ಮನೆ ಅಪರಾಧ ಮಂಡ್ಯ: ಮದ್ಯದ ಅಮಲಿನಲ್ಲಿ ಮಗಳೆದುರೇ ಪತ್ನಿಯನ್ನು ಕೊಂದ ಪತಿ

ಮಂಡ್ಯ: ಮದ್ಯದ ಅಮಲಿನಲ್ಲಿ ಮಗಳೆದುರೇ ಪತ್ನಿಯನ್ನು ಕೊಂದ ಪತಿ

0

ಮಂಡ್ಯ(Mandya): ಮದ್ಯದ ಅಮಲಿನಲ್ಲಿ ಪತಿಯೇ ಪತ್ನಿಯನ್ನು ಮಗಳೆದುರೇ ಕೊಲೆಗೈದಿರುವ ಭೀಕರ ಘಟನೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಅರಳಕುಪ್ಪೆ ಗ್ರಾಮದ ಶೋಭಾ (43) ಎಂದು ಗುರುತಿಸಲಾಗಿದೆ. ಮನೋಹರ್ (48) ಪತ್ನಿಯನ್ನು ಕೊಲೆಗೈದ ವ್ಯಕ್ತಿ.

23 ವರ್ಷಗಳ ಹಿಂದೆ ಒಂದೇ ಗ್ರಾಮದ ಶೋಭಾ ಹಾಗೂ ಮನೋಹರ್ ಪ್ರೀತಿಸಿ ಪೋಷಕರ ವಿರೋಧದ ನಡುವೆಯೇ ಮದುವೆಯಾಗಿದ್ದರು.

ಇಬ್ಬರು ಮಕ್ಕಳಿದ್ದರೂ ಬೇಜವಾಬ್ದಾರಿಯಿಂದ ಕಂಠಪೂರ್ತಿ ಕುಡಿದು, ಕಲೆಸಕ್ಕೂ ಹೋಗದೇ ಪ್ರತಿನಿತ್ಯ ಪತ್ನಿ ಜೊತೆ ಗಲಾಟೆ‌ ಮಾಡುತ್ತಿದ್ದನು.

ಮಗನಿಗೆ ಸಾಲದ ಕಂತಿನಲ್ಲಿ ತಾಯಿ ಶೋಭಾ ಬೈಕ್ ಕೊಡಿಸಿದ್ದರು. ಕಳೆದ 3 ತಿಂಗಳಿನಿಂದ ಕಂತು ಕಟ್ಟಲು ಸಾಧ್ಯವಾಗಿರಲಿಲ್ಲ. ಮನೋಹರ್‌’ಗೆ ಕರೆ ಮಾಡಿ ಕಂತು ಕಟ್ಟುವಂತೆ ಫೈನಾನ್ಸ್ ಕಂಪನಿಯವರು ಕೇಳುತ್ತಿದ್ದರು. ಮನೆ ಬಳಿಗೆ ಬಂದ ಖಾಸಗಿ ಫೈನಾನ್ಸ್ ಸಿಬ್ಬಂದಿ ಹಣ ಕಟ್ಟುವಂತೆ ಒತ್ತಡ ಹಾಕುತ್ತಿದ್ದರು.

ಈ ವಿಚಾರಕ್ಕೆ ಕುಪಿತಗೊಂಡ ಮನೋಹರ್​ ಮಂಗಳವಾರ ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಗಲಾಟೆ ಮಾಡಿದ್ದಾನೆ. ಪರಸ್ಪರ ಬೈದಾಟದಿಂದ ಜಗಳ ತಾರಕಕ್ಕೇರಿತ್ತು. ಈ ವೇಳೆ ಕುಡುಗೋಲಿನಿಂದ ಮಗಳ ಕಣ್ಣೆದುರೇ ಶೋಭಾಳ ಮೇಲೆ ಹಲ್ಲೆ ನಡೆಸಿದ್ದಾನೆ.

ರಕ್ತದ ಮಡುವಿನಲ್ಲಿದ್ದ ಶೋಭಾ ಸಹಾಯಕ್ಕೆ ಸ್ಥಳೀಯರು ಯಾರೂ ಮುಂದೆ ಬಂದಿಲ್ಲ.  ಸಕಾಲಕ್ಕೆ ಆಂಬ್ಯುಲೆನ್ಸ್‌ ಕೂಡ ಬಾರದೇ ಇದ್ದದ್ದು ಶೋಭಾ ಸಾವಿಗೆ ಕಾರಣವಾಗಿದೆ ಎನ್ನಲಾಗಿದೆ.

ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಸ್ಥಳದಿಂದ ಪರಾರಿಯಾಗಿದ್ದ ಮನೋಹರ್‌’ನನ್ನು ಸ್ಥಳೀಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.