ಮನೆ ಯೋಗಾಸನ ಯೋಗದ ಹಂತಗಳು

ಯೋಗದ ಹಂತಗಳು

0

ಸಾಧನೆ ಗುರಿ ಹೇಗೆ ಮುಖ್ಯವೋ ಸಾಧನೆಯ ಮಾರ್ಗವೂ ಅಷ್ಟೇ ಮುಖ್ಯ. ಪತಂಜಲಿ ಆತ್ಮ ಸಾಧನೆಗಾಗಿ ಅಷ್ಟ (ಎಂಟು) ಅಂಗಗಳಿರುವ ಯೋಗವನ್ನು ಹೇಳಿದ್ದಾರೆ.

೧. ಯಮ (ಸಾರ್ವತ್ರಿಕ ನೀತಿ-ನಿಯಮಗಳು) ೨. ನಿಯಮ (ಶಿಸ್ತಿನಿಂದ ಆತ್ಮ ಶುದ್ಧೀಕರಣ) ೩. ಆಸನ (ದೇಹದ ನಿಲುಮೆ) ೪. ಪ್ರಾಣಾಯಾಮ (ಉಚ್ಛ್ವಾಸ ನಿಚ್ಛ್ವಾಸಗಳ ಕ್ರಮಬದ್ಧ ಹತೋಟಿ) ೫. ಪ್ರತ್ಯಾಹಾರ (ಇಂದ್ರಿಯಗಳ ಮತ್ತು ಇಂದ್ರೀಯಾರ್ಥಗಳ ಪ್ರಾಬಲ್ಯದಿಂದ ಮನಸ್ಸಿನ ಬಿಡುಗಡೆ) ೬. ಧಾರಣ (ಕೇಂದ್ರೀಕರಣ) ೭. ಧ್ಯಾನ (ಜಪ) ಮತ್ತು ೮. ಸಮಾಧಿ (ಜಪದ ಧ್ಯೇಯವಾದ ಪರಮಾತ್ಮನಲ್ಲಿ ಸಾಧಕನ ಐಕ್ಯ.)

ಯಮ ಮತ್ತು ನಿಯಮಗಳು ಯೋಗಿಯ ಕಾಮ ಮತ್ತು ಉದ್ವೇಗಗಳನ್ನು ನಿಗ್ರಹಿಸಿ ಸಮಾಜದಲ್ಲಿಯ ಇತರರೊಡನೆ ಸಮರಸವಾಗಿರುವಂತೆ ಮಾಡುತ್ತದೆ. ಆಸನವೂ ದೇಹವನ್ನು ಆರೋಗ್ಯಕರವಾಗಿ ಮತ್ತು ಬಲತರವಾಗಿ ಇರಿಸಿ ಪ್ರಕೃತಿಯೊಡನೆಗೆ ಸಮರಸವಾಗಿರುವಂತೆ ಮಾಡುತ್ತದೆ. ಅಂತಿಮವಾಗಿ ಯೋಗಿಯ ದೇಹ ಭಾವದಿಂದ ಮುಕ್ತನಾಗುತ್ತಾನೆ. ದೇಹವನ್ನು ಗೆದ್ದು ಆತ್ಮಕ್ಕೆ ಅನುಕೂಲವಾದ ವಾಹನದಂತೆ ಮಾಡುತ್ತಾನೆ. ಈ ಮೊದಲು ಮೂರು ಹಂತಗಳು ಬಹಿರಂಗ ಸಾಧನೆಗಳು.

ಮುಂದಿನ ಎರಡು ಹಂತಗಳು ಪ್ರಾಣಾಯಾಮ ಮತ್ತು ಪ್ರತ್ಯಾಹಾರ. ಇವು ಉಸಿರಾಟವನ್ನು ಕ್ರಮಗೊಳಿಸಿ ಮನಸ್ಸಿನ ಮೇಲೆ ಹತೋಟಿ ಕೊಡುತ್ತದೆ. ಇದು ವಿಷಯೇಂದ್ರಿಗಳಿಂದ ಇಂದ್ರಿಗಳನ್ನು ಮುಕ್ತಗೊಳಿಸುತ್ತದೆ. ಇವೆರಡು ಅಂತರಂಗ ಸಾಧನೆಯ ಅಂಗಗಳು.

