ಬೆಂಗಳೂರು: ಲಾಟರಿ ಮೂಲಕ ಲಕ್ಷಾಂತರ ರೂಪಾಯಿ ಗೆಲ್ಲುವ ಆಸೆಗೆ ಬಿದ್ದ ಪಶ್ಚಿಮ ಬೆಂಗಳೂರಿನ ಇಬ್ಬರು ಸೈಬರ್ ವಂಚಕರ ಬಲೆಗೆ ಸಿಲುಕಿ ಒಟ್ಟು 13.71 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವಂಚನೆಗೆ ಒಳಗಾದವರಲ್ಲಿ ವಳಗೇರಹಳ್ಳಿಯ 60 ವರ್ಷದ ಎನ್ಜಿಒ ಉದ್ಯೋಗಿಯೊಬ್ಬರು 7.45 ಲಕ್ಷ ರೂ., ಮಾರುತಿ ನಗರದ 52 ವರ್ಷದ ರೈತರೊಬ್ಬರು 6.26 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ವಂಚಕರು ತಮ್ಮನ್ನು ‘ಕೇರಳ ಜ್ಯಾಕ್ಪಾಟ್’ ಅಥವಾ ‘ಕೇರಳ ಸ್ಟೇಟ್ ಲಾಟರಿ’ ಸಂಸ್ಥೆಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು ವಾಟ್ಸಾಪ್ ಕರೆಗಳ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿದ್ದರು. ನಿಮಗೆ 8 ಲಕ್ಷ ರೂಪಾಯಿ ಲಾಟರಿ ಬಹುಮಾನ ಬಂದಿದೆ ಎಂದು ನಂಬಿಸಿ, ಅದನ್ನು ಪರಿಶೀಲಿಸಲು ಒಂದು ವೆಬ್ಸೈಟ್ ಲಿಂಕ್ ಕಳುಹಿಸಿದ್ದರು.
ಸಂತ್ರಸ್ತರು ಲಿಂಕ್ ತೆರೆಯುತ್ತಿದ್ದಂತೆಯೇ ಅವರ ಹೆಸರಿನಲ್ಲೇ ಲಾಟರಿ ಬಂದಿರುವಂತೆ ನಕಲಿ ವೆಬ್ಸೈಟ್ನಲ್ಲಿ ತೋರಿಸಲಾಗಿತ್ತು. ಈ ಮೂಲಕ ಅವರ ವಿಶ್ವಾಸ ಗಳಿಸಿ ಮುಂದಿನ ಹಂತದ ವಂಚನೆ ನಡೆಸಲಾಗಿದೆ.
ಬಹುಮಾನದ ಹಣ ಬಿಡುಗಡೆ ಮಾಡಲು ಜಿಎಸ್ಟಿ, ಟಿಡಿಎಸ್ ಹಾಗೂ ಆದಾಯ ತೆರಿಗೆ ಪಾವತಿಸಬೇಕೆಂದು ಎನ್ಜಿಒ ಉದ್ಯೋಗಿಗೆ ಸೂಚಿಸಲಾಗಿತ್ತು. ಮತ್ತೊಂದೆಡೆ, ರೈತನಿಗೆ ಆರ್ಬಿಐ ನಿರಾಕ್ಷೇಪಣಾ ಪತ್ರ ಪಡೆಯಲು ಜಿಎಸ್ಟಿ ಕಟ್ಟುವಂತೆ ಹೇಳಲಾಗಿತ್ತು.

ಅಲ್ಲದೆ, ಲಾಟರಿ ಮೊತ್ತ ಥಾಯ್ ಭಾಟ್ ಕರೆನ್ಸಿಯಲ್ಲಿದ್ದು ಅದನ್ನು ಭಾರತೀಯ ರೂಪಾಯಿಗೆ ಪರಿವರ್ತಿಸಲು ಹೆಚ್ಚುವರಿ ಶುಲ್ಕ ಪಾವತಿಸಬೇಕೆಂದು ಸುಳ್ಳು ಹೇಳಿ ಹಣ ಪಡೆದುಕೊಂಡಿದ್ದಾರೆ.
ಇದನ್ನು ನಿಜವೆಂದು ನಂಬಿದ ಇಬ್ಬರೂ ಹಂತ ಹಂತವಾಗಿ ಲಕ್ಷಾಂತರ ರೂಪಾಯಿ ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಬಳಿಕ ವಂಚಕರು ಸಂಪರ್ಕ ಕಡಿತಗೊಳಿಸಿದಾಗ ತಮಗೆ ಮೋಸವಾಗಿರುವುದು ಗೊತ್ತಾಗಿದೆ.
ಕರ್ನಾಟಕದಲ್ಲಿ 2007ರಿಂದಲೇ ಲಾಟರಿ ಮಾರಾಟ ನಿಷೇಧಿಸಲಾಗಿದೆ. ಆದರೆ ಕೇರಳ ಸೇರಿದಂತೆ ಲಾಟರಿ ಕಾನೂನುಬದ್ಧವಾಗಿರುವ ರಾಜ್ಯಗಳಲ್ಲಿ ಭೌತಿಕ ಟಿಕೆಟ್ಗಳ ಮೂಲಕ ಮಾತ್ರ ಲಾಟರಿ ಮಾರಾಟ ನಡೆಯುತ್ತದೆ. ಯಾವುದೇ ಅಧಿಕೃತ ಕೇರಳ ಲಾಟರಿ ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟವಾಗುವುದಿಲ್ಲ ಎಂದು ಸೈಬರ್ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಹೀಗಾಗಿ, ಸಾಮಾಜಿಕ ಜಾಲತಾಣಗಳು ಅಥವಾ ವಾಟ್ಸಾಪ್ ಮೂಲಕ ಬರುವ ಲಾಟರಿ ಬಹುಮಾನ, ಜ್ಯಾಕ್ಪಾಟ್ ಹಾಗೂ ನಗದು ಬಹುಮಾನಗಳ ಆಮಿಷಗಳಿಗೆ ಸಾರ್ವಜನಿಕರು ಬಲಿಯಾಗಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.
















