ಮನೆ ರಾಜ್ಯ ಫೆ.15 ರಂದು ಶಾಂತಿ,ಸೌಹಾರ್ದತೆ, ಸಹಬಾಳ್ವೆಗಾಗಿ ಪ್ರಗತಿಪರ ಪ್ರತಿಭಟನಾ ಧರಣಿ

ಫೆ.15 ರಂದು ಶಾಂತಿ,ಸೌಹಾರ್ದತೆ, ಸಹಬಾಳ್ವೆಗಾಗಿ ಪ್ರಗತಿಪರ ಪ್ರತಿಭಟನಾ ಧರಣಿ

0

ಮಂಡ್ಯ:ಜಿಲ್ಲೆಯ ಉಳುಮೆ ಸಂಸ್ಕೃತಿಯ ಉಳಿವಿಗಾಗಿ,ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿಫೆಬ್ರವರಿ15 ರಂದು ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಗಳ ವತಿಯಿಂದ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನೆಡೆಸಲಾಗು ವುದು ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥ ಗುರುಪ್ರಸಾದ್‌ ಕೆರಗೋಡು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅಂದು ಬೆಳಿಗ್ಗೆ 11 ಗಂಟೆಯಿಂದ ಆರಂಭವಾಗುವ ಧರಣಿ ಸತ್ಯಾಗ್ರಹ ಸಂಜೆ 4 ಗಂಟೆಯ ವರೆಗೆ ನಡೆಯಲಿದ್ದು ಈ ಧರಣಿ ಸತ್ಯಾಗ್ರಹದಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್,ಹೆಸರಾಂತ ಸಾಹಿತಿ ಚಿಂತಕ ದೇವನೂರು ಮಹಾದೇವ,ಸಾಹಿತಿ ಕಾಳೇಗೌಡ ನಾಗವಾರ, ಕೋಟಿಗಾನಹಳ್ಳಿ ರಾಮಯ್ಯ ಸೇರಿದಂತೆ ನಾಡಿನ ಬುದ್ಧಿಜೀವಿಗಳು, ಗಣ್ಯರು ಹೋರಾಟಗಾರರು ಮತ್ತು ಜೀವಪರರು ಭಾಗವಹಿಸಲಿದ್ದಾರೆ. ನಾಡಿನ ಹೆಸರಾಂತ ಹಾಡುಗಾರ ಜನಾರ್ದನ್(ಜನ್ನಿ) ತಂಡದ ಕಲಾವಿದರು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ. ಮಂಡ್ಯ ಜಿಲ್ಲೆ ಆ ಮೂಲಕ ಇಡೀ ನಾಡು ಸೌಹಾರ್ದವಾಗಿ ಉಳಿಯಬೇಕು ಎಂದು ಬಯಸುವ ಎಲ್ಲಾ ಮನಸ್ಸುಗಳು ಈ ಧರಣಿ ಕಾರ್ಯಕ್ರಮದಲ್ಲಿ ಭಾಗವಹಿಸ ಬೇಕೆಂದು ಮನವಿ ಮಾಡಿದರು.

ಯುಗದ ಕವಿ ಜಗದ ಕವಿ ಕುವೆಂಪು ಹೇಳಿದಂತೆ ಮಂಡ್ಯ ಜಿಲ್ಲೆಯ ಜನತೆಯ ಧರ್ಮ ದುಡಿಮೆ,ಹಸಿರೇ ಉಸಿರು.ಇಂತಹ ಪವಿತ್ರ ಧರ್ಮವನ್ನು ಪಲ್ಲಟಗೊಳಿಸುವ, ಉಸಿರು ಕಟ್ಟಿಸುವ ಘಟನಾವಳಿಗಳಿಗೆ ನಮ್ಮ ಜಿಲ್ಲೆ ಇತ್ತೀಚಿನ ದಿನಗಳಲ್ಲಿ ಸಾಕ್ಷಿಯಾಗಿದೆ.ಇಂತಹ ಕಾಲದಲ್ಲಿ ಶೂದ್ರನ ಮನೆಯ ಕೂಸು ಕುವೆಂಪು ನಮಗೆ ದಾರಿ ದೀಪವಾಗಿದ್ದಾರೆ ಎಂದರು. ಜಿಲ್ಲೆಯ ಜನರ ಧರ್ಮ ಉಳುಮೆ. ಉಳುಮೆಯ ಆಚರಣೆಯಿಂದ ಕಟ್ಟಿಕೊಂಡ ಬದುಕು.ಈಗ ಉಳುಮೆಯ ಧರ್ಮವನ್ನು ಮೂಲೆಗೆ ತಳ್ಳಿ ಭಾವುಟ ಧರ್ಮವನ್ನು ಮುಂದೆ ಮಾಡಲಾಗಿದೆ, “ಧರ್ಮ ಮತ್ತು ದೇವರನ್ನು ಓಟು ಬಾಚಿಕೊಳ್ಳುವ ಸಾಧನ ಮಾಡಿಕೊಂಡು, ಅಧಿಕಾರದ ಸಿಂಹಾಸನವೇರಲು ಜನರ ಬದುಕನ್ನು ಮೆಟ್ಟಿಲು ಮಾಡಿಕೊಳ್ಳಲಾಗುತ್ತಿದೆ.”ಇದು ಆತಂಕಕಾರಿ ವಿಚಾರವಾಗಿದೆ ಎಂದರು.

ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಸಕಲೆಂಟು ಜಾತಿಯ ಜನರು ಪರಸ್ಪರ ಪ್ರೀತಿ,ವಿಶ್ವಾಸದಿಂದ ಶತಮಾನಗಳಿಂದ ಸಾಮರಸ್ಯದ ಜೀವನ ನಡೆಸುತ್ತಿದ್ದಾರೆ. ತನ್ನ ಕಟ್ಟೆಮನೆಯ ನಿಷ್ಠುರ ನ್ಯಾಯಗಳಿಂದ ಪ್ರಖ್ಯಾತಿ ಪಡೆದ ಊರು ಕೆರಗೋಡು,ಆದರೆ ಇತ್ತೀಚಿನ ಧ್ವಜ ವಿವಾದವು ಕೆರಗೋಡಿನ ಶಾಂತಿ,ಸಹಬಾಳ್ವೆಯ ಬದುಕಿಗೆ ಬೆಂಕಿ ಇಟ್ಟಿದೆ.ಹಬ್ಬ ಹರಿದಿನಗಳಲ್ಲಿ ಮದುವೆ ಸಂಭ್ರಮಗಳಲ್ಲಿ ಹಸಿರು ಚಪ್ಪರ ತಳಿರು ತೋರಣಗಳಿಂದ ಸಿಂಗಾರಗೊಂಡು ಕಂಗೊಳಿಸುತ್ತಿದ್ದ ಕೆರಗೋಡು ಈಗ ಆರೆಸ್ಸೆಸ್,ಬಿಜೆಪಿ ಮತ್ತು ಸಂಘ ಪರಿವಾರದ ಕೇಸರಿ ಬಣ್ಣದ ಬಾವುಟ,ತೋರಣ ಸುತ್ತಿಕೊಂಡು ಭೀಕರವಾಗಿ ಕಾಣುತ್ತಿದೆ. ಮೇಲ್ನೋಟಕ್ಕೆ ಇದು ಧಾರ್ಮಿಕ ಆಚರಣೆಯಂತೆ ಕಂಡರೂ ಇದರ ಹಿಂದೆ ಜಾತಿ ಹಾಗೂ ಮತೀಯ ಗಲಭೆಗಳನ್ನು ಸೃಷ್ಟಿಸಿ ಚುನಾವಣಾ ಲಾಭ ಹೊಡೆಯುವ ಹುನ್ನಾರದಂತೆ ಕಾಣುತ್ತಿದೆ.ಇದಕ್ಕೆ ಅಂತ್ಯವಾಡುವುದು ನಾಗರಿಕ ಸಮಾಜದ ಕರ್ತವ್ಯವಾಗಿದೆ ಎಂದರು.

ಮಂಡ್ಯ ಜಿಲ್ಲೆಯಲ್ಲಿ ಒಡೆದು ಆಳುವ ಕುತಂತ್ರ ರಾಜಕೀಯ ಮಾಡುತ್ತಿರುವ ಸಂಚುಕೋರರಿಗೆ ಎಚ್ಚರಿಕೆ ಕೊಟ್ಟು, ಜಿಲ್ಲೆಯ ಶಾಂತಿ, ಸೌಹಾರ್ದತೆ, ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಆಶಯ ಹೊತ್ತು ಈ ಧರಣಿ ನಡೆಸಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಜನತೆ ನೂರಾರು ಸಂಖ್ಯೆಯಲ್ಲಿ ಆಗಮಿಸಿ, ಜೊತೆಗೂಡಿ ಈ ಧರಣಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ನ್ಯಾಯವಾದಿ ಲಕ್ಷ್ಮಣ್ ಚೀರನಹಳ್ಳಿ, ಪ್ರೊ.ಹುಲ್ಕೆರೆ ಮಹದೇವು,ಕುರುಬರ ಸಂಘದ ಮಾಜಿ ಅಧ್ಯಕ್ಷ ದೊಡ್ಡಯ್ಯ, ರೈತ ಸಂಘದ ಮುಖಂಡರಾದ ಶಿವಳ್ಳಿ ಚಂದ್ರು ಹಾಗೂ ವಿಜಯಕುಮಾರ್ ಉಪಸ್ಥಿತರಿದ್ದರು.