ಧ್ಯಾನ, ಧಾರಣಾ, ಸಮಾಧಿ – ಇವು ಆತ್ಮನ ಅಂತರಂಗದೊಳಕ್ಕೆ ಕೊಂಡೊಯ್ಯುತ್ತದೆ. ಯೋಗಿಯು ದೇವರನ್ನು ಹುಡುಕಲು ಸ್ವರ್ಗದ ಕಡೆ ನೋಡುವುದಿಲ್ಲ. ಆತನಿಗೆ ದೇವರು ಅಂತರಾತ್ಮನಾದ್ದರಿಂದ ಅವನು ಒಳಗೆ ಇದ್ದಾನೆಂದು ಗೊತ್ತು. ಈ ಕೊನೆ ಹಂತವು ಯೋಗಿಯನ್ನು ತನ್ನೊಂದಿಗೂ ಸೃಷ್ಟಿಕರ್ತನೊಂದಿಗೂ ಹೊಂದಿಕೊಳ್ಳುವಂತೆ ಮಾಡುತ್ತದೆ. ಈ ಹಂತಗಳು ಅಂತರಾತ್ಮ ಸಾಧನೆಗಳಿಂದ ಕರಿಯಲ್ಪಟ್ಟಿದೆ.

ಧೀರ್ಘವಾದ ಧ್ಯಾನದಿಂದ ಜ್ಞಾತೃ, ಜ್ಞಾನ, ಮತ್ತು ಜ್ಞೇಯ ಒಂದೇ ಆಗುತ್ತದೆ. ದ್ರಷ್ಟಾರನ ದೃಷ್ಟಿ ಮತ್ತು ದೃಷ್ಟ ಇದಕ್ಕೆ ಪ್ರತ್ಯೇಕ ಅಸ್ತಿತ್ವವಿಲ್ಲ. ಒಬ್ಬ ಮಹಾ ಗಾಯಕದ ಸಂಗೀತಗಾರ ತನ್ನ ವಾದ್ಯ ಮತ್ತು ಸಂಗೀತದೊಡನೆ ಐಕ್ಯವಾಗುವಂತೆ ಧ್ಯಾನಪರನಾದಾಗ ಯೋಗಿಯು ತಾನೇ ತಾನಾಗಿ “ಸ್ವ-ಭಾವ”ವನ್ನು ಹೊಂದಿ ಪರಮಾತ್ಮನ ಅಂಶವಾದ ತನ್ನ ಆತ್ಮವನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ.

ಸೃಷ್ಟಿಕರ್ತನೆಡೆಗೆ ಹೋಗಲು ಮಾನವನಿಗೆ ವಿವಿಧ ಮಾರ್ಗಗಳಿವೆ. ಕ್ರಿಯಾಪರನಾದ ಮನುಷ್ಯನು ಸಾಧನೆಯನ್ನು “ಕರ್ಮಯೋಗ”ದ ಮೂಲಕ ಕಾಣುತ್ತಾನೆ. ಈ ಮೂಲಕ ಅವನು ಕಾಯಕ ಮತ್ತು ಕರ್ತವ್ಯಗಳಿಂದ ತನ್ನ ದೈವಿಸ್ವಭಾವವನ್ನೇ ಸಾಧಿಸುತ್ತಾನೆ. ಭಾಚನಾಪರನಾದವನು ʼಭಕ್ತಿ ಮಾರ್ಗʼದಿಂದ  ಇದನ್ನು ಪಡೆಯುತ್ತಾನೆ. ಈ ಮೂಲಕ ಭಗವಂತನ ವಿಚಾರದಲ್ಲಿ ಭಕ್ತಿ ಮತ್ತು ಪ್ರೇಮದಲ್ಲಿ ಸಾಧನೆಯನ್ನುಕಾಣುತ್ತಾನೆ. ಬುದ್ದಿಪರನಾದವನು ಜ್ಞಾನ ಮಾರ್ಗವನ್ನು ಅನುಸರಿಸುವುದರಿಂದ ಅವನಿಗೆ ಜ್ಞಾನದ ಮೂಲಕ ಸಾಧನೆ ಸಿಗುತ್ತದೆ. ಧ್ಯಾನಾಸಕ್ತನಾದವನು ʼಯೋಗ ಮೃಗʼವನ್ನು ಅನುಸರಿಸಿ ಚಿತ್ತ ನಿರೋಧದಿಂದ ತನ್ನ ದೈವೀಸ್ವಭಾವವನ್ನು ಸಾಧಿಸುತ್ತಾನೆ.

