ಮನೆ ಅಪರಾಧ ಸುಪಾರಿ ಕೊಟ್ಟು ಅಳಿಯನ ಕೊಲ್ಲಿಸಿದ ಮಾವ

ಸುಪಾರಿ ಕೊಟ್ಟು ಅಳಿಯನ ಕೊಲ್ಲಿಸಿದ ಮಾವ

0

ಯಾದಾದ್ರಿ ಭುವನಗಿರಿ(Bhuvanagiri): ತನ್ನ ಮಗಳನ್ನು ಪ್ರೇಮ ವಿವಾಹವಾಗಿದ್ದಕ್ಕೆ ಕೋಪಗೊಂಡ ತಂದೆ ಅಳಿಯನನ್ನು  ಸುಪಾರಿ ಕೊಟ್ಟು ಹತ್ಯೆ ಮಾಡಿಸಿರುವ ಘಟನೆ ಜಿಲ್ಲೆಯ ಭುವನಗಿರಿ ನಗರದಲ್ಲಿ ನಡೆದಿದ್ದು, ಈ ಮರ್ಯಾದ ಹತ್ಯೆ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ಪಟ್ಟಣದಲ್ಲಿ ಶುಕ್ರವಾರ ನಾಪತ್ತೆಯಾಗಿದ್ದ ಎರುಕುಲ ರಾಮಕೃಷ್ಣ (32) ಸಿದ್ದಿಪೇಟ್ ಜಿಲ್ಲೆಯ ಲಕುದರಂ ಉಪನಗರದ ಪದ್ದಮ್ಮತಲ್ಲಿ ದೇವಸ್ಥಾನದ ಬಳಿ ನಿರ್ಮಾಣ ಹಂತದಲ್ಲಿರುವ ರೈಲು ಮಾರ್ಗದ ಬಳಿ ಅವರ ಮೃತದೇಹ ಪತ್ತೆಯಾಗಿದೆ.

ತನ್ನ ಮಗಳನ್ನು ಪ್ರೇಮ ವಿವಾಹವಾಗಿದ್ದಕ್ಕೆ ರಾಮಕೃಷ್ಣನನ್ನು ಆಕೆಯ ಚಿಕ್ಕಪ್ಪ ವೆಂಕಟೇಶ್ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಪತ್ನಿ ಭಾರ್ಗವಿ ನೀಡಿದ ದೂರಿನ ಮೇರೆಗೆ ಅಮೃತಯ್ಯ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ ಸಂಪೂರ್ಣ ಸತ್ಯ ಬೆಳಕಿಗೆ ಬಂದಿದೆ.

ಏನಿದು ಘಟನೆ: ಭುವನಗಿರಿ ಜಿಲ್ಲೆಯ ವಾಲಿಗೊಂಡ ಮಂಡಲದ ಲಿಂಗರಾಜುಪಲ್ಲಿಯ ನಿವಾಸಿ ಎರುಕುಲ ರಾಮಕೃಷ್ಣ 10 ವರ್ಷಗಳ ಹಿಂದೆ ಗೃಹರಕ್ಷಕನಾಗಿ ಸೇವೆಗೆ ಸೇರಿದ್ದರು. ಮೊದಲು ವಾಲಿಗೊಂಡದಲ್ಲಿ ಕೆಲಸ ಮಾಡಿದ ಅವರು ನಂತರ ಯಾದಗಿರಿಗುಟ್ಟ ಠಾಣೆಗೆ ವರ್ಗಾವಣೆಗೊಂಡಿದ್ದರು. ಯಾದಗಿರಿಗುಟ್ಟ ಮಂಡಲ ಗೌರಾಯಿಪಲ್ಲಿಯ ಪಲ್ಲೆಪಾಟಿ ವೆಂಕಟೇಶ್ ವಿಆರ್‌ವಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ತಾಲೂಕು ಕೇಂದ್ರದಲ್ಲಿ ವಾಸವಾಗಿದ್ದರು. ರಾಮಕೃಷ್ಣ ಮನೆಯ ಪಕ್ಕದಲ್ಲೇ ವಾಸವಾಗಿರುವ ವೆಂಕಟೇಶ್​ ಎಂಬುವರ ಮಗಳು ಭಾರ್ಗವಿ ಜತೆಗಿನ ಪರಿಚಯ ಬಳಿಕ ಪ್ರೇಮವಾಗಿ ಬದಲಾಗಿತ್ತು.

