ಮನೆ ಸುದ್ದಿ ಜಾಲ ಧರ್ಮಗಳು ಕಚ್ಚಾಟದ ವೇದಿಕೆಗಳಾಗಿವೆ: ರಂಗಕರ್ಮಿ ಪ್ರಸನ್ನ ಬೇಸರ

ಧರ್ಮಗಳು ಕಚ್ಚಾಟದ ವೇದಿಕೆಗಳಾಗಿವೆ: ರಂಗಕರ್ಮಿ ಪ್ರಸನ್ನ ಬೇಸರ

0

ಮೈಸೂರು(Mysuru): ಧರ್ಮಗಳು ಕಚ್ಚಾಟದ ವೇದಿಕೆಗಳಾಗಿವೆ. ಸತ್ಯ ವಿಚಾರಗಳನ್ನು ಹೇಳದೇ ಮಠ, ಮಂದಿರ, ಮಸೀದಿ, ಚರ್ಚುಗಳು ಕೇವಲ ಕಟ್ಟಡಗಳಾದರೆ, ಅವುಗಳನ್ನು ಯುವ ಮನಸ್ಸುಗಳು ತಿರಸ್ಕರಿಸಬೇಕು ಎಂದು ರಂಗಕರ್ಮಿ ಪ್ರಸನ್ನ ತಿಳಿಸಿದರು.

ಕೆಎಸ್‌’ಒಯು, ಮಹಾಜನ, ಮಹಾರಾಣಿ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ಯುವಜನರಿಗಾಗಿ ಗಾಂಧಿ’ ಉಪನ್ಯಾಸ, ಕೃತಿ ಬಿಡುಗಡೆ, ಗಾಂಧಿ ಬದುಕಿನ ಸಾಕ್ಷ್ಯಚಿತ್ರ ಹಾಗೂ ಛಾಯಾಚಿತ್ರ ಪ್ರದರ್ಶನ ಹಾಗೂ ಖಾದಿ ವಸ್ತುಗಳ ಮಾರಾಟ ಮೇಳದ ‘ಗಾಂಧಿ ಲೋಕ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಶ್ವದಲ್ಲಿ ಎಲ್ಲ ಒಳ್ಳೆಯ ವಿಚಾರ– ವ್ಯಕ್ತಿತ್ವಗಳನ್ನು ಸಂಕೇತಗಳನ್ನಾಗಿ ಮಾಡಿರುವುದಲ್ಲದೇ ಚೌಕಟ್ಟಿನಲ್ಲಿ ಬಂಧಿಸಲಾಗಿದೆ. ನಗರಗಳು ಬೆಳೆಯುತ್ತಿವೆ. ಕಾಡುಗಳು ಅಳಿಯುತ್ತಿವೆ. ಎಲ್ಲವೂ ಮಾರಾಟದ ಸರಕಾಗಿದೆ. ಈ ಮಾರಾಟವನ್ನು ತಪ್ಪಿಸಬೇಕು. ಸತ್ಯ ಅನ್ನಿಸುವುದನ್ನು ಧೈರ್ಯವಾಗಿ ಹೇಳಬೇಕು ಎಂದು ಪ್ರತಿಪಾದಿಸಿದರು.

ಸ್ಥಾವರಗಳನ್ನು ಕಟ್ಟುತ್ತಲೇ ಇರುವುದರಿಂದ ಬರುವ 100 ವರ್ಷದಲ್ಲಿ ಮನುಕುಲ ನಾಶವಾಗಲಿದೆಯೆಂದು ವಿಜ್ಞಾನಿ ಸ್ಟೀಫನ್‌ ಹಾಕಿಂಗ್ ಹೇಳಿದ್ದಾನೆ. ಗಾಂಧಿ ಮಾರ್ಗದ ಕಡೆ ಹೊರಳುವ ಸಮಯ ತುರ್ತಿನ ಸಮಯವಿದು. ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕಿದೆ. 2 ಮೊಬೈಲ್ ಬದಲು ಒಂದು ಬಳಸಿದರೆ ಸಾಕು. ನಾವು ಕೂಡ ಗಾಂಧಿ ಕಡೆಗೆ ಇಡುವ ಒಂದು ಹೆಜ್ಜೆಯಾಗಿದೆ ಎಂದರು.

ಜಂಗಮ ಕ್ರಿಯಾತ್ಮಕ, ಸ್ಥಾವರವೆಂದರೆ ಕಟ್ಟಡ. ಇವೆರಡನ್ನು ಗಾಂಧೀಜಿ ದೈವಿ ಸಂಬಂಧವಾಗಿ ನೋಡಿದರು. ಈ ಎರಡರಲ್ಲೂ ಒಂದು ದೊಡ್ಡದಾದರೆ ಅನಾಹುತ ನಡೆಯುತ್ತದೆ. ಗಾಂಧೀಜಿ ಯಂತ್ರ ವಿರೋಧಿಸುತ್ತಿರಲಿಲ್ಲ. ಇಂದು ಕಂಪ್ಯೂಟರ್‌ನಿಂದ ಕೃತಕ ಬುದ್ಧಿಮತ್ತೆ ಕಾಲಕ್ಕೆ ಬಂದಿದ್ದೇವೆ. ಎಲ್ಲವನ್ನೂ ಒಂದು ಆ್ಯಪ್ ಮಾಡುವುದಾದರೆ ನಮಗೇನು ಕೆಲಸವಿದೆ ಎಂದು ಪ್ರಶ್ನಿಸಿದರು.

ಸಂಕೇತಗಳ ಭ್ರಮೆಯಲ್ಲಿ ಒದ್ದಾಡುವುದನ್ನು ಬಿಡಬೇಕು. ಸರಳ ಜೀವನಶೈಲಿಯ ಮೂಲಕವೇ ಗಾಂಧಿ, ಬಸವ, ಬುದ್ದ, ಅಂಬೇಡ್ಕರ್ ಅವರನ್ನು ಕಾಣಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಗಾಂಧಿ‌ ಸ್ಮಾರಕ ನಿಧಿ ಅಧ್ಯಕ್ಷ ಡಾ.ಊಡೆ ಪಿ. ಕೃಷ್ಣ, ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಬೆಂಗಳೂರು ಗಾಂಧಿ ಭವನದ ಉಪಾಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಡಾ.ಎನ್.ಆನಂದಗೌಡ, ಹಣಕಾಸು ಅಧಿಕಾರಿ ಖಾದರ್ ಪಾಷಾ, ಶೈಕ್ಷಣಿಕ ಡೀನ್ ಕಾಂಬ್ಳೆ‌ ಅಶೋಕ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಅಧ್ಯಯನ ಕೇಂದ್ರದ ಡೀನ್‌ ಡಾ.ರಾಮನಾಥಂ ನಾಯ್ಡು, ಮಹಾತ್ಮ ಗಾಂಧಿ ಅಧ್ಯಯನ ಪೀಠ ನಿರ್ದೇಶಕರಾದ ಡಾ.ಆರ್.ಎಚ್.ಪವಿತ್ರಾ, ಮಹಾಜನ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಬಿ.ಆರ್.ಜಯಕುಮಾರಿ, ಡಾ.ಎನ್.ಆರ್.ಚಂದ್ರೇಗೌಡ, ಪ್ರೊ.ಕೆ.ಎಲ್.ಎನ್.ಮೂರ್ತಿ ಇದ್ದರು.