ಮನೆ ರಾಜಕೀಯ ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್‌ ವಾರ್‌ ಸರಿಯಲ್ಲ: ಎಚ್.ವಿಶ್ವನಾಥ್‌

ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್‌ ವಾರ್‌ ಸರಿಯಲ್ಲ: ಎಚ್.ವಿಶ್ವನಾಥ್‌

0

ಮೈಸೂರು (Mysuru): ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್‌ ವಾರ್‌ ಸರಿಯಲ್ಲ. ಮೈಸೂರು ಜಿಲ್ಲೆಯಲ್ಲಿ ಸಂಸದ ಪ್ರತಾಪ್‌ ಸಿಂಹ ಒಬ್ಬನೇ ಅಭಿವೃದ್ಧಿ ಕೆಲಸಗಳೆಲ್ಲವನ್ನೂ ಮಾಡುತ್ತಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಎಚ್.ವಿಶ್ವನಾಥ್‌ ಹೇಳಿದರು.

ತಮ್ಮ 75ನೇ ವರ್ಷದ ಹುಟ್ಟಹಬ್ಬಕ್ಕೆ ರಾಯಚೂರು ಮೂಲದ ಅಭಿಮಾನಿ ನಂದಾ ಎನ್ನುವವರು ನೀಡಿದ ಆಂಬ್ಯುಲೆನ್ಸ್ ವಾಹನವನ್ನು ನಗರದ ಕೆ.ಆರ್.ಆಸ್ಪತ್ರೆಯ ನೆಪ್ರೋಲಜಿ ವಿಭಾಗದ ಮುಖ್ಯಸ್ಥರಿಗೆ ಹಸ್ತಾಂತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಯಾವುದೇ ಅಭಿವೃದ್ಧಿ ಕಾರ್ಯಗಳ ವಿಚಾರದಲ್ಲಿ ಎಲ್ಲರೂ ನಾನೇ ಮಾಡಿದ್ದು, ನಾನೇ ಮಾಡಿದ್ದು ಎನ್ನುತ್ತಿದ್ದಾರೆ. ಪ್ರತಾಪ ಅಲ್ಲದೇ, ಪ್ರತಿಯೊಬ್ಬರೂ ಕ್ರೆಡಿಟ್‌ ಪಡೆದುಕೊಳ್ಳುವ ಕಸರತ್ತಿನಲ್ಲಿ (ಕ್ರೆಡಿಟ್ ವಾರ್) ತೊಡಗಿದ್ದಾರೆ. ಸರ್ಕಾರಕ್ಕೆ ಜನರು ನೀಡುವ ತೆರಿಗೆಯಿಂದ ಖಜಾನೆಗೆ ಹಣ ಬರುತ್ತದೆ. ಜನಪ್ರತಿನಿಧಿಗಳಾದ ನಾವು ಟ್ರಸ್ಟಿಗಳಾಗಿ ಕೆಲಸ ಮಾಡುತ್ತೇವೆಯಷ್ಟೆ. ಆದ್ದರಿಂದ ಅಭಿವೃದ್ಧಿ ವಿಚಾರದಲ್ಲಿ ಕ್ರೆಡಿಟ್‌ ವಾರ್‌ ಸರಿಯಲ್ಲ ಎಂದು ತಿಳಿಸಿದರು.

ಯಡಿಯೂರಪ್ಪ ಇಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲೆಯೂರಲು ಅವರ ಕೊಡುಗೆ ಅಪಾರವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ಪಕ್ಷಕ್ಕೆ ಅವರ ಮಾರ್ಗದರ್ಶನ ಅವಶ್ಯವಾಗಿದ್ದು, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯಬೇಕು ಎಂದರು.

ಬಿ.ಎಸ್. ಯಡಿಯೂರಪ್ಪ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಪುತ್ರ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಕೇಳಿರುವುದನ್ನು ಸಮರ್ಥಿಸಿಕೊಂಡ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮನೆ ಮಂದಿಯೆಲ್ಲಾ ರಾಜಕಾರಣದಲ್ಲಿದ್ದಾರೆ. ಅದನ್ನೇಕೆ ಯಾರೂ ಪ್ರಶ್ನಿಸುವುದಿಲ್ಲ. ಸತತ 8 ಬಾರಿ ಪ್ರತಿ‌ನಿಧಿಸಿರುವ ಕ್ಷೇತ್ರದಲ್ಲಿ ಪುತ್ರನಿಗೆ ಟಿಕೆಟ್ ಕೋರಿದ್ದರಲ್ಲಿ ತಪ್ಪೇನಿಲ್ಲ ಎಂದು ಹೇಳಿದರು.

ಬರೇ ಸಿದ್ದರಾಮಯ್ಯ ಪುಂಗಿ ಊದಿದರೆ ಕಾಂಗ್ರೆಸ್ ಪುಂಗಿ ಊದುವವರು ಯಾರು? ಎಂದು ಕಟುವಾಗಿ ಪ್ರಶ್ನಿಸಿದ ವಿಶ್ವನಾಥ್, ಕಾಂಗ್ರೆಸ್ಸಿನ ಉತ್ಸವ ನಡೆಯಬೇಕಿತ್ತು. ಇಂದಿರಾ ಗಾಂಧಿ, ಡಿ.ದೇವರಾಜ ಅರಸು ಸ್ಮರಿಸಿ ನಾಡು–ದೇಶಕ್ಕೆ ಕೊಟ್ಟ ಕೊಡುಗೆಗಳ ಬಗ್ಗೆ ಮಾತನಾಡಬೇಕಿತ್ತು ಎಂದರು.

ಕಲಾಮಂದಿರದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಸ್ವತಃ ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಹೆಸರೇಳಲಿಲ್ಲ. ಎಲ್ಲವನ್ನೂ ಮಾಡಿದ್ದು ತಾನೇ ಎಂದು ಬಿಂಬಿಸಿಕೊಂಡಿದ್ದಾರೆ ಎಂದು ಟೀಕಿಸಿದ ಅವರು, ಕಾಂಗ್ರೆಸ್‌ನಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಇರಬಾರದು ಎಂದರು.