ಮನೆ ಅಪರಾಧ ಅನುಮಾನಾಸ್ಪದವಾಗಿ ಬಾಲಕಿ ಸಾವು: ಪೊಲೀಸರಿಗೆ ತಿಳಿಸದೇ ಅಂತ್ಯಕ್ರಿಯೆ-ದೂರು ದಾಖಲು

ಅನುಮಾನಾಸ್ಪದವಾಗಿ ಬಾಲಕಿ ಸಾವು: ಪೊಲೀಸರಿಗೆ ತಿಳಿಸದೇ ಅಂತ್ಯಕ್ರಿಯೆ-ದೂರು ದಾಖಲು

0

ಚಾಮರಾಜನಗರ(Chamarajanagar): ಬಾಲಕಿಯೋರ್ವಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯ ಪೋಷಕರು ಹಾಗೂ ಊರಿನವರು ಪೊಲೀಸರ ಗಮನಕ್ಕೆ ತರದೇ ಅಂತ್ಯಕ್ರಿಯೆ ನಡೆಸಿರುವ ಘಟನೆ ತಾಲ್ಲೂಕಿನ ಕಾಗಲವಾಡಿ ಮೋಳೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಸುಮಿತ್ರಾ (16)  ಮೃತಪಟ್ಟ ಬಾಲಕಿಯಾಗಿದ್ದಾಳೆ. ಪ್ರಕರಣ ಗಮನಕ್ಕೆ ಬರುತ್ತಿದ್ದಂತೆಯೇ ಪೊಲೀಸರು ಊರಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು, ಬಾಲಕಿಯ ತಂದೆ ಗೋವಿಂದ ಶೆಟ್ಟಿ ಹಾಗೂ ತಾಯಿ ಜಯಲಕ್ಷ್ಮಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸುಮಿತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೋಷಕರು ಹಾಗೂ ಊರಿನ ಮುಖಂಡರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆದರೆ, ಸುಮಿತ್ರಾಳ ಮೃತದೇಹವನ್ನು ಸುಟ್ಟಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ‘ಊರಿನವರೇ ಆದ ಸೋಮೇಶ್‌ ಎಂಬುವವರನ್ನು ಸುಮಿತ್ರಾ ಪ್ರೀತಿಸಿದ್ದಳು. ಇದು ಹುಡುಗಿಯ ಪೋಷಕರಿಗೆ ಇಷ್ಟ ಇರಲಿಲ್ಲ. ವಿರೋಧ ವ್ಯಕ್ತಪಡಿಸಿದ್ದರು. ಈ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಮಾಹಿತಿ ನಮಗೆ ಸಿಕ್ಕಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಹುಡುಗಿ ಸಾವಿಗೆ ಸೋಮೇಶ್‌ ಕಾರಣ ಎಂದು ಆರೋಪಿಸಿ ಊರಿನಲ್ಲಿ ಯಜಮಾನರು ಸೋಮೇಶ್‌ ಕುಟುಂಬಕ್ಕೆ ದಂಡ ವಿಧಿಸಿದ್ದಾರೆ ಎನ್ನಲಾಗಿದ್ದು, ಅವರು ಯಳಂದೂರು ಠಾಣೆ ವ್ಯಾಪ್ತಿಯಲ್ಲಿ ಆತ್ಮಹತ್ಯೆಗೆ ಯತ್ನ ನಡೆಸಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಅವರು ಸದ್ಯ ಚಾಮರಾಜನಗರದ ಜೆಎಸ್‌ಎಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿಲ್ಲ.

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌ ಅವರು, ‘ನಮಗೆ ಬಂದ ಮಾಹಿತಿ ಪ್ರಕಾರ, ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೋಷಕರು ಹಾಗೂ ಊರಿನ ಮುಖಂಡರು ನಮ್ಮ ಗಮನಕ್ಕೆ ತಾರದೇ ಅಂತ್ಯಸಂಸ್ಕಾರ ಮಾಡಿರುವುದರಿಂದ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದರೆ ಯುವಕನ ಆತ್ಮಹತ್ಯೆ ಯತ್ನದ ಬಗ್ಗೆ ಯಾರೂ ದೂರು ನೀಡಿಲ್ಲ. ದೂರು ಬಂದರೆ ಕ್ರಮ ವಹಿಸುತ್ತೇವೆ’ಎಂದು ಹೇಳಿದ್ದಾರೆ.