ಎರಡು ವರ್ಷಗಳ ಹಿಂದೆ ಇಬ್ಬರು ಲವ್​ ಮ್ಯಾರೇಜ್​ ಆಗಿದ್ದರು. 10 ತಿಂಗಳ ಹಿಂದೆ ಭುವನಗಿರಿಗೆ ಬಂದು ವಾಸವಾಗಿದ್ದ ದಂಪತಿಗೆ ಆರು ತಿಂಗಳ ಹಿಂದೆ ಹೆಣ್ಣು ಮಗುವಾಗಿದೆ. ಮಗಳ ಪ್ರೇಮ ವಿವಾಹ ಇಷ್ಟವಾಗದ ವೆಂಕಟೇಶ್ ತನ್ನ ಅಳಿಯನ ಮೇಲೆ ಕೋಪ ಬೆಳೆಸಿಕೊಂಡಿದ್ದರು. ಮದುವೆಯಾದ ಬೆನ್ನಲ್ಲೇ ರಾಮಕೃಷ್ಣನ ಮೇಲೆ ದಾಳಿ ಮಾಡಲು ಮುಂದಾಗಿದ್ದರು. ಆದ್ರೆ ಇತ್ತೀಚೆಗಷ್ಟೇ ತನ್ನ ಆಸ್ತಿಯಲ್ಲಿ ಪಾಲು ಕೋರಿ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಮಗಳು ಹೇಳಿದ್ದಕ್ಕೆ ಅಳಿಯನನ್ನು ಕೊಲೆ ಮಾಡಿಸಿದ್ದಾರೆ ಎಂದು ಪೊಲೀಸರ ತನಿಖೆ ಮೂಲಕ ತಿಳಿದುಬಂದಿದೆ.

ರಾಮಕೃಷ್ಣ ಮತ್ತು ಭಾರ್ಗವಿ ಆಗಸ್ಟ್ 2020ರಲ್ಲಿ ನಲ್ಗೊಂಡ ಜಿಲ್ಲೆಯ ಚೆರ್ವುಗಟ್ಟು ಜಡಲದಲ್ಲಿರುವ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಂತರ ಈ ದಂಪತಿ ಕೆಲವು ತಿಂಗಳುಗಳ ಕಾಲ ಸ್ವಗ್ರಾಮ ಲಿಂಗರಾಜುಪಲ್ಲಿ ಮತ್ತು ಕೊನ್ನಾಲು ನಲ್ಗೊಂಡದಲ್ಲಿ ವಾಸಿಸುತ್ತಿದ್ದರು. ಆ ವೇಳೆ ಭಾರ್ಗವಿಯನ್ನು ಆಕೆಯ ತಂದೆ ವೆಂಕಟೇಶ್ ಎರಡು ಬಾರಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿದ್ದರು. ರಾಮಕೃಷ್ಣನನ್ನು ಬಿಟ್ಟು ಬರುವಂತೆ ಆಕೆಯ ತಂದೆ ಒತ್ತಾಯಿಸಿದ್ದನು. ಆದರೂ ತಂದೆಯ ಮಾತನ್ನು ಕೇಳದೆ ಮತ್ತೆ ಗಂಡನೊಂದಿಗೆ ಜೀವನ ಸಾಗಿಸುತ್ತಿದ್ದರು. 10 ತಿಂಗಳಿಂದ ಪತ್ನಿ ಮತ್ತು ಮಗುವಿನೊಂದಿಗೆ ಭುವನಗಿರಿಯ ಟಾಟಾನಗರದಲ್ಲಿ ನೆಲೆಸಿರುವ ರಾಮಕೃಷ್ಣ ರಿಯಲ್ ಎಸ್ಟೇಟ್ ವ್ಯವಹಾರ ಆರಂಭಿಸಿದ್ದರು.

