ಮನೆ ಕೃಷಿ ವಿವಿಧ ಸಮಸ್ಯೆ ಪರಿಹಾರಕ್ಕೆ ಒತ್ತಾಯ: ಮೈಸೂರಿನಲ್ಲಿ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನ

ವಿವಿಧ ಸಮಸ್ಯೆ ಪರಿಹಾರಕ್ಕೆ ಒತ್ತಾಯ: ಮೈಸೂರಿನಲ್ಲಿ ರೈತರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆಗೆ ಯತ್ನ

0

ಮೈಸೂರು: ಜಿಲ್ಲೆಯ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ಮೈಸೂರಿನ ಗನ್ ಹೌಸ್ ವೃತ್ತದಿಂದ ಮೆರವಣಿಗೆ ಆರಂಭಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ರೈತರು ಯತ್ನಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಯತ್ನ ತಡೆದ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದ ಅಪಾರ ಜಿಲ್ಲಾಧಿಕಾರಿ ಕವಿತಾ ರಾಜರಾವ್ ಒತ್ತಾಯ ಪತ್ರ ಸ್ವೀಕರಿಸಿದರು. ಜಿಲ್ಲಾಧಿಕಾರಿಗಳು ಮೂರು ದಿನದೊಳಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ರೈತ ಪ್ರತಿನಿಧಿಗಳ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವುದಾಗಿ ಭರವಸೆ ನೀಡಿದ ನಂತರ ಚಳುವಳಿಯನ್ನು  ರೈತರು ಕೈ ಬಿಟ್ಟರು.

ಚಳುವಳಿಯ ನೇತೃತ್ವ ವಹಿಸಿದ ರಾಜ್ಯಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಮಾತನಾಡಿ, ಎಲ್ಲಾ ಸರ್ಕಾರಗಳು ರೈತರನ್ನ ಗುಲಾಮರಂತ್ತೆ ನಡೆಸಿಕೊಳ್ಳುತ್ತಿದ್ದಾರೆ, ತಿನ್ನುವ ಅನ್ನಕ್ಕೆ ಕಷ್ಟ ಬಂದಾಗ ರೈತರ ಬಗ್ಗೆ ಗೌರವ ಬರುತ್ತದೆ, ರೈತರು ಎಂದಿಗೂ ಯಾರಿಗೂ ಹೆದರಬಾರದು ರೈತರ ಮೇಲೆ ದಬ್ಬಾಳಿಕೆ ನಡೆಸುವ ಯಾರೇ ಆದರೂ ಅವರನ್ನು ಮಟ್ಟ ಹಾಕಲು ಸಂಘಟಿತರಾಗಬೇಕು, ಸರ್ಕಾರ ಮಾಡಿದ ಆದೇಶವನ್ನು ಗಾಳಿಗೆ ತೂರಿ ರೈತರನ್ನು ವಂಚಿಸುವ ಸಕ್ಕರೆ ಕಾರ್ಖಾನೆ ಮಾಲೀಕರ ಷಡ್ಯಂತರ ಮಟ್ಟ ಹಾಕಲು ಹೋರಾಟದ ಅವಶ್ಯಕತೆ ಎಂದರು.

ಕಬ್ಬಿನ ಹೆಚ್ಚುವರಿ 150 ರೂ  ಬಣ್ಣಾರಿ ಸಕ್ಕರೆ ಕಾರ್ಖಾನೆಯಿಂದ ಕೊಡಿಸಬೇಕು. ಅರಿಶಿಣ ಬೆಳೆಗೆ ಬೆಲೆ ಕುಸಿತವಾಗಿದ್ದು, ಎಂಇಎಸ್ ಯೋಜನೆಯಲ್ಲಿ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಕಾವೇರಿ – ಕಬಿನಿ  ಅಚ್ಚುಕಟ್ಟು ನಾಲೆಗಳ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ ಕಬ್ಬು ಬಾಳೆ ಇನ್ನಿತರ ಬೆಳೆಗಳ ರಕ್ಷಣೆಗಾಗಿ ಬೇಸಿಗೆಯಲ್ಲಿ ದನ ಕರುಗಳ ಕುಡಿಯುವ ನೀರಿಗಾಗಿ  ಕೆರೆ ಕಟ್ಟೆಗಳನ್ನು ತುಂಬಿಸಲು, ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದ ರೈತರಿಗೆ ನಾಳೆಯಿಂದಲೇ ನೀರು ಹರಿಸುವುದಾಗಿ ಕಬಿನಿ ಅಧಿಕ್ಷಕ ಅಭಿಯಂತರರು ಭರವಸೆ ನೀಡಿದರು.

