ಮನೆ ಮನರಂಜನೆ ಟೀಸರ್​ನಿಂದ ನಿರೀಕ್ಷೆ ಹುಟ್ಟುಹಾಕಿದ ‘ಮಾರ್ನಮಿ’  ಚಿತ್ರ

ಟೀಸರ್​ನಿಂದ ನಿರೀಕ್ಷೆ ಹುಟ್ಟುಹಾಕಿದ ‘ಮಾರ್ನಮಿ’  ಚಿತ್ರ

0

ಆಕರ್ಷಕ ಶೀರ್ಷಿಕೆ ಜೊತೆಗೆ ವಿಭಿನ್ನ ಕಥೆ ಹೊಂದಿರುವ ‘ಮಾರ್ನಮಿ’ ಚಿತ್ರತಂಡವು ಶೂಟಿಂಗ್ ​ಗೆ ಸಜ್ಜಾಗುತ್ತಿದೆ. ಚೈತ್ರಾ ಜೆ. ಆಚಾರ್ ಹಾಗೂ ನಟ ರಿತ್ವಿಕ್ ಮುಖ್ಯ ಭೂಮಿಕೆಯಲ್ಲಿರುವ ಈ ಸಿನಿಮಾವು ಟೀಸರ್​ ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಬಗ್ಗೆ ನಿರ್ದೇಶಕ, ಕಲಾವಿದರು ಹಾಗೂ ಇತರರ ತಂಡ ಮಾಹಿತಿ ಹಂಚಿಕೊಂಡಿದೆ.

ಕನ್ನಡದಲ್ಲಿ ವಿಭಿನ್ನ ಕಂಟೆಂಟ್​ನ ಸುಳಿವಿನ ಮೂಲಕವೇ ಸದ್ದು ಮಾಡುವ ಸಿನಿಮಾಗಳು ಗೆದ್ದು ಬೀಗಿದ ಅನೇಕ ಉದಾಹರಣೆಗಳಿವೆ. ಆ ಸಾಲಿಗೆ ಸೇರ್ಪಡೆಗೊಳ್ಳುವ ಸ್ಪಷ್ಟ ಲಕ್ಷಣಗಳನ್ನು ಒಳಗೊಂಡಿರುವ ಚಿತ್ರ ‘ಮಾರ್ನಮಿ’. ‘ಪಿಂಗಾರ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿರುವ ಪ್ರೀತಂ ಆರ್.ಶೆಟ್ಟಿ ಗರಡಿಯಲ್ಲಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ರಿಶಿತ್ ಶೆಟ್ಟಿ ಚೊಚ್ಚಲ ಪ್ರಯತ್ನವೇ ಈ ‘ಮಾರ್ನಮಿ’.

ಈ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಎಸ್​ಆರ್​​ವಿ ಥಿಯೇಟರ್​​ನಲ್ಲಿ ನಡೆಯಿತು. ಈ ವೇಳೆ, ಚಿತ್ರತಂಡವು ಸಿನಿಮಾ ಬಗ್ಗೆ ಹಲವು ಮಾಹಿತಿಗಳನ್ನು ಹಂಚಿಕೊಂಡಿದೆ. ಸಂಗೀತ ನಿರ್ದೇಶಕ ಚರಣ್ ರಾಜ್ ಮಾತನಾಡಿ, ”ತುಂಬಾ ಖುಷಿಯಾಗುತ್ತಿದೆ. ಹೊಸ ತಂಡ, ಹೊಸ ನಿರ್ದೇಶಕರು. ಈ ತಂಡದಲ್ಲಿ ನನ್ನ ಅಚ್ಚುಮೆಚ್ಚಿನ ನಟರೆಲ್ಲಾ ಇದ್ದಾರೆ. ತುಂಬಾ ಒಳ್ಳೆಯ ಕಥೆ. ನನಗೂ ಒಳ್ಳೆಯ ಅವಕಾಶ ಇದೆ ಎನಿಸಿತು. ನಾನೂ ಅವಕಾಶ ಪಡೆದುಕೊಂಡಿದ್ದೇನೆ. ಸಂಗೀತದ ಕೆಲಸ ಶುರು ಮಾಡಿದ್ದೇವೆ. ಟೈಟಲ್ ಟೀಸರ್ ಮಾಡಿದ್ದೇವೆ. ಹಾಡುಗಳ ಕಂಪೋಸ್ ಮಾಡಲು ಆರಂಭಿಸಿದ್ದೇವೆ. ಇಷ್ಟೇ ಸಾಂಗ್ ಇದೆ ಅಂತಾ ನಿರ್ಧಾರ ಮಾಡಿಲ್ಲ. ಆದರೆ ಐದು ಹಾಡುಗಳಿರುತ್ತವೆ” ಎಂದು ಹೇಳಿದರು.

