ಮನೆ ಅಪರಾಧ ಶಿರಸಿ: ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವು

ಶಿರಸಿ: ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವು

0

ಶಿರಸಿ (ಉತ್ತರ ಕನ್ನಡ) : ರಜಾ ದಿನ ಕಳೆಯಲು ತೆರಳಿದ್ದ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಾಲ್ಮಲಾ ನದಿ ತೀರದ ನೆಲ್ಲಿಚೌಕದಲ್ಲಿ ಭಾನುವಾರ ನಡೆದಿದೆ.

ಮೃತರೆಲ್ಲರೂ ಶಿರಸಿ ನಗರದವರಾಗಿದ್ದು, ರಾಮನಬೈಲಿನ ಮೊಹಮ್ಮದ್ ಸಲೀಂ ಕಲೀಲ್ (44), ನಾದಿಯಾ ನೂರ್ ಅಹಮದ್ ಶೇಖ್ (20), ಕಸ್ತೂರಬಾ ನಗರದ ಮಿಸ್ಬಾ ತಬಸುಮ್ (21), ರಾಮನಬೈಲಿನ ನಬಿಲ್ ನೂರ್ ಅಹಮದ್ ಶೇಖ್ (22), ರಾಮನಬೈಲಿನ ಯುವಕ ಉಮರ್ ಸಿದ್ದಿಕ್ (23) ಮೃತರು.

ಸಾವನ್ನಪ್ಪಿರುವವರಲ್ಲಿ ನಾದಿಯಾ ನೂರ್ ಎಂಬುವರು ಕಳೆದ 16 ದಿನಗಳ ಹಿಂದಷ್ಟೇ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಮತ್ತು ಪೊಲೀಸ್ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯ ನಡೆಸಿದ್ದು, ರಾತ್ರಿವರೆಗೆ ನಡೆದ ಕಾರ್ಯಾಚರಣೆಯಲ್ಲಿ ಎಲ್ಲರ ಮೃತದೇಹಗಳು ಪತ್ತೆಯಾಗಿವೆ.‌

ಶಿರಸಿ ನಗರದ ರಾಮನಬೈಲು ಮತ್ತು ಕಸ್ತೂರಬಾ ನಗರದ ಒಂದೇ ಕುಟುಂಬದ ಸುಮಾರು 25 ಜನ ಭಾನುವಾರ ಶಾಲ್ಮಲಾ ನದಿಯ ಭೂತನಗುಂಡಿಯ ಬಳಿ ಅಡುಗೆ ತಯಾರಿ ನಡೆಸಿದ್ದರು. ಈ ವೇಳೆ ಅವರೊಂದಿಗೆ ಬಂದಿದ್ದ ಮಗುವೊಂದು ಆಟವಾಡುತ್ತ ಭೂತನಗುಂಡಿಯ ನೀರಿಗೆ ಬಿದ್ದಿದೆ. ತಕ್ಷಣವೇ ನೀರಿಗೆ ಜಿಗಿದ ಮೊಹಮ್ಮದ್ ಸಲೀಂ ಕಲೀಲ್ ಮಗುವನ್ನು ನೀರಿನಿಂದ ರಕ್ಷಿಸಿ, ನಾದಿಯಾ ಅವರಿಗೆ ನೀಡಿದ್ದರು. ಮಗುವನ್ನು ದಡಕ್ಕೆ ಬಿಟ್ಟು ನೀರಿನಿಂದ ಮೇಲೆ ಬರುವಾಗ ಕಾಲು ಜಾರಿ ನಾದಿಯಾ ಮತ್ತು ಮೊಹಮ್ಮದ್ ಇಬ್ಬರೂ ಮುಳುಗಿದ್ದಾರೆ. ಅವರನ್ನು ರಕ್ಷಿಸುವ ಸಲುವಾಗಿ ನೀರಿಗೆ ಜಿಗಿದ ಮತ್ತೆ ಮೂವರೂ ಸಹ ನೀರಿನಿಂದ ಮೇಲೇಳಲಾಗದೆ ಮುಳುಗಿ ಸಾವಿಗೀಡಾಗಿದ್ದಾರೆ. ಮಗು ಸುರಕ್ಷಿತವಾಗಿದೆ.