ಮನೆ ರಾಷ್ಟ್ರೀಯ ಯುದ್ಧಪೀಡಿತ ಇಸ್ರೇಲ್ ನಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 235 ಭಾರತೀಯರು

ಯುದ್ಧಪೀಡಿತ ಇಸ್ರೇಲ್ ನಿಂದ 2ನೇ ವಿಮಾನದಲ್ಲಿ ತಾಯ್ನಾಡಿಗೆ ಬಂದಿಳಿದ 235 ಭಾರತೀಯರು

0

ನವದೆಹಲಿ: ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಇಸ್ರೇಲ್‌ ನಿಂದ 235 ಭಾರತೀಯ ಪ್ರಜೆಗಳನ್ನು ಕರೆತರುವ 2ನೇ ವಿಮಾನ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು.

ನಿನ್ನೆ  ಆಪರೇಷನ್ ಅಜಯ್ ಕಾರ್ಯಾಚರಣೆಯಡಿ 212 ಭಾರತೀಯ ಪ್ರಜೆಗಳನ್ನು ಸಂಘರ್ಷ ಪೀಡಿತ ದೇಶದಿಂದ ಸ್ವದೇಶಕ್ಕೆ ಮರಳಿ ಕರೆತರಲಾಯಿತು.

ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಾರತೀಯ ಪ್ರಜೆಗಳನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜಕುಮಾರ್ ರಂಜನ್ ಸಿಂಗ್ ಬರಮಾಡಿಕೊಂಡರು.

ಇದಕ್ಕೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ 235 ಭಾರತೀಯರನ್ನು ಹೊತ್ತ ವಿಮಾನ ಇಸ್ರೇಲ್ ನ ಟೆಲ್ ಅವೀವ್ ನಿಂದ ಟೇಕ್ ಆಫ್ ಆಗುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಹಿತಿ ಹಂಚಿಕೊಂಡಿದ್ದರು.

ಇಸ್ರೇಲ್‌ ನಿಂದ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಸರ್ಕಾರ ಅಕ್ಟೋಬರ್ 11 ರಂದು ‘ಆಪರೇಷನ್ ಅಜಯ್’ ಕಾರ್ಯಾಚರಣೆ ಪ್ರಾರಂಭಿಸಿತು. ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗ ಏರ್ ಇಂಡಿಯಾ ಮತ್ತು ಇತರ ಏರ್‌ ಲೈನ್ಸ್ ತನ್ನ ಎಲ್ಲಾ ವಾಣಿಜ್ಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ ನಂತರ ಈ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ವಿಶೇಷ ಚಾರ್ಟರ್ಡ್ ವಿಮಾನಗಳು ಭಾರತೀಯರನ್ನು ಮರಳಿ ಕರೆತರುತ್ತಿವೆ.