ವಿವೇಕದಿಂದ ಸತ್ಯ-ಅನೃತದ, ನಿತ್ಯ-ಅನಿತ್ಯದ, ಶ್ರೇಯಸ್ಕರ-ಸುಖಕರದ ವ್ಯತ್ಯಾಸಗಳನ್ನು ಕಂಡುಕೊಳ್ಳುವವನು. ಆನಂದ ಪಡುತ್ತಾನೆ. ನಿಜವಾದ ಪ್ರೇಮವೇನೆಂದು ಅರಿತು ದೇವನ ಸೃಷ್ಟಿಯಲ್ಲಿ ಎಲ್ಲರನ್ನೂ ಪ್ರೇಮಿಸುವವನಂತೂ ಬಹುಪುಣ್ಯವಂತ. ಅದಕ್ಕಿಂತ ಪುಣ್ಯವಂತನೆಂದರೆ ಸಪ್ರೇಮದಿಂದ ಇತರರ ಕಲ್ಯಾಣಕ್ಕೆ ನಿಸ್ಪೃಹತೆಯಿಂದ ಕೆಲಸ ಮಾಡುವವನು. ಆದರೆ

ಯಾರು ತನ್ನ ಶರೀರದಲ್ಲಿ ಜ್ಞಾನ, ಪ್ರೇಮಾ, ನಿಸ್ಪೃಹ ಸೇವಾ ಭಾಗಗಳನ್ನು ಹೊಂದಿರುವವನೋ ಅವನು ಗಂಗಾ-ಯಮುನಾ-ಸರಸ್ವತಿಗಳ ಸಂಗಮ ಯಾತ್ರಸ್ಥಳದಂತೆ ಪವಿತ್ರನಾಗುತ್ತಾನೆ. ಯಾರು ಆತನನ್ನು ಸಂದರ್ಶಿಸಿದರೋ ಶಾಂತರಾಗುತ್ತಾರೆ, ಶುದ್ದರಾಗುತ್ತಾರೆ.

ಮನಸ್ಸು ಇಂದ್ರಿಯಗಳ ಚಕ್ರವರ್ತಿ, ಯಾವನು ತನ್ನ ಮನಸ್ಸು, ಇಂದ್ರಿಯಗಳು, ಅಕಾಂಕ್ಷೆಗಳ, ಯೋಜನೆಗಳು, ತರ್ಕ-ಇವನು ಜಯಿಸಿರುತ್ತಾನೋ ಆತನು ಮಾನವವರ್ಗದಲ್ಲೇ ಚಕ್ರವರ್ತಿ. ಅಂಥ ವ್ಯಕ್ತಿ ರಾಜಯೋಗಕ್ಕೆ ಅಧಿಕಾರಿ ಮತ್ತು ವಿಶ್ವಶಕ್ತಿಯೊಡನೆ ಐಕ್ಯವಾಗಲು ಅರ್ಹ. ಆತನಲ್ಲಿ ಆಂತರಿಕ ತೇಜಸ್ಸು ರೂಢವಾಗಿರುತ್ತದೆ.

ಯಾವನು ತನ್ನ ಮನಸ್ಸನ್ನು ಜಯಿಸಿದ್ದಾನೋ ಆತನು ರಾಜಯೋಗಿ. ರಾಜಯೋಗ ಎಂದರೆ ಸಂಪೂರ್ಣ ಆತ್ಮನಿಗ್ರಹವುಳ್ಳವನು ಎಂದರ್ಥ. ಮನಸ್ಸನ್ನು ನಿಗ್ರಹಿಸುವ ಕ್ರಮಗಳನ್ನು ತನ್ನ ಸೂತ್ರಗಳಲ್ಲಿ ಪತಂಜಲಿ ಹೇಳಿದ್ದರೂ ಈ ಶಾಸ್ತ್ರಕ್ಕೆ ರಾಜಯೋಗವೆಂದು ಕರೆಯದೆ “ಅಷ್ಟಾಂಗ ಯೋಗ”ವೆಂದು ಕರೆದಿದ್ದಾರೆ. ಅದು ಆತ್ಮದ ಮೇಲೆ ಸಂಪೂರ್ಣ ಸೌಮ್ಯ ದೊರಕಿಸಿಕೊಡುವುದರಿಂದ ಈ ಶಾಸ್ತ್ರವನ್ನು ʼರಾಜಯೋಗʼವೆಂದು ಕರೆಯುವರು.

