ಚಾಮರಾಜನಗರ: ಕೆಎಸ್ಆರ್ಟಿಸಿ ಬಸ್ ಹಳ್ಳಕ್ಕೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿರುವ ಘಟನೆ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಬಳಿ ನಡೆದಿದೆ.
ಮಾಳಿಗನತ್ತ ಗ್ರಾಮದ ಶಿವಮ್ಮ(60) ಹಾಗೂ ಪಿ.ಜಿ.ಪಾಳ್ಯದ ರಮೇಶ್ (50) ಮೃತಪಟ್ಟವರು.ಸೋಮವಾರ ಮಧ್ಯಾಹ್ನ ಕೊಳ್ಳೇಗಾಲದಿಂದ ಬೈಲೂರಿಗೆ ಸಂಚರಿಸುತ್ತಿದ್ದ ಬಸ್, ಕುಡುವಾಳೆ ಹಾಗೂ ಮಾಳಿಗನತ್ತದ ನಡುವಿನ ಮುಳುಗು ಸೇತುವೆಯಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ.ಬಸ್ಸಿನಲ್ಲಿ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.
ಬಸ್ ಬಲಭಾಗಕ್ಕೆ ಉರುಳಿ ಬಿದ್ದಿದ್ದರಿಂದ ಬಲಭಾಗದಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ಹೆಚ್ಚು ಏಟಾಗಿದೆ. ಎಂಟು ಮಂದಿಯ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.’ಬಸ್ನಲ್ಲಿ ಯಾವುದೇ ತಾಂತ್ರಿಕ ದೋಷ ಉಂಟಾಗಿಲ್ಲ. ಚಾಲಕನ ಅಜಾಗರೂಕರೆಯಿಂದ ಅಪಘಾತ ಸಂಭವಿಸಿದೆ‘ ಎಂದು ಕೆಎಸ್ಆರ್ಟಿಸಿ ಚಾಮರಾಜನಗರ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ’ಪ್ರಜಾವಾಣಿ‘ಗೆ ತಿಳಿಸಿದರು.