ಮನೆ ರಾಜ್ಯ ಕಲಬುರಗಿ:ಸಿಎಂ ಬೊಮ್ಮಾಯಿಗೆ ಕಪ್ಪು ಪಟ್ಟಿ ಪ್ರದರ್ಶನ

ಕಲಬುರಗಿ:ಸಿಎಂ ಬೊಮ್ಮಾಯಿಗೆ ಕಪ್ಪು ಪಟ್ಟಿ ಪ್ರದರ್ಶನ

0

ಕಲಬುರಗಿ: ಕಲ್ಯಾಣ ಕರ್ನಾಟಕ ಉತ್ಸವದ ಅಂಗವಾಗಿ ನಗರದ ಎಸ್‌ವಿಪಿ ವೃತ್ತದಲ್ಲಿನ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ವೇಳೆ ತಳವಾರ, ಕೋಲಿ ಸಮುದಾಯದ ಮುಖಂಡರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ.

ಕೋಲಿ, ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡದ ಮುಖ್ಯಮಂತ್ರಿಗೆ ಧಿಕ್ಕಾರ, ಮಾತು ತಪ್ಪಿದ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

ತಕ್ಷಣವೇ ತಳವಾರ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಸರ್ದಾರ್ ರಾಯಪ್ಪ ಸೇರಿದಂತೆ ಇತರರನ್ನು ವಶಕ್ಕೆ ಪಡೆದು, ಅಲ್ಲಿಂದ ಕರೆದೊಯ್ದರು.

ಸಿಎಂ ಕಾರೊಳಗೆ ಮನವಿ ಪತ್ರ ಎಸೆದ ಕೋಲಿ ಸಮುದಾಯದ ಮುಖಂಡ ಪೊಲೀಸರ ವಶಕ್ಕೆ

ತಳವಾರ, ಕೋಲಿ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಕೋರಿದ ಪತ್ರವನ್ನು ಕಾರಿನೊಳಗೆ ಕುಳಿತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಎಸೆದ ಸಮುದಾಯದ ಮುಖಂಡರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಲ್ಯಾಣ ಕರ್ನಾಟಕ ಅಮೃತ‌ ಮಹೋತ್ಸವ ಪ್ರಯುಕ್ತ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ, ಮುಖ್ಯಮಂತ್ರಿಗಳು ನೆರೆದವರನ್ನು ಉದ್ದೇಶಿಸಿ ಮಾತನಾಡಬೇಕಿತ್ತು.

ಕಪ್ಪು ಬಟ್ಟೆ ಪ್ರದರ್ಶನದಿಂದಾಗಿ ಭಾಷಣವನ್ನು ‌ಮೊಟಕುಗೊಳಿಸಿ, ಅಲ್ಲಿಂದ ನೇರವಾಗಿ ಪರೇಡ್ ಮೈದಾನದತ್ತ ತೆರಳುತ್ತಿದ್ದರು. ಮಾರ್ಗ ಮಧ್ಯದ ಕನ್ನಡ ಭವನ ಮುಂಭಾಗದಲ್ಲಿ ಪೊಲೀಸ್ ವಾಹನದೊಳಗೆ ಕುಳಿತಿದ್ದವರು ಕಿಟಕಿ, ಬಾಗಿಲಿನಿಂದ ಹೊರ ಇಣುಕಿ ಧಿಕ್ಕಾರ ಕೂಗಿದರು.

ಈ ವೇಳ ನಿಧಾನಕ್ಕೆ ಚಲಿಸುತ್ತಿದ್ದ ಸಿಎಂ ಕಾರಿನೊಳಗೆ ಜನರ ಮಧ್ಯದಿಂದ ಬಂದ ಕೋಲಿ ಸಮುದಾಯದ ಮುಖಂಡರೊಬ್ಬರು ಮನವಿ ಪತ್ರ ಎಸೆದರು. ತಕ್ಷಣವೇ ಪೊಲೀಸರು ಆತನನ್ನು ‌ವಶಕ್ಕೆ ಪಡೆದರು.