ನಿರ್ದೇಶಕ ರಿಶಿತ್ ಶೆಟ್ಟಿ ಮಾತನಾಡಿ, ”ಒಂದಷ್ಟು ಸಿನಿಮಾಗಳಲ್ಲಿ ಅಸಿಸ್ಟೆಂಟ್, ಅಸೋಸಿಯೆಟ್ ಆಗಿ, ರೈಟರ್ ಆಗಿ ಕೆಲಸ ಮಾಡಿದ್ದೇನೆ. ಪ್ರೀತಂ ಶೆಟ್ಟಿ ಜೊತೆ ಒಂದಷ್ಟು ಚಿತ್ರಗಳಿಗೆ ಕೆಲಸ ಮಾಡಿದ್ದೇನೆ. ಮಂಗಳೂರಲ್ಲಿ ಸ್ಕ್ರಿಪ್ಟ್ ಕೆಲಸಕ್ಕೆ ಹೋಗಿದ್ದಾಗ ಸುಧಿ ಪರಿಚಯವಾಗಿದ್ದರು. ಅವರು ಒಂದು ಕಥೆ ಮಾಡಿಕೊಂಡಿದ್ದು, ಡೈರೆಕ್ಷನ್ ಮಾಡಲು ಇಷ್ಟವಿಲ್ಲ ಅಂದಾಗ ನಾನು ಕಥೆ ಕೇಳಿದೆ. ಅವರು ಪ್ರೀತಿಯಿಂದ ಕೊಟ್ಟರು. ರಿತ್ವಿಕ್ ಅವರಿಗೆ ಹೇಳಿದೆ. ಅವರು ಇದಕ್ಕೆ ಏನೋ ಬೇಕೋ ಅನಿಸುತ್ತಿದೆ ಎಂದು ಹೇಳಿದರು” ಎಂದು ತಿಳಿಸಿದರು.

ನಟ ರಿತ್ವಿಕ್ ಮಾತನಾಡಿ, ”ಈ ಚಿತ್ರದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಒಂದು ಕಥೆಯನ್ನು ಚೆನ್ನಾಗಿ ಎಳೆದುಕೊಂಡು ಬಂದಿರುವುದು ರಿಶಿತ್ ಶೆಟ್ಟಿ. ನಮಗೆ ಬೇಕು ಅಂದಿದ್ದೆಲ್ಲ ಕೊಡುತ್ತಿರುವುದು, ನಮಗೆ ಸಪೋರ್ಟ್ ಮಾಡುತ್ತಿರುವುದು ನಿರ್ಮಾಪಕ ನಿಶಾಂತ್ ಸರ್. ಇಂತಹ ನಿರ್ಮಾಪಕರು ಸಿಗುವುದು ಅಪರೂಪ. ಈ ರೀತಿ ನಿರ್ಮಾಪಕರು ಇಂಡಸ್ಟ್ರಿಗೆ ಸಿಗಬೇಕು. ಇವರು ಗೆದ್ದರೆ ಮತ್ತಷ್ಟು ಸಿನಿಮಾಗಳನ್ನು ಮಾಡುತ್ತಾರೆ. ಕಥೆ ಚೆನ್ನಾಗಿದೆ. ಕರಾವಳಿ ಭಾಗದಲ್ಲಿ ನಡೆಯುವ ಅದ್ಭುತ ಲವ್ ಸ್ಟೋರಿ. ದಸರಾ ದಿನವನ್ನು ‘ಮಾರ್ನಮಿ’ ಎಂದು ಕರೆಯುತ್ತಾರೆ. ಚಿತ್ರದಲ್ಲಿ ಒಳ್ಳೆ ಸ್ಟಾರ್​ಗಳಿದ್ದಾರೆ. ಅದ್ಭುತ ತಾಂತ್ರಿಕ ವರ್ಗವೂ ಇದೆ” ಎಂದು ಮಾಹಿತಿ ಹಂಚಿಕೊಂಡರು.

