ಮನೆ ಸ್ಥಳೀಯ ಸೇವಾಲಾಲ್ ಅವರು ಸಮಾಜವನ್ನು ಬೆಳೆಸಲು ಹೋರಾಡಿದ ವೀರ ಯೋಧ: ಡಾ. ಎ.ಆರ್ ಗೋವಿಂದ ಸ್ವಾಮಿ

ಸೇವಾಲಾಲ್ ಅವರು ಸಮಾಜವನ್ನು ಬೆಳೆಸಲು ಹೋರಾಡಿದ ವೀರ ಯೋಧ: ಡಾ. ಎ.ಆರ್ ಗೋವಿಂದ ಸ್ವಾಮಿ

0

ಮೈಸೂರು: ಸೇವಾಲಾಲ್ ಅವರು ಸಮಾಜವನ್ನು ಬೆಳೆಸಲು ಮತ್ತು ಪ್ರತಿಯೊಬ್ಬರಿಗೂ ಸ್ಥಾನಮಾನವನ್ನು ದೊರಕಿಸಿಕೊಡಲು ಜೀವನ ಪೂರ್ತಿ ಹೋರಾಟಗಳನ್ನು ಮಾಡಿಕೊಂಡು ಬಂದ ವೀರ ಯೋಧ ಎಂದು ಅಂತಾರಾಷ್ಟ್ರೀಯ ಸಂಪನ್ಮೂಲ ತಜ್ಞರು, ಕಲಾವಿದರು ಹಾಗೂ ಸಾಹಿತಿಗಳಾದ ಡಾ. ಎ. ಆರ್ ಗೋವಿಂದ ಸ್ವಾಮಿ ಅವರು ಹೇಳಿದರು.

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಶ್ರೀ ಸಂತ ಸೇವಾಲಾಲ್ ಜಯಂತಿಯ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ವಿವಿಧತೆಯಲ್ಲಿ ಏಕತೆ ಇರುವ ನಮ್ಮ ದೇಶದ ಕಲ್ಯಾಣಕ್ಕಾಗಿ ಹಲವಾರು ಸಂಸ್ಕೃತಿಕ ನಾಯಕರು, ದಾರ್ಶಣಿಕರು ಹೋರಾಟ ಮಾಡಿದ್ದಾರೆ ಅಂತಹವಾರಲ್ಲಿ ಸೇವಾಲಾಲ್ ಕೂಡ ಒಬ್ಬರು ಎಂದರು.

ಸೇವಾಲಾಲ್ ಅವರು ಪರಿಸರ, ಪ್ರಾಣಿ -ಪಕ್ಷಿ ಪ್ರಿಯ. ಬುಡಕಟ್ಟು ಹಾಗೂ ಅಲೆಮಾರಿ ಜನಾಂಗದ ಜನರ ಬೆಳವಣಿಗೆಗೆ ಹಾಗೂ ಅವರಿಗೆ ನೆಲೆ ಕಟ್ಟುಕೊಡಲು ಮುಂದಾದವರು. ಎಲ್ಲರಿಗೂ ವಿದ್ಯೆ ಸಿಗಬೇಕು ಎಂದು ವಿದ್ಯೆಗೆ ಹೆಚ್ಚಿನ ಮಹತ್ವವನ್ನು ನೀಡಿ ಕೋಶ ಓದಿ ಜ್ಞಾನವನ್ನು ಬೆಳೆಸಿಕೊ ಎಂಬ ತತ್ವವನ್ನು ಅಳವಡಿಸಿಕೊಂಡಿದ್ದವರು ಎಂದು ತಿಳಿಸಿದರು.

ಬಂಜರ ಸಮುದಾಯದ ಜನರಲ್ಲಿ ಒಗ್ಗಟ್ಟನ್ನು ಮೂಡಿಸಿ ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಇರಬೇಕು ಎಂಬ ಕನಸನ್ನು ಕಂಡವರು ಸೇವಾಲಾಲ್ ಅವರು. ಆದರೆ ಇಂದು ನಮ್ಮ ಸಮುದಾಯದಲ್ಲಿ ಒಗ್ಗಟ್ಟಿನ ಪರಸ್ಪರ ನಂಬಿಕೆ, ಪ್ರೀತಿ, ಸಹಬಾಳ್ವೆಯ ಕೊರತೆಯಿಂದಾಗಿ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಹಾಗಾಗಿ ಮುಂದಿನ ದಿನಗಳಲ್ಲಿ ಎಲ್ಲರೂ ಒಗ್ಗಟ್ಟಾಗಿ ಸಂತ ಸೇವಾಲಾಲರ ಆದರ್ಶ ಹಾಗೂ ಅವರ ನಡೆಯನ್ನು ಅನುಸರಿಸಿ ಅವರು ಕಂಡ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೋರಾಡೋಣ ಎಂದರು.

ಕಾರ್ಯಕ್ರಮದಲ್ಲಿ ತಿ.ನರಸೀಪುರದ ಪಿಂಜರಾಪೋಲ್ ಗೋ ಶಾಲೆಯ ಶ್ರೀ 1008 ಚೇತನಗಿರಿ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗೀಯ ಜಂಟಿ ನಿರ್ದೇಶಕರಾದ ವಿ ಎನ್ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಂ ಡಿ ಸುದರ್ಶನ್, ಬಂಜಾರ್ ಸೇವಾ ಸಂಘದ ಅಧ್ಯಕ್ಷರಾದ ಸುಂದರ್, ಉಪಾಧ್ಯಕ್ಷರಾದ ಓಂಕಾರ್ ನಾಯಕ್, ಕಾರ್ಯದರ್ಶಿಗಳಾದ ಚಂದ್ರನಾಯಕ್, ಜಂಟಿ ಕಾರ್ಯದರ್ಶಿಗಳಾದ ಕೃಷ್ಣ ನಾಯಕ್, ಖಜಾಂಚಿಗಳಾದ ಮುನಿಸ್ವಾಮಿ, ಸಂತ ಸೇವಾಲಾಲ್ ಸಮುದಾಯದ ಮುಖಂಡರು ಹಾಗೂ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.