ಕೋಲ್ಕತ್ತಾ: ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದ ಮೇಲೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬಂಡೋಪಾಧ್ಯಾಯ ಅವರು ಸೋಮವಾರ ಅಮಾನತುಗೊಳಿಸಿದ್ದಾರೆ.
ಸುವೇಂದು ಅಧಿಕಾರಿ ಸೇರಿ ಬಿಜೆಪಿ ಶಾಸಕರಾದ ದೀಪಕ್ ಬುರ್ಮನ್, ಶಂಕರ್ ಘೋಷ್, ಮನೋಜ್ ತಿಗ್ಗಾ ಮತ್ತು ನರಹರಿ ಮಹತೋ ಅವರನ್ನು ಅಮಾನತುಗೊಳಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ರಾಮಪುರಹತ್ ಹತ್ಯಾಕಾಂಡದ ಬಗ್ಗೆ ಚರ್ಚೆಗೆ ಸುವೇಂದು ಅಧಿಕಾರಿ ಪಟ್ಟು ಹಿಡಿದಿದ್ದರು. ಆಗ ಬಿಜೆಪಿ ಮುಖ್ಯ ಸಚೇತಕ ಮನೋಜ್ ತಿಗ್ಗಾ ಮೇಲೆ ಹಲ್ಲೆ ನಡೆಸಲಾಗಿದೆ. ಟಿಎಂಸಿ ಶಾಸಕ ಅಸೀತ್ ಮಜುಂದಾರ್ಗೂ ಗಲಾಟೆಯಲ್ಲಿ ಗಾಯಗಳಾಗಿವೆ. ಈ ಘಟನೆಯ ಬಳಿಕ ಐವರು ಶಾಸಕರನ್ನು ಸದನದಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಪ್ರತಿಪಕ್ಷಗಳು ಕಾನೂನು ಮತ್ತು ಸುವ್ಯವಸ್ಥೆ ಕುರಿತು ಚರ್ಚೆಗೆ ಒತ್ತಾಯಿಸಿದವು. ಸರಕಾರವು ಅದಕ್ಕೆ ನಿರಾಕರಿಸಿತು. ಈ ವೇಳೆ ಮಾತಿನ ಚಕಮಕಿ ನಡೆದಿದ್ದು, ವಿಧಾನಸಭೆಯಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಶಾಸಕರು ಹೊಡೆದಾಡಿಕೊಂಡಿದ್ದಾರೆ.
ಆದರೆ, ಆದರೆ ತೃಣಮೂಲ ನಾಯಕ ಮತ್ತು ರಾಜ್ಯ ಸಚಿವ ಫಿರ್ಹಾದ್ ಹಕೀಮ್ ಬಿಜೆಪಿ ಮೇಲೆ ಆರೋಪ ಹೊರಿಸಿದ್ದಾರೆ.
ವಿಧಾನಸಭೆಯಲ್ಲಿ ಗೊಂದಲ ಸೃಷ್ಟಿಸಲು ಬಿಜೆಪಿ ನಾಟಕವಾಡುತ್ತಿದೆ. ಸದನದೊಳಗೆ ನಮ್ಮ ಕೆಲವು ಶಾಸಕರು ಗಾಯಗೊಂಡಿದ್ದಾರೆ. ಬಿಜೆಪಿಯ ನಡವಳಿಕೆಯನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದ್ದಾರೆ.
ಇನ್ನು ಹೊಡೆದಾಟದಲ್ಲಿ ತೃಣಮೂಲ ಶಾಸಕ ಅಸಿತ್ ಮಜುಂದಾರ್ ಅವರ ಮೂಗಿಗೆ ಗಾಯವಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಹೇಳಲಾಗುತ್ತಿದೆ.
ವಿರೋಧ ಪಕ್ಷದ ನಾಯಕ, ಬಿಜೆಪಿಯ ಸುವೇಂದು ಅಧಿಕಾರಿ ತನಗೆ ಗುದ್ದಿದ್ದಾರೆ ಎಂದು ಮಜುಂದಾರ್ ಆರೋಪಿಸಿದ್ದಾರೆ.