ ಏಜೆಂಟ್ಗಳು ಹಣದ ಆಮಿಷ ನೀಡಿ ಮಹಿಳೆಯರನ್ನು ಐವಿಎಫ್ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಅಂಡಾಣು ಸಂಗ್ರಹ ಪ್ರಕ್ರಿಯೆ ನಡೆಸಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಮಾರ್ಚ್ ತಿಂಗಳಲ್ಲಿ ಉಲ್ಹಾಸ್ನಗರ ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆ ಭಗವಾನ್ ಆಸ್ಪತ್ರೆ ಮೇಲೆ ದಾಳಿ ನಡೆಸಿತ್ತು. ಅಲ್ಲಿ ಅಕ್ರಮ ಸೋನೋಗ್ರಫಿ ಮತ್ತು ವೈದ್ಯಕೀಯ ಕ್ರಮಗಳು ನಡೆಯುತ್ತಿವೆ ಎಂಬ ಮಾಹಿತಿ ದೊರೆತಿತ್ತು. ಪರಿಶೀಲನೆ ವೇಳೆ ಸರಿಯಾದ ರೋಗಿಗಳ ದಾಖಲೆಗಳ ಕೊರತೆ, ಅರ್ಹತೆ ಇಲ್ಲದವರಿಂದ ವೈದ್ಯಕೀಯ ಪ್ರಕ್ರಿಯೆ ನಡೆಸುವುದು ಸೇರಿದಂತೆ ಹಲವು ನಿಯಮ ಉಲ್ಲಂಘನೆಗಳು ಪತ್ತೆಯಾಗಿದ್ದವು. ಇದರಿಂದ ಆಸ್ಪತ್ರೆಯನ್ನು ಅಧಿಕಾರಿಗಳು ಸೀಲ್ ಮಾಡಿದ್ದರು.

ಅಂಡಾಣು ದಾನ ಎನ್ನುವುದು ಗರ್ಭಧಾರಣೆ ಸಮಸ್ಯೆ ಇರುವ ಮಹಿಳೆಯರಿಗೆ ನೆರವಾಗುವ ಸಂತಾನೋತ್ಪತ್ತಿ ತಂತ್ರಜ್ಞಾನವಾಗಿದೆ. ಆದರೆ ಭಾರತದಲ್ಲಿ ART ಕಾಯಿದೆ 2021 ಮತ್ತು ಬಾಡಿಗೆ ತಾಯ್ತನ ನಿಯಂತ್ರಣ ಕಾಯಿದೆಯಡಿಯಲ್ಲಿ ಇದಕ್ಕೆ ಕಟ್ಟುನಿಟ್ಟಿನ ನಿಯಮಗಳಿವೆ. ಮಹಿಳೆಯರು ಜೀವನದಲ್ಲಿ ಒಮ್ಮೆ ಮಾತ್ರ ಅಂಡಾಣು ದಾನ ಮಾಡಬಹುದು. ವಾಣಿಜ್ಯ ಉದ್ದೇಶಕ್ಕಾಗಿ ಅಂಡಾಣು ಮಾರಾಟ ಮಾಡುವುದು ಸಂಪೂರ್ಣ ನಿಷೇಧಿತವಾಗಿದೆ. ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದ್ದರಿಂದ ಬದ್ಲಾಪುರ–ಉಲ್ಹಾಸ್ನಗರ ಅಕ್ರಮ ಜಾಲ ಗಂಭೀರ ಪ್ರಕರಣವಾಗಿ ಪರಿಗಣಿಸಲಾಗಿದೆ.