ಮನೆ ಅಪರಾಧ ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ- ನಾದಿನಿಯರ ಜಗಳ: ಕೊಲೆಯಲ್ಲಿ ಅಂತ್ಯ

ನಿಂಬೆಹಣ್ಣಿಗಾಗಿ ಸೊಸೆ ಜೊತೆ ಅತ್ತೆ- ನಾದಿನಿಯರ ಜಗಳ: ಕೊಲೆಯಲ್ಲಿ ಅಂತ್ಯ

0

ಪೂರ್ವ ಚಂಪಾರಣ್(Poorva Champaran): ನಿಂಬೆ ಹಣ್ಣಿನ ವಿಚಾರವಾಗಿ ಸೊಸೆಯೊಂದಿಗೆ ಅತ್ತೆ, ನಾದಿನಿ ನಡುವೆ ನಡೆದ ಜಗಗಳ ಸೊಸೆಯ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಛೌಡಾದನೋ ಪೊಲೀಸ್ ಠಾಣೆ ವ್ಯಾಪ್ತಿಯ ಚೈನ್‌ಪುರ ಗ್ರಾಮದಲ್ಲಿ ನಡೆದಿದೆ.

ಚೈನ್‌ಪುರ ಗ್ರಾಮದ ನಿವಾಸಿ ಸುನಿಲ್ ಬೈತಾ ಕುಟುಂಬ ವಾಸಿಸುತ್ತಿದೆ. ಸುನಿಲ್ ಬೈತಾ ಮತ್ತು ಆತನ ತಂದೆ ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಸುನಿಲ್​ ಬೈತಾ ಪತ್ನಿ ಕಾಜಲ್ ದೇವಿ (28) ಮೃತ ದುರ್ದೈವಿಯಾಗಿದ್ದು, ಆತನ ತಾಯಿ ಮತ್ತು ಅಕ್ಕ – ತಂಗಿಯರು  ಕೊಲೆ ಮಾಡಿರುವವರಾಗಿದ್ದಾರೆ.

ಘಟನೆ ವಿವರ: ಮನೆಯಲ್ಲಿ ನಿಂಬೆಹಣ್ಣಿನ ವಿಚಾರಕ್ಕಾಗಿ ಅತ್ತೆ- ಸೊಸೆ ಮಧ್ಯೆ ಜಗಳವಾಗಿದೆ. ಈ ಜಗಳಕ್ಕೆ ಅತ್ತೆ ಜೊತೆ ನಾದಿನಿಯರಿಬ್ಬರು ಸೇರಿದ್ದಾರೆ. ಇವರ ನಡುವಿನ ಜಗಳ ವಿಕೋಪಕ್ಕೆ ತಿರುಗಿದ್ದು, ಅತ್ತೆ- ನಾದಿನಿಯರು ಸೇರಿ ಸೊಸೆಯನ್ನು ತೀವ್ರವಾಗಿ ಥಳಿಸಿ, ನಂತರ ಹಗ್ಗದಿಂದ ಕಾಜಲ್​ನ ಕತ್ತಿಗೆ ಗಟ್ಟಿಯಾಗಿ ಬಿಗಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ನೆರೆಹೊರೆಯವರ ಮಾಹಿತಿಯಿಂದ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾಜಲ್ ದೇವಿ ತಲೆಯ ಮೇಲೆ ಗಾಯ ಮತ್ತು ಕುತ್ತಿಗೆಗೆ ಹಗ್ಗದ ಗುರುತು ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮೋತಿಹಾರಿಯ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತ ಮಹಿಳೆಯ ಪತಿ ಮತ್ತು ಮಾವ ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದು, ಘಟನೆಯ ಸಮಯದಲ್ಲಿ ಅವರು ಮನೆಯಲ್ಲಿ ಇರಲಿಲ್ಲ.  ವಿಷಯ ತಿಳಿದು ಕುಟುಂಬಸ್ಥರು ಸ್ಥಳಕ್ಕೆ ತಲುಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಘಟನೆ ಕುರಿತು ಛೌಡಾದನೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.