ಈ ತಿಂಗಳು 15ರಂದು ಜಮ್ಮಾಪೂರ್​ ನಿವಾಸಿ ಅಮೃತಯ್ಯ ಜೊತೆ ರಾಮಕೃಷ್ಣ ಮನೆಯಿಂದ ಹೊರ ಹೋಗಿದ್ದಾರೆ. ದಿನಪೂರ್ತಿ ಕಳೆದ್ರೂ ಪತಿ ಮನೆಗೆ ಬಾರದ ಹಿನ್ನೆಲೆ ಗಾಬರಿಗೊಂಡ ಭಾರ್ಗವಿ ಈ ತಿಂಗಳ 16ರಂದು (ಮರುದಿನ) ಭಾರ್ಗವಿ ಪಟ್ಟಣ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಅಮೃತಯ್ಯನನ್ನು ವಿಚಾರಣೆ ನಡೆಸಿದಾಗ ಸಿದ್ದಿಪೇಟೆಗೆ ಸೇರಿದ್ದ ಲತೀಫ್​ ಗ್ಯಾಂಗ್​ ರಾಮಕೃಷ್ಣನನ್ನು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ರಾಮಕೃಷ್ಣ ಹತ್ಯೆ ಮಾಡುವುದಕ್ಕೆ 10 ಲಕ್ಷ ರೂಪಾಯಿ ನೀಡುವುದಾಗಿ ಮಾವ ವೆಂಕಟೇಶ್​ ಲತೀಫ್​ ಗ್ಯಾಂಗ್ ಜೊತೆ ಒಪ್ಪಂದ ಮಾಡಿಕೊಂಡಿದ್ದನು. ಅದರಂತೆ ಅಡ್ವಾನ್ಸ್​ ಆಗಿ 6 ಲಕ್ಷ ರೂಪಾಯಿ ನೀಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಯೋಜನೆಯಂತೆ ರಾಮಕೃಷ್ಣನನ್ನು ಅಮೃತಯ್ಯ ಗುಂಡಾಲದ ನಿಂಬೆ ತೋಟಕ್ಕೆ ಕರೆದೊಯ್ದಿದ್ದಾರೆ. ಅಲ್ಲಿ ಹತ್ಯೆ ಮಾಡಲು ಕಾಯುತ್ತಿದ್ದ ಲತೀಫ್​ ಗ್ಯಾಂಗ್​ ರಾಮಕೃಷ್ಣನ ಮೇಲೆ ಮಚ್ಚಿ ಮತ್ತು ಸುತ್ತಿಗೆಯಿಂದ ಹಲ್ಲೆ ಮಾಡಿದ್ದಾರೆ. ರಾಮಕೃಷ್ಣನನ್ನು ಬರ್ಬರವಾಗಿ ಕೊಲೆ ಮಾಡಿದ ಲತೀಫ್​, ಆತನ ಪತ್ನಿ ದಿವ್ಯ, ಅಫ್ಸರ್​, ಮಹೇಶ್ ಆತನ ಮೃತದೇಹವನ್ನು ಗೋಣಿಚೀಲದಲ್ಲಿ ತುಂಬಿ ಕಾರಿನ ಮೂಲಕ ಸಿದ್ದಿಪೇಟೆಗೆ ಕೊಂಡೊಯ್ದಿದ್ದಾರೆ. ಶನಿವಾರ ಮುಂಜಾನೆ 4 ಗಂಟೆ ಸುಮಾರಿಗೆ ರಾಮಕೃಷ್ಣ ದೇಹವನ್ನು ಲಕುದಾರಂನಲ್ಲಿ ಹೂತಿ ಹಾಕಿದ್ದಾರೆ. ಅಮೃತಯ್ಯ ನೀಡಿದ ಮಾಹಿತಿ ಮೇರೆಗೆ ಲತೀಫ್​ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದ್ದು, ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಲ್ಲಿ ಒಟ್ಟು 11 ಮಂದಿ ಭಾಗಿಯಾಗಿದ್ದರು. ಲತೀಫ್, ದಿವ್ಯಾ, ಅಫ್ಸರ್ ಮತ್ತು ಮಹೇಶ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಏಳು ಮಂದಿ ಪರಾರಿಯಾಗಿದ್ದಾರೆ ಎಂದು ಎಸಿಪಿ ತಿಳಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದ ಎರಡನೇ ಮರ್ಯಾದಾ ಹತ್ಯೆ ಪ್ರಕರಣ ಇದಾಗಿದೆ.