ಮನೆ ಅಪರಾಧ ಬೆಂಗಳೂರು: ಪತ್ನಿಯನ್ನ ತಾನೇ ಕೊಲೆ ಮಾಡಿ ನಾಟಕ ಆಡ್ತಿದ್ದ ಪತಿ ಬಂಧನ

ಬೆಂಗಳೂರು: ಪತ್ನಿಯನ್ನ ತಾನೇ ಕೊಲೆ ಮಾಡಿ ನಾಟಕ ಆಡ್ತಿದ್ದ ಪತಿ ಬಂಧನ

0

ಬೆಂಗಳೂರು: ಅನುಮಾನದ ಭೂತವನ್ನು ತಲೆಗೇರಿಸಿಕೊಂಡಿದ್ದ ಪತಿ ತನ್ನ ಪತ್ನಿಯನ್ನು ತೋಟಕ್ಕೆ ಕರೆದುಕೊಂಡು ಹೋಗಿ ಆಕೆಯನ್ನು ಕೊಲೆ ಮಾಡಿದ ಬಳಿಕ ಯಾರೋ ಕೊಲೆ ಮಾಡಿದ್ದಾರೆ ಎಂದು ನಾಟಕವಾಡಿದ್ದ ಪತಿಯನ್ನು  ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಮೆಹಬೂಬ್ ಪಾಷಾ(50) ಬಂಧಿತ ಕೊಲೆ ಆರೋಪಿ.

ಬಾಗಲೂರಿನ ರಜಾಕ್ ಸಾಬ್ ಪಾಳ್ಯದಲ್ಲಿ ವಾಸವಿದ್ದ ಮೆಹಬೂಬ್, ಕೂಲಿ ಕೆಲಸ ಮಾಡಿಕೊಂಡು ಪತ್ನಿ ಮುಮ್ತಾಜ್ ಜೊತೆ ವಾಸವಿದ್ದ. ಆ.25ರಂದು ಪೊಲೀಸ್ ಠಾಣೆಗೆ ಬಂದು ನನ್ನ ಪತ್ನಿ ಕೊಲೆಯಾಗಿದ್ದಾಳೆ. ಅಪರಿಚಿತ ವ್ಯಕ್ತಿಗಳು ಸೀಬೆ ತೋಟದಲ್ಲಿ‌ ಕೊಲೆ ಮಾಡಿದ್ದಾರೆ ಎಂದು‌ ದೂರು ಕೊಟ್ಟಿದ್ದ. ಆ.24ರಂದು ನಾನು ಫಂಕ್ಷನ್​ಗೆ ಅಂತ ಹೊರಗಡೆ ಹೋಗಿದ್ದೆ. ಆ.24 ಸಂಜೆಯಿಂದ ಪತ್ನಿಗೆ ಕರೆ ಮಾಡಿದ್ರೆ ರಿಸೀವ್ ಮಾಡಿಲ್ಲ. ಬೆಳಗ್ಗೆ ತೋಟದ ಬಳಿ ಹೋದಾಗ ಪತ್ನಿ ಹೆಣವಾಗಿ ಬಿದ್ದಿದ್ದಳು. ಯಾರೋ ನನ್ನ ಪತ್ನಿಯನ್ನ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದ.

ಪೊಲೀಸರು ಕೂಡ ದೂರು ಸ್ವೀಕರಿಸಿ ತನಿಖೆ ಶುರು ಮಾಡಿದ್ರು. ಆದರೆ ಪೊಲೀಸರಿಗೆ ಈತನ ಮಾತಿನ ಮೇಲೆ ಅನುಮಾನ ಮೂಡಿತ್ತು. ಆರೋಪಿ ಮೆಹಬೂಬ್ ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಲಿಲ್ಲ. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಅಸಲಿ ವಿಚಾರ ಬಯಲಿಗೆ ಬಂದಿದೆ. ಹೆಂಡತಿ‌ ಮೇಲೆ ಅನುಮಾನ ಪಟ್ಟು ತಾನೇ ಕೊಲೆಗೈದಿರೋದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ.

ಹಣ್ಣು ಕೀಳಬೇಕು ಬಾ ಎಂದು ಆ.24ರಂದು ತಾನು ಕೆಲಸ ಮಾಡ್ತಿದ್ದ ತೋಟಕ್ಕೆ ಆರೋಪಿ ಮೆಹಬೂಬ್ ತನ್ನ ಪತ್ನಿಯನ್ನ ಕರೆದುಕೊಂಡು ಹೋಗಿದ್ದ. ಈ ವೇಳೆ‌ ಪತ್ನಿ ಜೊತೆ ಜಗಳ ತೆಗೆದು ಕಬ್ಬಿಣದ ವಸ್ತುವಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ‌ ಶವ ಅಲ್ಲೇ ಬಿಟ್ಟು ರಾತ್ರಿಯಿಡಿ ಮನೆಗೆ ಹೋಗದೆ ಹೊರಗಡೆಯೇ ಇದ್ದು ಬೆಳಗ್ಗೆ ಮನೆಗೆ ತೆರಳಿ ಏರಿಯಾದಲ್ಲಿ ಯಾರಿಗೂ ಅನುಮಾನ ಬರದ ಹಾಗೆ ಇದ್ದು ತಾನೇ ಹೋಗಿ ಪೊಲೀಸರಿಗೆ ದೂರು ನೀಡಿ ನ್ಯಾಯ ಕೊಡಿಸಿ ಅಂದು ಮೊಸಳೆ ಕಣ್ಣೀರು ಹಾಕಿದ್ದಾನೆ. ಸದ್ಯ ಆರೋಪಿ ಮೆಹಬೂಬ್ ಪೊಲೀಸರ ತನಿಖೆಯಲ್ಲಿ ಹತ್ಯೆಯ ಸತ್ಯ ಬಾಯ್ಬಿಟ್ಟಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.