ಮನೆ ಅಪರಾಧ 68 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಕೋಟ್ಯಾಂತರ ರೂ. ಆಸ್ತಿ ಪತ್ತೆ

68 ಸ್ಥಳಗಳಲ್ಲಿ ಲೋಕಾಯುಕ್ತ ದಾಳಿ: ಕೋಟ್ಯಾಂತರ ರೂ. ಆಸ್ತಿ ಪತ್ತೆ

0

ಬೆಂಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದಿಸಿರುವ ಆರೋಪದಡಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ 13 ಮಂದಿ ಸರ್ಕಾರಿ ಅಧಿಕಾರಿಗಳ ಮನೆ, ಸಂಬಂಧಿಕರ ನಿವಾಸಗಳು ಸೇರಿದಂತೆ ಒಟ್ಟು 68 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚರ, ಸ್ಥಿರಾಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿತರ ವಿರುದ್ಧ ಪ್ರತ್ಯೇಕವಾಗಿ 13 ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ಕೆಪಿಟಿಸಿಎಲ್ ಕಾರ್ಯಪಾಲಕ ಅಭಿಯಂತರ ಚನ್ನಕೇಶವ ಎಚ್.ಡಿ ಅವರಿಗೆ ಸಂಬಂಧಿಸಿದ ಮನೆ ಹಾಗೂ ಇತರೆ ಏಳು ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. 11,46 ಕೋಟಿ ರೂ ಮೌಲ್ಯದ ನಿವೇಶನ, ಮನೆ, ಜಮೀನಿಗೆ ಸೇರಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. 1.44 ಕೋಟಿ ಮೌಲ್ಯದ 3 ಕೆ.ಜಿ. ಚಿನ್ನ, 28 ಕೆ.ಜಿ. ಬೆಳ್ಳಿ, 25 ಲಕ್ಷದ ವಜ್ರ, 5 ಲಕ್ಷದ ಸೇಲ್ ಡೀಡ್ ಸೇರಿದಂತೆ 15,53 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿಕೊಳ್ಳಲಾಗಿದೆ.

ರಾಮನಗರ ಕಣಮಿಣಿಕೆ, ಕೆಎಂಎಫ್, ಮುಖ್ಯ ಕಾರ್ಯನಿರ್ವಾಹಕ (ಭದ್ರತೆ) ಎಚ್.ಎಸ್.ಕೃಷ್ಣಮೂರ್ತಿ ಅವರಿಗೆ ಸಂಬಂಧಿಸಿದ ಐದು ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು, ನಿವೇಶನ, ಮನೆ ಹಾಗೂ ಜಮೀನು ದಾಖಲಾತಿ ಸೇರಿದಂತೆ 49.87 ಲಕ್ಷ ಮೌಲ್ಯದ ಸ್ಥಿರಾಸ್ತಿ ಮತ್ತು 4 ಕೋಟಿ ರೂ.ಮೌಲ್ಯದ ಚಿನ್ನ-ಬೆಳ್ಳಿ ಹಾಗು ನಗದು ಜಪ್ತಿ ಮಾಡಿದ್ದಾರೆ.

ಬೆಸ್ಕಾಂ ಉಪಪ್ರಧಾನ ವ್ಯವಸ್ಥಾಪಕ ಟಿ.ಎನ್.ಸುಧಾಕರ್ ರೆಡ್ಡಿ ಅವರಿಗೆ ಸಂಬಂಧಿಸಿದ ಮನೆ ಸೇರಿ ಐದು ಕಡೆಗಳಲ್ಲಿ ದಾಳಿ ನಡೆಸಲಾಗಿದ್ದು, 5.42 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಚಿನ್ನಾಭರಣ ಹಾಗೂ ನಗದು ಸೇರಿದಂತೆ ಒಟ್ಟು 5.73 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆಯಲಾಗಿದೆ.

ಹೆಸ್ಕಾಂ ನಿವೃತ್ತ ಕಿರಿಯ ಅಭಿಯಂತರ ಬಸವರಾಜ್ ಅವರಿಗೆ ಸಂಬಂಧಿಸಿದ ಪ್ರತ್ಯೇಕ ಮೂರು ಕಡೆಗಳಲ್ಲಿ ದಾಳಿ ನಡೆಸಿ 2.31 ಕೋಟಿ ಮೌಲ್ಯದ ಸ್ಥಿರಾಸ್ತಿ, 80 ಲಕ್ಷ ನಗದು, 24,84 ಲಕ್ಷದ ವಾಹನಗಳು, 18.33 ಲಕ್ಷದ 331 ಗ್ರಾಂ ಚಿನ್ನ, 18 ಲಕ್ಷದ 26 ಕೆ.ಜಿ.ಬೆಳ್ಳಿ, ಬ್ಯಾಂಕ್ ಖಾತೆಯಲ್ಲಿ 23 ಲಕ್ಷ ಹಣ, 10 ಲಕ್ಷದ ಮೌಲ್ಯದ ಗೃಹೋಪಯೋಗಿ ವಸ್ತು ಸೇರಿದಂತೆ ಒಟ್ಟು 4 ಕೋಟಿ ಮೌಲ್ಯದ ಆಸ್ತಿ ಪತ್ತೆ ಮಾಡಲಾಗಿದೆ.

ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಎಂ.ಎಸ್, ಮಹದೇವಸ್ವಾಮಿ ಅವರಿಗೆ ಸಂಬಂಧಿಸಿದ 12 ಕಡೆಗಳಲ್ಲಿ ದಾಳಿ ಮಾಡಿ 6 ಕೋಟಿ ಮೌಲ್ಯದ ನಿವೇಶನ, ಮನೆ ಹಾಗೂ ಜಮೀನಿಗೆ ಸಂಬಂಧಿಸಿದ ಕಾಗದ ಪತ್ರಗಳು ಪತ್ತೆಯಾಗಿವೆ. 2.33 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 8.41 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿವೆ.

ಮೂಲತಃ ಕೆಜಿಎಫ್‌ ನಿವಾಸಿಯಾಗಿರುವ ತಿಮ್ಮರಾಜಪ್ಪ ಪ್ರಸ್ತುತ ಕೆಆರ್‌ಐಡಿಎಲ್‌ನಲ್ಲಿ ಕಾರ್ಯಪಾಲಕ ಅಭಿಯಂತರರು. ಇವರಿಗೆ ಸಂಬಂಧಿಸಿದ ಸುಮಾರು 9 ಕಡೆಗಳಲ್ಲಿ ದಾಳಿ ನಡೆಸಿದ್ದು, ಸುಮಾರು 8 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ 1 ಕೋಟಿ ಮೌಲ್ಯದ ಚಿನ್ನಾಭರಣ ಸೇರಿದಂತೆ ಒಟ್ಟು 9 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ಆದಾಯಕ್ಕೂ ಮೀರಿ ಆಸ್ತಿ ಸಂಬಂಧ ಕೋಲಾರದ ಲೋಕಾಯುಕ್ತ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ರಾಮನಗರ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ಅವರಿಗೆ ಸಂಬಂಧಿಸಿದ ಆರು ಕಡೆಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು 3.58 ಲಕ್ಷದ ನಿವೇಶನ, ಮನೆ ಪತ್ರಗಳು, 1.550 ಗ್ರಾಂ ಚಿನ್ನ, 6.5 ಬೆಳ್ಳಿ ಸೇರಿದಂತೆ 5 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬೀದರ್ ಕರ್ನಾಟಕ ಪಶುಪಾಲನೆ ವಿಶ್ರಾಂತ ಉಪಕುಲಪತಿ ಹೆ.ಡಿ.ನಾರಾಯಣ ಸ್ವಾಮಿ ಅವರಿಗೆ ಸಂಬಂಧಿಸಿದ ಎರಡು ಕಡೆಗಳಲ್ಲಿ ದಾಳಿ ನಡೆಸಿ 5.06 ಕೋಟಿ ಮೌಲ್ಯದ ಆಸ್ತಿ ಪತ್ರ, 1.84 ಕೋಟಿ ಮೌಲ್ಯದ 448 ಗ್ರಾಂ ಚಿನ್ನ, ಒಟ್ಟು 8.90 ಕೋಟಿ ಮೌಲ್ಯದ ಆಸ್ತಿ ಪತ್ರಗಳು ದೊರಕಿವೆ.

ಪಶುಪಾಲನೆ ಇಲಾಖೆ ಅಕೌಂಟ್ ಅಸ್ಟಿಸೆಂಟ್ (ಹೊರಗುತ್ತಿಗೆ) ಕಂಟ್ರೋಲರ್ ಆಫ್ ಫೈನಾನ್ಸ್ ಸುನಿಲ್​ ಕುಮಾರ್​ ಅವರಿಗೆ ಸೇರಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ 50 ಲಕ್ಷ ಮೌಲ್ಯದ ಕ್ರಯಪತ್ರಗಳು ಸೇರಿದಂತೆ 1.25 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಗಂಗಾವತಿ ಆನೆಗುಡಿ ಡೆಪ್ಯೂಟಿ ರೇಂಜ್ ಫಾರೆಸ್ಟ್ ಆಫೀಸ್ ಬಿ.ಮಾರುತಿ ಅವರಿಗೆ ಸೇರಿದ ಎರಡು ಕಡೆಗಳಲ್ಲಿ ದಾಳಿ ನಡೆಸಿ 21.39 ಲಕ್ಷ ಮೌಲ್ಯದ ಆಸ್ತಿ ಪತ್ರ ವಶಕ್ಕೆ ಪಡೆಯಲಾಗಿದೆ.

ಬಳ್ಳಾರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಚಂದ್ರಶೇಖರ್ ಹಿರೇಮನಿ ಅವರಿಗೆ ಸೇರಿದ ಐದು ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 10.72 ಲಕ್ಷದ ಮೌಲ್ಯ ಸ್ಥಿರಾಸ್ತಿ ಹಾಗೂ ಚರಾಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ.

ಯಾದಗರಿ ಸಿಟಿ ಮುನಿಸಿಪಾಲ್ ಕೌನ್ಸಿಲ್ ಆಯುಕ್ತ  ಶರಣಪ್ಪ ಅವರಿಗೆ ಸಂಬಂಧಿಸಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ 2.05 ಕೋಟಿ ಆಸ್ತಿ ಹಾಗೂ ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಪ್ರಭುಲಿಂಗ ಕೆ.ಮಂಕರ್ ಎಂಬುವರಿಗೆ ಸಂಬಂಧಿಸಿದ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿ ಒಟ್ಟು 1.49 ಕೋಟಿ ಮೌಲ್ಯದ ಆಸ್ತಿಗಳು ಪತ್ತೆ ಹಚ್ಚಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.