ಮನೆ ಮನರಂಜನೆ “ಕೈವ” ಸಿನಿಮಾದ ಆ್ಯಕ್ಷನ್‌ ಟೀಸರ್‌’ಗೆ ಮೆಚ್ಚುಗೆ

“ಕೈವ” ಸಿನಿಮಾದ ಆ್ಯಕ್ಷನ್‌ ಟೀಸರ್‌’ಗೆ ಮೆಚ್ಚುಗೆ

0

ಜಯತೀರ್ಥ ನಿರ್ದೇಶನದಲ್ಲಿ “ಕೈವ’ ಎಂಬ ಸಿನಿಮಾ ಸಿದ್ಧವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಇತ್ತೀಚೆಗೆ ಆ ಚಿತ್ರದ ಆ್ಯಕ್ಷನ್‌ ಟೀಸರ್‌ ಬಿಡುಗಡೆಯಾಗಿ, ಮೆಚ್ಚುಗೆ ವ್ಯಕ್ತವಾಗುತ್ತಿದೆ.

ರವೀಂದ್ರ ಕುಮಾರ್‌ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರದಲ್ಲಿ ಧನ್ವೀರ್‌ ನಾಯಕರಾಗಿ ನಟಿಸಿದ್ದು, ಮೇಘಾ ಶೆಟ್ಟಿ ನಾಯಕಿ.

“ಕೈವ ಇದು ಒಬ್ಬ ವ್ಯಕ್ತಿಯ ಹೆಸರು. 1983 ರಲ್ಲಿ ಬೆಂಗಳೂರಿನ ತಿಗಳರಪೇಟೆಯಲ್ಲಿ ನಡೆದ ನೈಜ ಘಟನೆ ಆಧರಿಸಿದ ಚಿತ್ರ. ಬೆಂಗಳೂರು ಕರಗದಲ್ಲಿ ಹುಟ್ಟಿದ ಪ್ರೇಮಕಥೆಯೇ ಚಿತ್ರದ ಪ್ರಮುಖ ಕಥಾವಸ್ತು. ನನಗೆ ಶವಾಗಾರದಲ್ಲಿ ಕೆಲಸ ಮಾಡುವವರಿಂದ ಈ ಕಥೆ ಸಿಕ್ಕಿತು. ಆನಂತರ ತಿಗಳರಪೇಟೆಗೆ ಹೋಗಿ ಅಲ್ಲಿ ಈ ಘಟನೆ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡೆ. ಈ ಘಟನೆ ಕಂಡಿದ್ದ ಅನೇಕರು ಈಗಲೂ ಇದ್ದಾರೆ. ಅದೇ ಇಸವಿಯಲ್ಲಿ ನಡೆದ ಗಂಗಾರಾಮ್‌ ಕಟ್ಟಡದ ದುರಂತಕ್ಕೆ ಹಾಗೂ ಈ ಚಿತ್ರದ ಕಥೆಗೂ ಸಂಬಂಧವಿದೆ.  ದಿನಕರ್‌ ತೂಗುದೀಪ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.  ದಿನಕರ್‌ ತೂಗುದೀಪ, ರಾಘು ಶಿವಮೊಗ್ಗ ಸೇರಿದಂತೆ ಐದು ಜನ ನಿರ್ದೇಶಕರು ಈ ಚಿತ್ರದಲ್ಲಿ ನಟಿಸಿದ್ದಾರೆ’ ಎಂದು ಚಿತ್ರದ ವಿವರ ನೀಡಿದರು ನಿರ್ದೇಶಕ ಜಯತೀರ್ಥ.

ನಾಯಕ ಧನ್ವೀರ್‌ ಗೆ “ಕೈವ’ ಮೇಲೆ ನಿರೀಕ್ಷೆ ಇದೆ. “ಕೈವ, ನಾನು ನಾಯಕನಾಗಿ ನಟಿಸಿರುವ ನಾಲ್ಕನೇ ಚಿತ್ರ.ಈ ಕಥೆ ಎಲ್ಲ ಕಡೆ ಸುತ್ತಿ ಕೊನೆಗೆ ನನ್ನ ಬಳಿ ಬಂತು. ಜಯತೀರ್ಥ ಅವರು ತುಂಬಾ ಅದ್ಭುತವಾಗಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ನೋಡಿದವರು ಚಿತ್ರ ಚೆನ್ನಾಗಿದೆ ಎನ್ನುತ್ತಿದ್ದಾರೆ’ ಎಂದರು.

ದಿನಕರ್‌ ತೂಗುದೀಪ್‌ ಅವರು, “ನನ್ನ ಪಾತ್ರ ನೋಡಿದವರು ನಮ್ಮ ತಂದೆ ತೂಗುದೀಪ ಶ್ರೀನಿವಾಸ್‌ ಅವರ ಹಾಗೆ ಕಾಣುತ್ತಿರಾ ಎನ್ನುತ್ತಿದ್ದಾರೆ. ಅದು ನಮ್ಮ ತಂದೆಯವರ ಆಶೀರ್ವಾದ. ನಮ್ಮ ಅಮ್ಮ ಕೂಡ ನನ್ನ ಪಾತ್ರ ನೋಡಿ ಸಂತೋಷಪಟ್ಟರು’ ಎಂದು ಖುಷಿ ಹಂಚಕೊಂಡರು.

ನಾಯಕಿ ಮೇಘ ಶೆಟ್ಟಿ ಹಾಗೂ ಇಡೀ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿತು. ತಮ್ಮ ಪಾತ್ರದ ಕುರಿತು ಮಾಹಿತಿ ನೀಡಿದರು. ನಟ ರಾಘು ಶಿವಮೊಗ್ಗ, ಸಂಭಾಷಣೆಕಾರ ರಘು ನಿಡವಳ್ಳಿ ಹಾಗೂ ಕಾರ್ಯಕಾರಿ ನಿರ್ಮಾಪಕರಾದ ಬಾಲಕೃಷ್ಣ ಹಾಗೂ ಕೃಷ್ಣ ಅವರು “ಕೈವ’ ಚಿತ್ರದ ಕುರಿತು ಮಾತನಾಡಿದರು.

ಸಂಕ್ರಾಂತಿ ಸಂಜೇಲಿ…

ಚಿತ್ರದ ಸಂಗೀತ ನಿರ್ದೇಶಕ ಅಜ ನೀಶ್‌ ಲೋಕನಾಥ್‌ ಹುಟ್ಟುಹಬ್ಬದ ದಿನದಂದೇ ಸಂಕ್ರಾಂತಿ ಸಂಜೇಲಿ ಹಾಡು ಬಿಡುಗಡೆಯಾಗಿದೆ. ಅಲ್ಲದೇ ಈ ಹಾಡಿಗೆ ಅಜನೀಶ್‌ ಅವರೇ ಧ್ವನಿಯಾಗಿರುವುದು ಮತ್ತೂಂದು ವಿಶೇಷ.

ಡಾ.ವಿ.ನಾಗೇಂದ್ರ ಪ್ರಸಾದ್‌ ಸಾಹಿತ್ಯದಲ್ಲಿ ಈ ಹಾಡು ಮೂಡಿಬಂದಿದೆ.