ಮನೆ ದೇವಸ್ಥಾನ ಅದ್ದೂರಿಯಾಗಿ ಜರುಗಿದ ಮಲೆ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ

ಅದ್ದೂರಿಯಾಗಿ ಜರುಗಿದ ಮಲೆ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ

0

ಚಾಮರಾಜನಗರ(Chamarajanagara): ದೀಪಾವಳಿ ಜಾತ್ರಾ ಮಹೋತ್ಸವ ಪ್ರಯುಕ್ತ ಮಲೆ‌ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ಮಹದೇಶ್ವರ ಸ್ವಾಮಿಯ ಮಹಾರಥೋತ್ಸವ ಬುಧವಾರ ಬೆಳಿಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೇಡ ಗಂಪಣ ಸಂಪ್ರದಾಯದಂತೆ ರಥಕ್ಕೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದ ಬಳಿಕ ಸಮುದಾಯದ ಪುಟ್ಟ ಬಾಲಕಿಯರು ರಥಕ್ಕೆ ಬೆಲ್ಲದ ಆರತಿ ಬೆಳಗಿದರು.

ಸಾಲೂರು ಬೃಹನ್ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುಸ್ವಾಮಿ ನೇತೃತ್ವದಲ್ಲಿ ರಥ ಮುಂಭಾಗ ಬೂದುಗುಂಬಳ ಕಾಯಿಯನ್ನು ಒಡೆಯುವ ಮೂಲಕ ಬೆಳಗ್ಗೆ 9.15ಕ್ಕೆ ಮಹಾರಥೋತ್ಸವಕ್ಕೆ ಚಾಲನೆ ಸಿಕ್ಕಿತು.

ನೂರಾರು ಭಕ್ತರು ಉಘೇ ಮಾದಪ್ಪ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು. ದೇವಾಲಯ ಆವರಣ ಸೇರಿದಂತೆ ಸುತ್ತಮುತ್ತ‌ ನೆರೆದಿದ್ದ ಸಾವಿರಾರು ಭಕ್ತರು ಮೊಳಗಿಸಿದ ‘ಉಘೇ ಮಾದಪ್ಪ, ಉಘೇ ಮಾಯ್ಕಾರ.. ಉಘೇ ಉಘೇ..’ ಎಂಬ ಉದ್ಗಾರ ಬೆಟ್ಟದಾದ್ಯಂತ ಅನುರಣಿಸಿತು.

ಹೂವು, ಬಾಳೆ ಕಂದು, ಬಣ್ಣ ಬಣ್ಣಗಳ ವಸ್ತ್ರಗಳಿಂದ ಅಲಂಕೃತಗೊಂಡಿದ್ದ ರಥವು ದೇವಾಲಯದ ಸುತ್ತ ಒಂದು ಸುತ್ತು ಸಾಗಿತು. ರಥ ಸಾಗಿದ ಬಳಿಕ ಪಲ್ಲಕ್ಕಿ ಉತ್ಸವ ಜರುಗಿತು.

ನವ ವಧುವರರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ರಥಕ್ಕೆ ಹಣ್ಣು ಜವನ, ಧವಸ ಧಾನ್ಯ, ನಾಣ್ಯಗಳನ್ನು ಎಸೆದು ಹರಕೆ ತೀರಿಸಿದರು.

ರಥ ಸಾಗುವ ಹಾದಿಯಲ್ಲಿ ವಾದ್ಯ ಮೇಳ, ಛತ್ರಿ ಚಾಮರಗಳು, ವೀರಗಾಸೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಸಾಗಿ ಉತ್ಸವದ ಮೆರುಗು ಹೆಚ್ಚಿಸಿದವು.

ರಥ ಎಳೆದ ಅಧಿಕಾರಿಗಳು: ರಥೋತ್ಸವಕ್ಕ ಚಾಲನೆ ದೊರೆಯುತ್ತಿದ್ದಂತೆ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಕಾರ್ಯದರ್ಶಿ ಎಸ್.ಕಾತ್ಯಾಯಿನಿದೇವಿ, ಉಪ ಕಾರ್ಯದರ್ಶಿ ಬಸವರಾಜಪ್ಪ, ಲೆಕ್ಕ ಅಧೀಕ್ಷಕ ಪ್ರವೀಣ್ ಪಾಟೀಲ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೂಡ ರಥ ಎಳೆದರು.

ಪೊಲೀಸರು ಬಿಗಿ ಭದ್ರತಾ ವ್ಯವಸ್ಥೆ ಕೈಗೊಂಡಿದ್ದರಿಂದ ಯಾವುದೇ ಗೊಂದಲ ಉಂಟಾಗಲಿಲ್ಲ.ರಥೋತ್ಸವದೊಂದಿಗೆ ಐದು ದಿನಗಳ ದೀಪಾವಳಿ ಜಾತ್ರೆಗೆ ತೆರೆ ಬಿದ್ದಿದೆ.

ರಥೋತ್ಸವದ ಬಳಿಕ ಭಕ್ತರು ಮಹದೇಶ್ವರ ಸ್ವಾಮಿಯ ದರ್ಶನ ಪಡೆದರು. ಕೆಲವರು ವಿಶೇಷ ಟಿಕೆಟ್ ಖರೀದಿಸಿ ದರ್ಶನ ಪಡೆದರೆ, ಹಲವರು ಸರತಿ ಸಾಲಿನಲ್ಲಿ ಸಾಗಿ ಮಾದಪ್ಪನ ದರ್ಶನ ಪಡೆದರು. ದಾಸೋಹ, ಲಾಡು ಪ್ರಸಾದವನ್ನು ಸ್ವೀಕರಿಸಿದರು.