ಹಠಯೋಗಪ್ರದೀಪಿಕೆಯ ಲೇಖನಾದ ಸ್ವಾತ್ಮಾರಾಮನೆಂದು ಯೋಗಿಯು ಇದೇ ಮಾರ್ಗವನ್ನು ಕಷ್ಟಕರವಾದ ಶಿಸ್ತನ್ನು ನಿಯಮಿಸುವುದರಿಂದ ʼಹಠಯೋಗʼ ಎಂದು ಕರೆದಿದ್ದಾರೆ.

ಸಾಮಾನ್ಯವಾಗಿ ರಾಜಯೋಗ ಮತ್ತು ಹಠಯೋಗಗಳು ಅತ್ಯಂತಿಕ ಭೇದವುಳ್ಳದೆಂದು ನಂಬಿದ್ದಾರೆ. ಎಂದರೆ ಪತಂಜಲಿ ಯೋಗ ಸೂತ್ರಗಳು ಆಧ್ಯಾತ್ಮಿಕ ಶಿಕ್ಷಣವನ್ನು ಸ್ವಾತ್ಮಾರಾಮನು ಹಠಯೋಗದ ಪ್ರದೀಪಿಕೆಯ ದೈಹಿಕ ಶಿಕ್ಷಣವನ್ನು ಬೋಧಿಸುತ್ತವೆಂಬುದು ಸಾಮಾನ್ಯ ತಿಳವಳಿಕೆ. ಆದರೆ ಇದು ಹಾಗಲ್ಲ ಹಠಯೋಗ ಮತ್ತು ರಾಜಯೋಗಗಳು ಮುಕ್ತಿ ಸಾಧನೆಯ ಮಾರ್ಗದಲ್ಲಿ ಪರಸ್ಪರ ಪೂರಕಗಳು. ಹೇಗೆ ಪರ್ವತಾರೋಹಿಯೂ ಹಿಮಾಲಯ ಪರ್ವತ ಶಿಖರಗಳನ್ನು ಹತ್ತಲು ನಿಚ್ಚಣಿಕೆಗ, ಹಗ್ಗ, ಲೋಹದ ಕೊಕ್ಕಿ, ಇವುಗಳ ಜೊತೆಗೆ ದೇಹ ಶಕ್ತಿ ಮತ್ತು ಶಿಕ್ಷಣ ಬಯಸುವಂತೆ ಯೋಗಸಾಧಕನು, ಸ್ವಾತ್ಮಾರಾಮನು ಹೇಳುವ ಹಠಯೋಗ ಜ್ಞಾನ ಮತ್ತು ಶಿಕ್ಷಣದಿಂದ ಪತಂಜಲಿ ಹೇಳುವ ರಾಜಯೋಗದ ಶಿಖರವನ್ನು ಹತ್ತಬೇಕಾಗುತ್ತದೆ.

ಯೋಗದ ಈ ಮಾರ್ಗ ಮಿಕ್ಕ ಇತರ ಮೂರು ಮಾರ್ಗಗಳಿಗೆ ಚಿಲುಮೆಯಿದ್ದಂತೆ. ಅದು ಮನಸ್ಸಿಗೆ ಶಾಂತಿಯನ್ನು ತಂದು, ಎಲ್ಲಾ ಮಾರ್ಗಗಳೂ ಒಂದಾಗಿ ಸೇರುವ ಭಗವಂತನಲ್ಲಿ ಶರಣಾಗತಿ ಹೊಂದಲು ಸಹಾಯ ಮಾಡುತ್ತದೆ.