ಮನೆ ರಾಜಕೀಯ ರಾಜಕೀಯವಾಗಿ ಹತಾಶರಾಗಿರುವ ಎಚ್.ಡಿ‌. ಕುಮಾರಸ್ವಾಮಿ: ಆರಗ ಜ್ಞಾನೇಂದ್ರ

ರಾಜಕೀಯವಾಗಿ ಹತಾಶರಾಗಿರುವ ಎಚ್.ಡಿ‌. ಕುಮಾರಸ್ವಾಮಿ: ಆರಗ ಜ್ಞಾನೇಂದ್ರ

0

ಬೆಂಗಳೂರು(Bengaluru): ರಾಜಕೀಯವಾಗಿ ಹತಾಶರಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ‌. ಕುಮಾರಸ್ವಾಮಿ ಅವರು ಸುಳ್ಳು ಆರೋಪದ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ಸ್ಯಾಂಟ್ರೋ ರವಿ ಗೃಹ ಸಚಿವರ ಮನೆಯಲ್ಲೇ ಹಣದ ಗಂಟು ಬಿಚ್ಚಿ, ಎಣಿಕೆ ಮಾಡುತ್ತಿರುವ ವಿಡಿಯೊ ಇದೆ ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಅವರು, ನಾನು ಜೀವನದಲ್ಲಿ ನೈತಿಕತೆ ಪಾಲಿಸಿಕೊಂಡು ಬಂದಿದ್ದೇನೆ. ಯಾವತ್ತೂ, ಯಾರಿಗೂ ನನ್ನ ಮನೆಗೆ ಬಂದು ಹಣದ ಗಂಟು ಬಿಚ್ಚುವ ಅವಕಾಶ ನೀಡಿಲ್ಲ ಎಂದಿದ್ದಾರೆ.

ಸ್ಯಾಂಟ್ರೋ ರವಿ ಸೇರಿದಂತೆ ಹಲವರು ನನ್ನನ್ನು ಭೇಟಿ ಮಾಡಿರಬಹುದು. ಬರುವ ಎಲ್ಲರ ಹಿನ್ನೆಲೆ ಕುರಿತು ಪೊಲೀಸ್ ಪ್ರಮಾಣಪತ್ರ ಕೇಳಲು ಆಗುವುದಿಲ್ಲ. ಬಂದು ಜತೆಗೆ ನಿಂತು, ಫೋಟೊ ತೆಗೆಸಿಕೊಂಡಿರಬಹುದು ಎಂದಿದ್ದಾರೆ.

ಸ್ಯಾಂಟ್ರೋ ರವಿಯ ಹಿನ್ನೆಲೆ, ಆತನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಮೈಸೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಲಾಗಿದೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.