ಮನೆ ರಾಜ್ಯ ದೇವನೂರ ಮಹಾದೇವ ಸೇರಿದಂತೆ 7 ಲೇಖಕರ ಪದ್ಯ-ಗದ್ಯ ಪರಿಗಣಿಸದಂತೆ ಶಿಕ್ಷಣ ಇಲಾಖೆ ಸುತ್ತೋಲೆ

ದೇವನೂರ ಮಹಾದೇವ ಸೇರಿದಂತೆ 7 ಲೇಖಕರ ಪದ್ಯ-ಗದ್ಯ ಪರಿಗಣಿಸದಂತೆ ಶಿಕ್ಷಣ ಇಲಾಖೆ ಸುತ್ತೋಲೆ

0

ಬೆಂಗಳೂರು(Bengaluru): ದೇವನೂರ ಮಹಾದೇವ ಹಾಗೂ ಜಿ.ರಾಮಕೃಷ್ಣ ಸೇರಿ ಏಳು ಲೇಖಕರು ಅನುಮತಿ ಹಿಂಪಡೆದಿರುವ ಗದ್ಯ ಮತ್ತು ಪದ್ಯಗಳನ್ನು ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

10ನೇ ತರಗತಿಯ ಪಠ್ಯದಲ್ಲಿನ (ಪ್ರಥಮ ಭಾಷೆ) ದೇವನೂರ ಮಹಾದೇವ ಅವರ ‘ಎದೆಗೆ ಬಿದ್ದ ಅಕ್ಷರ’ ಗದ್ಯ, ಜಿ.ರಾಮಕೃಷ್ಣ ಅವರ ‘ಭಗತ್‌ ಸಿಂಗ್‌’ ಪೂರಕ ಗದ್ಯ, 9ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ರೂಪ ಹಾಸನ ಅವರ ‘ಅಮ್ಮನಾಗುವುದೆಂದರೆ’ ಪೂರಕ ಪದ್ಯ, 10ನೇ ತರಗತಿ ಪಠ್ಯದಲ್ಲಿನ (ತೃತೀಯ ಭಾಷೆ) ಈರಪ್ಪ ಎಂ.ಕಂಬಳಿ ಅವರ ‘ಹೀಗೊಂದು ಬಸ್ ಪ್ರಯಾಣ’ ಪೂರಕ ಗದ್ಯ, ಸತೀಶ್ ಕುಲಕರ್ಣಿ ಅವರ ‘ಕಟ್ಟುತ್ತೇವ ನಾವು’ ಪದ್ಯ, 10ನೇ ತರಗತಿ ಪಠ್ಯದಲ್ಲಿನ (ದ್ವಿತೀಯ ಭಾಷೆ) ಸುಕನ್ಯ ಮಾರುತಿ ಅವರ ‘ಏಣಿ’ ಪದ್ಯ, 6ನೇ ತರಗತಿ ಪಠ್ಯದಲ್ಲಿನ (ಪ್ರಥಮ ಭಾಷೆ) ದೊಡ್ಡಹುಲ್ಲೂರು ರುಕ್ಕೋಜಿರಾವ್ ಅವರ ‘ಡಾ.ರಾಜ್‌ಕುಮಾರ್’ ಗದ್ಯಗಳನ್ನು ಪರಿಗಣಿಸದಂತೆ ತಿಳಿಸಿದೆ.

ಪಠ್ಯಪರಿಶೀಲನೆಗೆ ರಚಿಸಿದ್ದ ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಹೆಸರಿನಲ್ಲಿ ಕೆಲಪಠ್ಯಗಳನ್ನು ಕೈಬಿಡಲು ಶಿಫಾರಸು ಮಾಡಿತ್ತು. ಇದಕ್ಕೆ ವಿರೋಧ ವ್ಯಕ್ತವಾದಾಗ ತಮ್ಮ ಪದ್ಯ, ಗದ್ಯಗಳನ್ನು ಕೈಬಿಡುವಂತೆ ಹಲವರು ಪತ್ರ ಬರೆದಿದ್ದರು. ಗದ್ಯ ಮತ್ತು ಪದ್ಯಗಳನ್ನು ಪಠ್ಯದಲ್ಲಿ ಉಳಿಸಿಕೊಳ್ಳಲು ಶಿಕ್ಷಣ ಇಲಾಖೆ ಈ ಲೇಖಕರ ಅನುಮತಿ ಕೋರಿತ್ತು. ಮನವಿಯನ್ನು ಲೇಖಕರು ತಿರಸ್ಕರಿಸಿದ್ದರು.