ಮನೆ ರಾಜಕೀಯ ಬಿಬಿಸಿ ‘ಭ್ರಷ್ಟ ಬಕ್ವಾಸ್ ಕಾರ್ಪೊರೇಷನ್’: ಬಿಜೆಪಿ ವಾಗ್ದಾಳಿ

ಬಿಬಿಸಿ ‘ಭ್ರಷ್ಟ ಬಕ್ವಾಸ್ ಕಾರ್ಪೊರೇಷನ್’: ಬಿಜೆಪಿ ವಾಗ್ದಾಳಿ

0

ನವೆದಹಲಿ: ಬಿಬಿಸಿ ವಿಶ್ವದಲ್ಲೇ ಅತ್ಯಂತ ‘ಭ್ರಷ್ಟ ಬಕ್ವಾಸ್ (ಮೂರ್ಖ) ಕಾರ್ಪೊರೇಷನ್’ ಆಗಿ ಮಾರ್ಪಟ್ಟಿದೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.

ದೆಹಲಿಯ ಬಿಬಿಸಿ ಸಂಸ್ಥೆಯ ಕಚೇರಿಯಲ್ಲಿ ಮಂಗಳವಾರ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿದ್ದು, ತಪಾಸಣೆ ನಡೆಸುತ್ತಿದೆ. ಇದರ ಬೆನ್ನಲ್ಲೇ ಗೌರವ್ ಭಾಟಿಯಾ, ಕಾಂಗ್ರೆಸ್ ಹಾಗೂ ಬಿಬಿಸಿ ವಿರುದ್ಧ ಕಿಡಿಕಾರಿದ್ದು, ದುರಾದೃಷ್ಟವಶಾತ್, ಬಿಬಿಸಿಯ ಪ್ರಚಾರ ಮತ್ತು ಕಾಂಗ್ರೆಸ್ ಕಾರ್ಯಸೂಚಿಗಳು ಒಂದೇ ಆಗಿವೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಕಾರ್ಯನಿರ್ವಹಿಸುವ ಯಾವುದೇ ಮಾಧ್ಯಮ ಸಂಸ್ಥೆಯು ದೇಶದ ನಿಯಮಗಳು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ಆದಾಯ ತೆರಿಗೆ ಇಲಾಖೆಯು ಕಾನೂನುಬದ್ಧವಾಗಿ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿದೆ ಎಂದಿದ್ದಾರೆ.

ಕಾಂಗ್ರೆಸ್ ಆಡಳಿತದಲ್ಲಿ ಸರ್ಕಾರಿ ಸಂಸ್ಥೆಗಳ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದಂತೆ ಐಟಿ ಇಲಾಖೆ ಈಗ ‘ಪಂಜರದ ಗಿಳಿಯಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಬ್ರಿಟನ್‌’ನಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರು ಬಿಬಿಸಿ ಬಗ್ಗೆ ಏನು ಹೇಳಿದ್ದಾರೆಂದು ಒಮ್ಮೆ ನೆನಪಿಸಿಕೊಳ್ಳಬೇಕು. ಥ್ಯಾಚರ್, ಬಿಬಿಸಿಯನ್ನು ‘ಬೋಲ್ಶೆವಿಕ್ ಬ್ರಾಡ್‌ ಕಾಸ್ಟಿಂಗ್ ಕಾರ್ಪೊರೇಷನ್’ ಎಂದು ಹೇಳಿದ್ದರು. ಅಲ್ಲದೆ, ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಕೂಡ ಬಿಬಿಸಿ ಮೇಲೆ ನಿಷೇಧ ಹೇರಿದ್ದರು ಎಂಬುದನ್ನು ಕಾಂಗ್ರೆಸ್ ನೆನಪಿಸಿಕೊಳ್ಳಬೇಕು. ಭಾರತ ಪ್ರತಿ ಸಂಸ್ಥೆಗೆ ತನ್ನ ಕಾನೂನುಗಳ ಅಡಿಯಲ್ಲಿ ಕೆಲಸ ಮಾಡಲು ಅವಕಾಶಗಳನ್ನು ಒದಗಿಸುವ ದೇಶವಾಗಿದೆ. ಬಿಬಿಸಿ ಗುಪ್ತ ಕಾರ್ಯಸೂಚಿಯನ್ನು ಹೊಂದಿಲ್ಲದಿದ್ದರೆ ದೇಶದ ವಿರುದ್ಧ ವಿಷವನ್ನು ಉಗುಳುವುದಿಲ್ಲ ಎಂದು ಕಿಡಿಕಾರಿದ್ದಾರೆ.

ವಿಶ್ವ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಭಾರತವು ಉತ್ತಮ ಸಾಧನೆಗಳನ್ನು ಮಾಡುತ್ತಿದೆ. ಆದರೆ, ಕೆಲವು ವರ್ಗದವರಿಗೆ ಭಾರತದ ಬೆಳವಣಿಗೆಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕಾಂಗ್ರೆಸ್ ಹಾಗೂ ಬಿಬಿಸಿ ವಿರುದ್ಧ ಭಾಟಿಯಾ ಗುಡುಗಿದ್ದಾರೆ. ಭಾರತದಲ್ಲಿ ಪತ್ರಿಕೋದ್ಯಮ ಮಾಡಲು ಬಿಬಿಸಿಗೆ ಎಲ್ಲಾ ಹಕ್ಕುಗಳಿವೆ. ಆದರೆ, ಅವರು ದೇಶದ ಕಾನೂನಿಗೆ ಬದ್ಧರಾಗಿರಬೇಕು ಎಂದು ಭಾಟಿಯಾ ಹೇಳಿದ್ದಾರೆ.

2002ರ ಗುಜರಾತ್‌ ಕೋಮು ಗಲಭೆ ಕುರಿತು ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದಕ್ಕಾಗಿ ಬಿಬಿಸಿ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.