ಮನೆ ರಾಜ್ಯ ರಾಜ್ಯ  ಮೃಗಾಲಯಗಳಿಂದ 75.72 ಕೋಟಿ ರೂ. ಆದಾಯ

ರಾಜ್ಯ  ಮೃಗಾಲಯಗಳಿಂದ 75.72 ಕೋಟಿ ರೂ. ಆದಾಯ

ಪ್ರವಾಸಿಗರ ಭೇಟಿಯಲ್ಲಿ ಮೈಸೂರು, ಆದಾಯದಲ್ಲಿ ಬನ್ನೇರುಘಟ್ಟ ಪ್ರಥಮ

0

ಮೈಸೂರು(Mysuru): ಕಳೆದ 9 ತಿಂಗಳಲ್ಲಿ  ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಯಲ್ಲಿರುವ ಮೃಗಾಲಯಗಳಿಂದ 75.72 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಂ.ಶಿವಕುಮಾರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಕಳೆದ 2022 ಏ.1 ರಿಂದ ಡಿ.31ರವರೆಗೆ 9 ತಿಂಗಳಲ್ಲಿ ರಾಜ್ಯದ ಎಲ್ಲಾ ಮೃಗಾಲಯಗಳಿಗೆ 52,77,013 ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಮೈಸೂರು ಮೃಗಾಲಯಕ್ಕೆ ಡಿಸೆಂಬರ್ ತಿಂಗಳೊಂದಲ್ಲೇ 5.24 ಲಕ್ಷ ಮಂದಿ ಭೇಟಿ ನೀಡಿರುವುದು ದಾಖಲೆಯಾಗಿದೆ ಎಂದರು.

ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ 25.05 ಲಕ್ಷ ಮಂದಿ ಭೇಟಿ ನೀಡಿದ್ದು, 24.76 ಕೋಟಿ ರೂ.ಆದಾಯ ಬಂದಿದೆ. ಬನ್ನೇರುಘಟ್ಟಕ್ಕೆ 16.12 ಲಕ್ಷ ಮಂದಿ ಭೇಟಿ ನೀಡಿದ್ದು, 42.68 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಸಂದರ್ಶಕರ ಭೇಟಿ ವಿಷಯದಲ್ಲಿ ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಮೊದಲನೇ ಸ್ಥಾನದಲ್ಲಿದ್ದರೆ, ಆದಾಯದಲ್ಲಿ  ಬನ್ನೇರುಘಟ್ಟ ಮೊದಲ ಸ್ಥಾನದಲ್ಲಿದೆ ಎಂದು ತಿಳಿಸಿದರು.

ಕೋವಿಡ್ ನಿಂದ ಮುಂಜಾಗ್ರತಾ ಕ್ರಮವಾಗಿ ಮೃಗಾಲಯಗಳನ್ನು ಮುಚ್ಚಲಾಗಿತ್ತು. ಬಳಿಕ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿತ್ತು. ಆಗ ಮೈಸೂರು ಹಾಗೂ ಬನ್ನೇರುಘಟ್ಟ ಮೃಗಾಲಯಗಳ ಆಂತರಿಕ ಸಂಪನ್ಮೂಲದಿಂದ ಇತರ ಮೃಗಾಲಯಗಳಿಗೆ (ಕಿರು) ಪ್ರಾಣಿಗಳ ಆಹಾರ, ಮೇವು, ಪಶುವೈದ್ಯಕೀಯ ವೆಚ್ಚ, ಸಿಬ್ಬಂದಿ ನೌಕರರ ವೇತನ ಹಾಗೂ ನಿರ್ವಹಣೆ ವೆಚ್ಚವನ್ನು ಭರಿಸಲಾಗಿತ್ತು ಎಂದು ತಿಳಿಸಿದರು.

ಸರ್ಕಾರಕ್ಕೆ ಪ್ರಸ್ತಾವನೆ:

