ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ದಂಡವನ್ನು ಪಾವತಿಸಲು ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಬಾಕಿ ಇರುವ ದಂಡದ ಮೊತ್ತದಲ್ಲಿ ಶೇ.50 ರಿಯಾಯಿತಿ ನೀಡಿ ಪಾವತಿಸಲು ಅವಕಾಶ ಕಲ್ಪಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸರ್ಕಾರದ ಆದೇಶದ ಪ್ರಕಾರ, ಜೂನ್ 21 ರಿಂದ ಜುಲೈ 10ರವರೆಗೆ ಒಟ್ಟು 20 ದಿನಗಳ ವಿಶೇಷ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ವಾಹನ ಮಾಲೀಕರು ತಮ್ಮ ಬಾಕಿ ಇರುವ ಸಂಚಾರ ದಂಡವನ್ನು ಅರ್ಧ ಮೊತ್ತದಲ್ಲಿ ಪಾವತಿಸಬಹುದಾಗಿದೆ.

ಯಾವ ಪ್ರಕರಣಗಳಿಗೆ ರಿಯಾಯಿತಿ?
2026ರ ಮೇ ತಿಂಗಳಿಗಿಂತ ಮೊದಲು ಪೊಲೀಸ್ ಇಲಾಖೆಯ ಇ-ಚಲನ್ (E-Challan) ವ್ಯವಸ್ಥೆಯಲ್ಲಿ ದಾಖಲಾಗಿರುವ ಮತ್ತು ಇನ್ನೂ ಪಾವತಿಯಾಗದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಈ ರಿಯಾಯಿತಿ ಅನ್ವಯವಾಗಲಿದೆ.
ಇದರ ಜೊತೆಗೆ, ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿದ್ದು, ಇನ್ನೂ ಬಾಕಿ ಉಳಿದಿರುವ ದಂಡದ ಮೊತ್ತಕ್ಕೂ ಶೇ.50 ರಿಯಾಯಿತಿ ನೀಡಲಾಗಿದೆ.
ಎಲ್ಲಿ ದಂಡ ಪಾವತಿಸಬಹುದು?
ವಾಹನ ಮಾಲೀಕರು ಈ ವಿಶೇಷ ಸೌಲಭ್ಯವನ್ನು ಬಳಸಿಕೊಂಡು ಕೆಳಕಂಡ ವೇದಿಕೆಗಳ ಮೂಲಕ ದಂಡ ಪಾವತಿಸಬಹುದು.
- ಅಸ್ತ್ರಂ (Astram) ಆ್ಯಪ್
- ಕೆಎಸ್ಪಿಎಸ್ (KSPS) ಆ್ಯಪ್
- ಕರ್ನಾಟಕ ಒನ್ (Karnataka One) ಕೇಂದ್ರಗಳು
- ಸಂಬಂಧಿತ ಅಧಿಕೃತ ಪಾವತಿ ಪೋರ್ಟಲ್ಗಳು

ಕಳೆದ ವರ್ಷವೂ ನೀಡಲಾಗಿತ್ತು ಅವಕಾಶ
ಬಾಕಿ ಇರುವ ಸಂಚಾರ ಪ್ರಕರಣಗಳನ್ನು ಇತ್ಯರ್ಥಗೊಳಿಸುವ ಉದ್ದೇಶದಿಂದ ಕಾನೂನು ಸೇವೆಗಳ ಪ್ರಾಧಿಕಾರ ಸಲ್ಲಿಸಿದ್ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದೆ. ಇದೇ ರೀತಿಯ ಶೇ.50 ರಿಯಾಯಿತಿ ಯೋಜನೆಯನ್ನು ಕಳೆದ ವರ್ಷದ ನವೆಂಬರ್ ತಿಂಗಳಲ್ಲೂ ಜಾರಿಗೆ ತರಲಾಗಿತ್ತು. ಈ ಬಾರಿ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸವಾರರು ಈ ಅವಕಾಶವನ್ನು ಬಳಸಿಕೊಂಡು ಬಾಕಿ ದಂಡ ಪಾವತಿಸುವ ನಿರೀಕ್ಷೆ ಇದೆ.
















