ಮನೆ ರಾಜ್ಯ ಸಿಂಹಾಸನ ಜೋಡಣಾ ಕಾರ್ಯ: ಇಂದು ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

ಸಿಂಹಾಸನ ಜೋಡಣಾ ಕಾರ್ಯ: ಇಂದು ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ

0

ಮೈಸೂರು(Mysuru): ಸಾಂಸ್ಕೃತಿಕ ನಗರಿಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದೆ. ನಾಡಹಬ್ಬಕ್ಕೆ ಕೇವಲ 5 ದಿನ ಬಾಕಿ ಇರುವಾಗಲೇ ನಾಡಹಬ್ಬದ ಸಂಭ್ರಮ ಮೇಳೈಸಿದೆ. ಅರಮನೆಯಲ್ಲಿ ಕೊನೆ ಹಂತದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ.

ಇಂದು ಸಿಂಹಾಸನ ಜೋಡಣಾ ಕಾರ್ಯ ನಡೆಯುತ್ತಿರುವ ಹಿನ್ನೆಲೆ ಅರಮನೆಗೆ ಸಾರ್ವಜನಿಕ ಪ್ರವೇಶವನ್ನು ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ಬಂಧ ವಿಧಿಸಲಾಗಿದೆ.

ಬೆಳಗ್ಗೆ 10 ರಿಂದ 1 ಗಂಟೆ ತನಕ ವಜ್ರಖಚಿತ ಸಿಂಹಾಸನ ಜೋಡಣೆ ಕಾರ್ಯ ನಡೆಯಲಿದೆ. ಮೈಸೂರಿನ ಗೆಜ್ಜಗಳ್ಳಿ ಗ್ರಾಮದ ಸಿಂಹಾಸನ ಜೋಡಣೆ ಮಾಡುವ ನುರಿತವರು ಈ ಕಾರ್ಯ ನೆರವೇರಿಸಲಿದ್ದಾರೆ.

ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನ:
ಅರಮನೆಯ ಖಾಸಗಿ ದರ್ಬಾರ್ ಹಾಲ್ ನಲ್ಲಿ ಸಿಂಹಾಸನ ಜೋಡಣೆ ನಡೆಯಲಿದೆ. ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾರ್ಗದರ್ಶನದಲ್ಲಿ ಜೋಡಣೆ ಕಾರ್ಯ ಪ್ರಕ್ರಿಯೆ ನಡೆಯುತ್ತದೆ.

ಸಿಂಹಾಸನ ಜೋಡಣೆಗೂ ಮುನ್ನ ದರ್ಬಾರ್ ಹಾಲ್‌ನಲ್ಲಿ ಪೂಜಾ ಕೈಂಕರ್ಯ ನೆರವೇರಿದ್ದು, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಣೆ, ಅರಮನೆಯ ಪುರೋಹಿತರ ಸಮ್ಮುಖದಲ್ಲಿ ಗಣಪತಿ ಹೋಮ, ಚಾಮುಂಡಿಪೂಜೆ, ಶಾಂತಿ ಹೋಮ ಮಾಡಲಾಗುತ್ತಿದೆ.

ಸ್ಟ್ರಾಂಗ್ ರೂಂನಲ್ಲಿರುವ ಸಿಂಹಾಸನ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜೋಡಣೆ ಮಾಡಲಾಗುತ್ತದೆ.

ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ:

ಅರಮನೆಯಲ್ಲಿ ಅಕ್ಟೋಬರ್ 4 ರಂದು ರಾಜವಂಶಸ್ಥ ಯದುವೀರ್ ಅವರಿಂದ ಆಯುಧ ಪೂಜಾ ಕಾರ್ಯಕ್ರಮ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಅ.4 ರಂದು ಬೆಳಿಗ್ಗೆ 10 ರಿಂದ 1.30 ಗಂಟೆವರೆಗೆ ಮೈಸೂರು ಅರಮನೆಗೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ. ಅಕ್ಟೋಬರ್ 5 ರಂದು ಅರಮನೆಯಲ್ಲಿ ಯದುವೀರ್ ರಿಂದ ವಿಜಯದಶಮಿಯ ಪೂಜಾ ಕೈಂಕರ್ಯ ನಡೆಯಲಿದೆ. ಅಂತಿಮವಾಗಿ ಅಕ್ಟೋಬರ್ 20 ರಂದು ಸಿಂಹಾಸನ ವಿಸರ್ಜನೆ ನಡೆಯಲಿದ್ದು, ಅಂದು ಬೆಳಗ್ಗೆ ಮೈಸೂರು ಅರಮನೆಗೆ 10 ರಿಂದ 1.30 ಗಂಟೆ ತನಕ ಸಾರ್ವಜನಿಕರ ಪ್ರವೇಶ ನಿರ್ಬಂಧ ವಿಧಿಸಿ ಮೈಸೂರು ಅರಮನೆ ಮಂಡಳಿ ಆದೇಶ ಹೊರಡಿಸಿದೆ.