 ಕೃಷಿ ಪಂಪ್ ಸೆಟ್’ಗಳಿಗೆ ಬೆಳಿಗ್ಗೆ 6 ರಿಂದ ಸಂಜೆ 6 ರವರಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಕನಿಷ್ಠ ಬೆಂಬಲ ಬೆಲೆ ಭತ್ತ ರಾಗಿ ಇತರೆ ಉತ್ಪನ್ನಗಳ ಖರೀದಿ ಕೇಂದ್ರಗಳಲ್ಲಿ, ರೈತರಿಂದ ಖರೀದಿ ಮಿತಿ ವಿಧಿಸಿರುವುದನ್ನು ರದ್ದುಗೊಳಿಸಬೇಕು. ಪ್ರತಿ ರೈತನ ಹೊಲದ ವಿಮೆ ಜಾರಿ ಆಗಬೇಕು. ಬ್ಯಾಂಕ್ ಗಳಲ್ಲಿ ಕೃಷಿ ಸಾಲಕ್ಕೆ  ಸಿಬಿಲ್ ಸ್ಕೋರ್ ಮಾನದಂಡ ನೀತಿ ಕೈ ಬಿಡಬೇಕು. ಕೃಷಿ ಸಾಲ ನೀತಿ ಬದಲಾಗಬೇಕು ರೈತನ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಶೇ 75 ರಷ್ಟು ಸಾಲ ನೀಡಬೇಕು, ಕೃಷಿ ಉತ್ಪಾದನೆಗೆ ಬಡ್ಡಿ ರಹಿತ ಸಾಲ ನೀಡಬೇಕು. ಕಳಪೆ ರಸಗೊಬ್ಬರ ಕೀಟನಾಶಕ ಮಾರಾಟ ಮಾಡುವುದನ್ನು ತಡೆಗಟ್ಟಬೇಕು. ಅಡಿಗೆ ಅನಿಲ (ಗ್ಯಾಸ್) ವಿತರಕರು ಪ್ರತಿ ಸಿಲಿಂಡರ್ ಗೆ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ಗ್ರಾಮೀಣ ಭಾಗದಲ್ಲಿ ಸುಲಿಗೆ ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ರಾಜ್ಯದಲ್ಲಿ ಜಾರಿಗೆ ಬಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೂಡಲೇ ರದ್ದುಗೊಳಿಸಬೇಕು. ಜಿಲ್ಲೆಯಲ್ಲಿ ಸಾವಿರಾರು ರೈತರು ಹತ್ತಾರು ವರ್ಷಗಳಿಂದಲೂ ಸಾಗುವಳಿ ಮಾಡಿಕೊಂಡು ಹೋಗುತ್ತಿರುವ ಜಮೀನುಗಳಿಗೆ ಸಾಗುವಳಿ ಪತ್ರವನ್ನು ನೀಡದೆ ನಿರ್ಲಕ್ಷ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಕಾಡು ಪ್ರಾಣಿಗಳ ಹಾವಳಿಯಿಂದ ನಾಶವಾಗುವ ಪರಿಹಾರ ಧನ ಸಂಪೂರ್ಣ ನಷ್ಟ ಭರಿಸಬೇಕು, ಜೀವ ಹಾನಿಗೆ ಕನಿಷ್ಠ 50 ಲಕ್ಷ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.

ಚಳವಳಿಯಲಿ ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಆತ್ತಹಳ್ಳಿ ದೇವರಾಜ್, ಜಿಲ್ಲಾ ಕಾರ್ಯಾಧ್ಯಕ್ಷ ಹಳ್ಳಿಕೆರೆ ಹುಂಡಿ ಭಾಗ್ಯರಾಜ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಿರಗಸೂರ ಶಂಕರ ಕೆರೆಹುಂಡಿ ರಾಜಣ್ಣ, ಮಹಿಳಾ ಜಿಲ್ಲಾಧ್ಯಕ್ಷೆ ಕಮಲಮ್ಮ ತಾಲೂಕು ಅಧ್ಯಕ್ಷರಾದ ಕುರುಬೂರು ಸಿದ್ದೇಶ್, ಲಕ್ಷ್ಮೀಪುರ ವೆಂಕಟೇಶ್, ಕೋಟೆ ರಾಜೇಶ್, ಹಾಡ್ಯರವಿ, ಪಟೇಲ್ ಶಿವಮೂರ್ತಿ, ರೂಪ, ದೇವಮಣಿ, ಬಿದರಹಳ್ಳಿ ಮಾದಪ್ಪ ,ಮುಖಂಡರಾದ, ಪ್ರಸಾದ್ ನಾಯ್ಕ, ಕುರುಬೂರು ಪ್ರದೀಪ್, ಗೌರಿಶಂಕರ್, ಹಾಲಿನ ನಾಗರಾಜ್, ಅಂಬಳೆ ಮಂಜುನಾಥ್,  ಪಿ ರಾಜು, ಉಡಿಗಾಲ ಮಂಜುನಾಥ್, ಕೋಟೆ ಸುನಿಲ್ ಕುಮಾರ್,ರೇವಣ್ಣ,ಮಹದೇವಸ್ವಾಮಿ ಸೇರಿದಂತೆ ನೂರಾರು ರೈತ ,ರೈತ ಮಹಿಳೆಯರು  ಇದ್ದರು.