ಮನೆ ಅಪರಾಧ ಜೈಲಿನಲ್ಲಿ ದರ್ಶನ್​ ಗೆ ರಾಜಾತಿಥ್ಯ: ಪ್ರಕರಣದ ತನಿಖೆಗೆ 3 ವಿಶೇಷ ತಂಡ ರಚನೆ

ಜೈಲಿನಲ್ಲಿ ದರ್ಶನ್​ ಗೆ ರಾಜಾತಿಥ್ಯ: ಪ್ರಕರಣದ ತನಿಖೆಗೆ 3 ವಿಶೇಷ ತಂಡ ರಚನೆ

0

ಬೆಂಗಳೂರು: ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ​ಗೆ ಚಹಾ ಮತ್ತು ಸಿಗರೇಟ್​​ ನೀಡಿರುವ ಫೋಟೋ ಬಹಿರಂಗಗೊಂಡಿದೆ.

Join Our Whatsapp Group

ಜೈಲಿನ ನಿಯಮಗಳನ್ನು ಉಲ್ಲಂಘಟನೆ ಮಾಡಿದ್ದಕ್ಕಾಗಿ ಪರಪ್ಪನ ಅಗ್ರಹಾರ ಪೊಲೀಸ್​ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣ ದಾಖಲಾಗಿದ್ದು, ಎರಡರಲ್ಲಿ ಎ1 ದರ್ಶನ್​ ಆಗಿದ್ದಾರೆ. ಈ ಮೂರು ಪ್ರಕರಣದ ತನಿಖೆಗಾಗಿ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತೀಮಾ ಅವರು ಮೂರು ವಿಶೇಷ ತಂಡ ರಚನೆ ಮಾಡಿದ್ದಾರೆ.

ಮೂರು ವಿಶೇಷ ತಂಡಗಳು

ಬೇಗೂರು ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಕೃಷ್ಣಕುಮಾರ್ ಅವರಿಂದ ಮೊದಲನೇ ಪ್ರಕರಣದ ತನಿಖೆ ನಡೆಯುತ್ತದೆ. ಜೈಲಿನ ಲಾನ್​ನಲ್ಲಿ ಕುಳಿತು ಕಾಫಿ ಸಿಗರೇಟ್ ಸೇವನೆ, ರೌಡಿಶೀಟರ್​ಗಳ ಜೊತೆ ದರ್ಶನ್ ಬೇರೆತಿದ್ದು ಹೇಗೆ? ಲಾನ್​ನಲ್ಲಿ ಎಲ್ಲರೂ ಒಟ್ಟಿಗೆ ಕೂರಲು ಚೇರ್ ವ್ಯವಸ್ಥೆ ಮಾಡಿದವರು ಯಾರು? ಕಾಫಿ ಮಗ್ ಹೇಗೆ ಬಂತು? ಹಾಗೂ ಜೈಲಿನಲ್ಲಿ ಸಿಗರೇಟ್, ಮದ್ಯ, ಮಾದಕವಸ್ತು ನಿಷೇಧವಿದ್ದರೂ, ಹೇಗೆ ಒಳಗೆ ಬಂತು ಅಂತ ತನಿಖೆ ನಡೆಸುತ್ತಾರೆ.

ಎರಡನೇ ಪ್ರಕರಣ: ಮೊಬೈಲ್ ಫೋನ್​ನಲ್ಲಿ ಫೋಟೋ ಹಾಗೂ ವಿಡಿಯೋ ಚಿತ್ರೀಕರಣದ ಬಗ್ಗೆ ಹುಳಿಮಾವು ಪೊಲೀಸ್​ ಠಾಣೆ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ತನಿಖೆ ನಡೆಸುತ್ತಾರೆ. ಫೋಟೋ ತೆಗೆದಿದ್ದು ಹಾಗೂ ವಿಡಿಯೋ ಕರೆ ಮಾಡಿದ್ದು ಯಾರು? ಜೈಲಿನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ, ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ.? ಒದಗಿಸಿದವರು ಯಾರು, ನೆಟ್ ಕನೆಕ್ಷನ್ ಹೇಗೆ ಬಂತು ಎಂಬೆಲ್ಲ ತನಿಖೆ ನಡಯುತ್ತದೆ. ಹೊರಗಡೆಯಿಂದ ಜೈಲಿನೊಳಗೆ ವಿಡಿಯೋ ಕರೆ ಮಾಡಿರುವ ಬಗ್ಗೆಯೂ ತನಿಖೆ ನಡೆಯಲಿದೆ.

ಜೈಲು ಅಧಿಕಾರಿಗಳ ಕರ್ತವ್ಯ ಲೋಪದ ವಿರುದ್ಧ ದಾಖಲಾಗಿರುವ ಮೂರನೇ ಪ್ರಕರಣವನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್​ ಠಾಣೆಯ ಎಸಿಪಿ ಮಂಜುನಾಥ್ ನೇತೃತ್ಚದ ತಂಡ ತನಿಖೆ ನಡೆಸುತ್ತದೆ.

ರೇಣುಕಾಸ್ವಾಮಿ ಮರ್ಡರ್​ ಕೇಸ್ ​ನಲ್ಲಿ ಜೈಲು ಪಾಲಾದ ದರ್ಶನ್​ಗೆ ಜಾಮೀನು ಕೊಡಿಸಲು ಅವರ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಜೈಲಿನ ಒಳಗೆ ದರ್ಶನ್​ ಅಕ್ರಮ ಎಸಗಿರುವುದು ಬೆಳಕಿಗೆ ಬಂದಿದೆ. ಮರ್ಡರ್​ ಕೇಸ್​ ಜೊತೆ ಹೊಸ ಹೊಸ ಕೇಸ್​ಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ದರ್ಶನ್​ಗೆ ಜಾಮೀನು ಸಿಗುವುದು ಇನ್ನಷ್ಟು ಕಷ್ಟ ಆಗಲಿದೆ. ಕೊಲೆ ಕೇಸ್​ ತನಿಖೆ ಹಂತದಲ್ಲಿ ದರ್ಶನ್​ ಎ2 ಆಗಿದ್ದಾರೆ. ಆದರೆ ಚಾರ್ಜ್​ಶೀಟ್​ ಸಲ್ಲಿಸುವಾಗ ಎ1 ಮಾಡುವ ಸಾಧ್ಯತೆ ಕೂಡ ದಟ್ಟವಾಗಿದೆ.