ಮನೆ ಆರೋಗ್ಯ ಸರಕಾರದ ಬಳಿ ಡೆಂಗ್ಯೂ ನಿಯಂತ್ರಣ, ಸ್ವಚ್ಛತೆ ಕಾಪಾಡಲು ದುಡ್ಡಿಲ್ಲ: ಆರ್‌. ಅಶೋಕ್‌

ಸರಕಾರದ ಬಳಿ ಡೆಂಗ್ಯೂ ನಿಯಂತ್ರಣ, ಸ್ವಚ್ಛತೆ ಕಾಪಾಡಲು ದುಡ್ಡಿಲ್ಲ: ಆರ್‌. ಅಶೋಕ್‌

0

ಬೆಂಗಳೂರು: ಬೆಲೆ ಏರಿಕೆ ಮಾಡಿ ಲೂಟಿ ಹೊಡೆಯುತ್ತಿರುವ ಸರಕಾರದ ಬಳಿ ಡೆಂಗ್ಯೂ ನಿಯಂತ್ರಣ, ಸ್ವಚ್ಛತೆ ಕಾಪಾಡಲು ದುಡ್ಡಿಲ್ಲ. ಹಗರಣಗಳು ಸರಕಾರಕ್ಕೆ ಕಂಟಕವಾಗಿವೆ. ಈ ಸರಕಾರ ಐಸಿಯುನಲ್ಲಿದೆ. ಬಹಳ ದಿನ ಉಳಿಯುವುದಿಲ್ಲ. ಸರಕಾರ ಬೇಗ ತೊಲಗಲಿ ಎಂದು ಜನ ಕಾಯುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌. ಅಶೋಕ್‌ ಅಸಮಾಧಾನ ವ್ಯಕ್ತಪಡಿಸಿದರು.

Join Our Whatsapp Group

ರವಿವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಡೆಂಗ್ಯೂ ಜ್ವರ ಬಂದು ಪ್ರತಿನಿತ್ಯ ಜನ ಸಾಯುತ್ತಿದ್ದಾರೆ. ತುಮಕೂರಿನಲ್ಲಿ ಕಾಲರಾದಿಂದ ಮೃತಪಟ್ಟಿದ್ದಾರೆ. ಹಲವಾರು ಕಾಯಿಲೆಗಳು ಜನರ ಪ್ರಾಣ ತೆಗೆದುಕೊಳ್ಳುತ್ತಿದೆ. ಬೆಲೆ ಏರಿಕೆ ಮಾಡಲು ಇವರ ಬಳಿ ಐಡಿಯಾಗಳಿವೆ. ರಕ್ತ ಪರೀಕ್ಷೆ ಮಾಡಲು 600-800 ರೂ. ಆಗುತ್ತದೆ. ಅದನ್ನು ಕೊಡುವ ಯೋಗ್ಯತೆ ಇಲ್ಲ ಎಂದು ಕಿಡಿಕಾರಿದರು.

ಡೆಂಗ್ಯೂ ನಿಯಂತ್ರಣಕ್ಕೆ ಕಾರ್ಯಪಡೆ ಮಾಡಿಲ್ಲ, ವಿಶೇಷ ವಾರ್ಡ್‌ ಇಲ್ಲ, ಸ್ವತ್ಛತೆಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಉಚಿತ ಪರೀಕ್ಷೆ, ಚಿಕಿತ್ಸೆ, ಔಷಧ ಇಲ್ಲ. ಇದನ್ನೆಲ್ಲಾ ನೋಡುತ್ತಿದ್ದರೆ ರಾಜ್ಯ ಸರಕಾರ ಐಸಿಯುನಲ್ಲಿದೆ. ಮೂಡಾ ಹಗರಣ, ವಾಲ್ಮೀಕಿ ನಿಗಮದ ಹಗರಣಗಳು ಸರಕಾರಕ್ಕೆ ಕಂಟಕವಾಗಿವೆ. ಈ ಸರಕಾರ ಬಹಳ ದಿನ ಉಳಿಯುವುದಿಲ್ಲ ಎಂದರು.

ರಾಜ್ಯದಲ್ಲಿ ದಿನನಿತ್ಯ ಬೆಲೆ ಏರಿಕೆಯಿಂದ ಬಡವರು ಬದುಕುವಂತಹ ಸ್ಥಿತಿಯಲ್ಲೇ ಇಲ್ಲ. ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ತರಕಾರಿಯಿಂದ ಹಿಡಿದು ಪ್ರತಿಯೊಂದರ ದರ ಏರಿಕೆ ಆಗಿದೆ. ಹಾಲಿನ ದರವನ್ನೂ ಜಾಸ್ತಿ ಮಾಡಿದ್ದಾರೆ. ಸದ್ಯದಲ್ಲೇ ಅಬಕಾರಿ ದರ ಮತ್ತು ಬಸ್‌ ಪ್ರಯಾಣ ದರ ಹೆಚ್ಚಿಸುವುದಕ್ಕೂ ಯೋಜನೆ ಸಿದ್ಧ ಮಾಡಿಕೊಟ್ಟುಕೊಂಡಿದ್ದಾರೆ ಎಂದು ಅಶೋಕ್‌ ಹೇಳಿದರು.