ಮನೆ ಅಪರಾಧ ಹುಣಸೂರು: ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣು

ಹುಣಸೂರು: ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತ ಆತ್ಮಹತ್ಯೆಗೆ ಶರಣು

0

ಹುಣಸೂರು: ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ರೈತರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನಗೋಡು ಹೋಬಳಿಯ ವದ್ಲಿ ಮನುಗನಹಳ್ಳಿಯಲ್ಲಿ ನಡೆದಿದೆ.

Join Our Whatsapp Group

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ವದ್ಲಿಮನುಗನಹಳ್ಳಿಯ ಲೇ.ಜವರೇಗೌಡರ ಪುತ್ರ ಅಣ್ಣೇಗೌಡ(57) ಮೃತ ರೈತ. ಇವರಿಗೆ ಪತ್ನಿ, ಇಬ್ಬರು ಹೆಣ್ಣು, ಒಬ್ಬ ಮಗನಿದ್ದಾನೆ.

ಘಟನೆಯ ವಿವರ: ಅಣ್ಣೇಗೌಡರಿಗೆ ಗ್ರಾಮದಲ್ಲಿ 3 ಎಕರೆ ಜಮೀನಿದ್ದು, ತಂಬಾಕು ಮತ್ತಿತರ ಬೆಳೆ ಬೆಳೆಯುತ್ತಿದ್ದರು. ಕೃಷಿ ಚಟುವಟಿಕೆಗಾಗಿ ಪಂಚವಳ್ಳಿಯ ಐಓಬಿ ಬ್ಯಾಂಕ್‌ನಲ್ಲಿ 10 ಲಕ್ಷ ಸಾಲ ಪಡೆದಿದ್ದು, ಸುಸ್ತಿದಾರರಾಗಿದ್ದರು. ಖಾಸಗಿ ಫೈನಾನ್ಸ್ 14 ಲಕ್ಷ ರೂ. ಹಾಗೂ 5 ಲಕ್ಷ ಕೈಸಾಲ ಮಾಡಿಕೊಂಡಿದ್ದರು. ಬೆಳೆ ಕೈ ಹತ್ತದೆ ಸಾಲ ತೀರಿಸಲಾಗದೆ ಚಿಂತಿತರಾಗಿದ್ದ ಇವರು ಬುಧವಾರ ಮನೆಯಿಂದ ಹೊರಗೆ ಹೋಗಿದ್ದವರು ಮರಳಿರಲಿಲ್ಲ.

ಬುಧವಾರ ಗ್ರಾಮದ ಗೆಂಡೆ ಕೆರೆಯಲ್ಲಿ ಅಣ್ಣೇಗೌಡರ ಶವ ತೇಲುತ್ತಿರುವ ಬಗ್ಗೆ ಗ್ರಾಮಸ್ಥರು ಮನೆಯವರಿಗೆ ಮಾಹಿತಿ ನೀಡಿದ ಮೇರೆಗೆ ಪುತ್ರ ಶಶಿಕುಮಾರ್ ತಮ್ಮ ತಂದೆ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರ ಸಮ್ಮುಖದಲ್ಲಿ ಶವ ಮೇಲೆತ್ತಿ, ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಿದ್ದು, ಸಂಜೆ ಅಂತ್ಯ ಸಂಸ್ಕಾರ ನಡೆಸಲಾಯಿತು.