ಮನೆ ರಾಜಕೀಯ ಕೆಂಪೇಗೌಡ ಪ್ರತಿಮೆ ಅನಾವರಣ: ಪಕ್ಷದ ಕಾರ್ಯಕ್ರಮದಂತಿದೆ ಎಂದ ಹೆಚ್ ವಿಶ್ವನಾಥ್

ಕೆಂಪೇಗೌಡ ಪ್ರತಿಮೆ ಅನಾವರಣ: ಪಕ್ಷದ ಕಾರ್ಯಕ್ರಮದಂತಿದೆ ಎಂದ ಹೆಚ್ ವಿಶ್ವನಾಥ್

0

ಮೈಸೂರು(Mysuru): ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಥಾಪಿಸಿರುವ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮವಾಗದೇ ಬಿಜೆಪಿ ಪಕ್ಷದ ಕಾರ್ಯಕ್ರಮದಂತಾಗಿದೆ ಎಂದು ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡುತ್ತಿರುವುದು ಸರ್ಕಾರದ ಹಣದಿಂದ. ಆದ್ದರಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಎಲ್ಲರನ್ನೂ ಪಕ್ಷಾತೀತವಾಗಿ ಕರೆಯಬೇಕಿತ್ತು. ಆದರೆ, ಇವರು ಪಕ್ಷದ ಕಾರ್ಯಕ್ರಮದಂತೆ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಪ್ರತಾಪ್ ಸಿಂಹ ಯೋಚಿಸಿ ಮಾತನಾಡಲಿ:  ಸಿದ್ದರಾಮಯ್ಯ ಹೇಳಿದಂತೆ ಸತೀಶ್ ಜಾರಕಿಹೊಳಿ ಹೇಳುತ್ತಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಈಗಾಗಲೇ ಸತೀಶ್ ಜಾರಕಿಹೊಳಿ ಕ್ಷಮೆ ಕೇಳಿದ್ದಾರೆ. ಆದರೆ, ಪ್ರತಾಪಸಿಂಹ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಸಿದ್ದರಾಮಯ್ಯ ಸಿಎಂ ಆಗಿದ್ದವರು, ಅವರು ಯೋಚಿಸಿ ಮಾತನಾಡಬೇಕು. ಸಿದ್ದರಾಮಯ್ಯ ಯಾವಾಗಲೂ ಸಿದ್ದರಾಮಯ್ಯನೇ ಎಂದು ಪ್ರತಾಪಸಿಂಹಗೆ ಕುಟುಕಿದರು‌.

ಕನಕದಾಸರ ಜಯಂತಿಯನ್ನು ಜಿಲ್ಲಾಡಳಿತ ಉತ್ಪ್ರೇಕ್ಷೆ ಮಾಡಿದೆ. ಕನಕ ಜಯಂತಿ ಮೆರವಣಿಗೆಯ ಕಾರ್ಯಕ್ರಮದಲ್ಲಿ ಡಿಸಿ, ಅಧಿಕಾರಿಗಳು ಭಾಗವಹಿಸಿಲ್ಲ ಎಂದು ಅಸಮಾಧಾನ ಹೊರಹಾಕಿದರು‌.