ಮಾನವ- ಪ್ರಾಣಿ ಸಂಘರ್ಷ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ಪ್ರಾಧಿಕಾರದ ಮೃಗಾಲಯಗಳಲ್ಲಿ  ರಕ್ಷಿಸಲಾಗುತ್ತಿದೆ. ಇದರಿಂದ ಪ್ರಾಧಿಕಾರದ ಮೇಲೆ  ಆರ್ಥಿಕವಾಗಿ ಹೊರೆ ಉಂಟಾಗುತ್ತಿದೆ. ರಕ್ಷಿಸಲಾದ ಪ್ರಾಣಿಗಳ ನಿರ್ವಹಣೆ, ಪೋಷಣ, ಆಹಾರ, ಮೇವು, ಪಶು ವೈದ್ಯಕೀಯ ವೆಚ್ಚ, ಪ್ರಾಣಿ ಪಲಕರ ವೇತನಕ್ಕಾಗಿ ಪ್ರತಿ ವರ್ಷ 7 ರಿಂದ 8 ಕೋಟಿ ರೂ ವೆಚ್ಚವಾಗುತ್ತಿದೆ. ಆದ್ದರಿಂದ ರಕ್ಷಿಸಿದ ಪ್ರಾಣಿಗಳ ಪಾಲನೆ, ಪೋಷಣೆಗೆ ಪ್ರತ್ಯೇಕವಾಗಿ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮೃಗಾಲಯಕ್ಕೆ ಬರುವ ವಾಹನಗಳ ನಿಲ್ದಾಣಕ್ಕೆ ರೇಸ್ ಕೋರ್ಸ್ ಆವರಣದಲ್ಲಿರುವ ಸ್ಥಳಾವಕಾಶ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಎಂದು ತಿಳಿಸಿದರು.

ಹೆಚ್ಚುವರಿ 30 ಕೋಟಿ ರೂ. ಅನುದಾನಕ್ಕೆ ಸರ್ಕಾರಕ್ಕೆ ಮನವಿ

2022-23ನೇ ಸಾಲಿನಲ್ಲಿ 115.31 ಕೋಟಿ ರೂ. ಬಜೆಟ್’ಗೆ ಅನುಮೋದನೆ ನೀಡಲಾಗಿದೆ. ಈ ವರ್ಷ ಮಾರ್ಚ್’ವರೆಗೆ ಮೃಗಾಲಯಗಳ ನಿರ್ವಹಣೆಗೆ 30 ಕೋಟಿ ರೂ. ಬೇಕಾಗಿದ್ದು,  ಹೆಚ್ಚುವರಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

 ದೇಣಿಗೆ ಹಾಗೂ ದತ್ತು ಯೋಜನೆಯಡಿ 2022ರ ಏಪ್ರಿಲ್’ನಿಂದ ಡಿಸೆಂಬರ್’ವರೆಗೆ5,557 ಪ್ರಾಣಿ, ಪಕ್ಷಿಗಳನ್ನು ಸಾರ್ವಜನಿಕರು ದತ್ತು ಪಡೆದಿದ್ದು,  ಇದರಿಂದ 1.61 ಕೋಟಿ ರೂ.ಸಂಗ್ರಹವಾಗಿದೆ. ಬೆಳಗಾವಿ ಸೇರಿದಂತೆ ಎಲ್ಲಾ ಮೃಗಾಲಯಗಳಲ್ಲೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಎಂಟ್ರೆನ್ಸ್ ಪ್ಲಾಜಾ:

ವಿಜಯನಗರ ಜಿಲ್ಲೆಯ ಕಮಲಾಪುರದ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯದಲ್ಲಿ ನೂತನವಾಗಿ ಎಂಟ್ರೆನ್ಸ್ ಪ್ಲಾಜಾ ನಿರ್ಮಿಸಲಾಗುತ್ತಿದೆ. 9.34 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, 1ನೇ ಹಂತದ ಕಾಮಗಾರಿಯೂ ಈ ತಿಂಗಳ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಮೈಸೂರಿನ ಜಿಂಕೆಗಳ ಸ್ಥಳಾಂತರ

ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ ಮಾತನಾಡಿ, ಮೈಸೂರು ಮೃಗಾಲಯದ ಮಾಸ್ಟರ್ ಪ್ಲಾನ್ ನಂತರ ಮಾಹಿತಿ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಲಾಗಿದೆ. ಮಾಸ್ಟರ್ ಪ್ಲಾನ್’ನ ಪ್ರಾಣಿ ಸಂಗ್ರಹಣಾ ಮಿತಿಯನ್ನು ಅನುಸರಿಸುವ ಸಲುವಾಗಿ ಹಾಗೂ ಆಡಳಿತಾತ್ಮಕ ದೃಷ್ಟಿಯಿಂದ ಮೈಸೂರಿನ ಜಿಂಕೆಗಳನ್ನು  ಅರಣ್ಯ ಇಲಾಖೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶಕ್ಕೆ ನಿಯಮಾನುಸಾರ ಸ್ಥಳಾಂತರಿಸಲಾಗುತ್ತಿದೆ.