”ಕಥೆ ಬಹಳ ಇಷ್ಟವಾಯ್ತು. ಡೇಟ್ ಸಮಸ್ಯೆ ಇದೆ ಆಗಲ್ಲ ಎಂದೆ. ಮತ್ತೆ ಕಥೆ ನನ್ನ ಬಳಿಯೇ ಬಂತು. ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳೋಣ ಎಂದರು. ಅದ್ಭುತ ಕಥೆ. ಟೆಕ್ನಿಕಲ್ ಆಗಿ ಚಿತ್ರ ಸ್ಟ್ರಾಂಗ್ ಇದೆ. ರಿಷಿತ್ ಕಥೆ ಹೇಳಲು ಬಂದಾಗ ಎಲ್ಲಿಯೂ ಬೇಸರ ಆಗಲಿಲ್ಲ. ಇಷ್ಟು ಬೇಗ ಮುಗಿಯಿತಾ ಅನಿಸಿತು. ರಿತ್ವಿಕ್ ಅವರ ಜೊತೆ ಕೆಲಸ ಮಾಡಲು ಖುಷಿ ಇದೆ. ಕಥೆ ನಂಬಿದ್ದೇವೆ, ಚರಣ್ ರಾಜ್ ಅವರ ಮ್ಯೂಸಿಕ್ ಇದೆ. ನಾನು ಶೂಟಿಂಗ್​ಗೆ ಹೊರಡಲು ಎಕ್ಸೈಟ್ ಆಗಿದ್ದೇನೆ” ಎಂದು ನಾಯಕಿ ಚೈತ್ರಾ ಆಚಾರ್ ಹೇಳಿಕೊಂಡರು.

ಮಾರ್ನಮಿ ಸಿನಿಮಾದಲ್ಲಿ ರಿತ್ವಿಕ್ ಹಾಗೂ ಚೈತ್ರಾ ಜೆ. ಆಚಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಪ್ರಕಾಶ್ ತುಮಿನಾಡು, ಸೋನು ಗೌಡ, ಜ್ಯೋತೀಶ್ ಶೆಟ್ಟಿ, ರೋಚಿತ್, ಯಶ್ ಶೆಟ್ಟಿ, ಮೈಮ್ ರಾಮದಾಸ್ ಹಾಗೂ ಚೈತ್ರ ಶೆಟ್ಟಿ ಸೇರಿದಂತೆ ಹಲವರು ತಾರಾ ಬಳಗದಲ್ಲಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನಿರ್ದೇಶನ ಹಾಗೂ ಶಿವಸೇನಾ ಛಾಯಾಗ್ರಹಣವಿದೆ.

ಚಿತ್ರದ ಟೈಟಲ್ ಟೀಸರ್ ಗುನಾಧ್ಯ ಪ್ರೊಡಕ್ಷನ್ಸ್ ಯೂಟ್ಯೂಬ್ ಚಾನೆಲ್​ನಲ್ಲಿ ಬಿಡುಗಡೆಯಾಗಿದ್ದು, ನಿರೀಕ್ಷೆ ಹುಟ್ಟಿಸಿದೆ. ಕರಾವಳಿ ಭಾಗದ ಹುಲಿವೇಷದ ಹಿನ್ನೆಲೆ ಹಾಗೂ ಹುಲಿವೇಷ ಸಂಸ್ಕೃತಿಯ ಎಳೆಯೂ ಚಿತ್ರದಲ್ಲಿರಲಿದೆ. ಚೆಂದದ ಲವ್ ಸ್ಟೋರಿ ಜೊತೆಗೆ ಆಕ್ಷನ್, ಎಮೋಷನ್, ಕಾಮಿಡಿ ಮಿಶ್ರಣದ ಮಾರ್ನಮಿ ಸಿನಿಮಾವನ್ನು ಗುನಾಧ್ಯ ನಿರ್ಮಾಣ ಸಂಸ್ಥೆ ಅಡಿಯಲ್ಲಿ ಶಿಲ್ಪಾ ನಿಶಾಂತ್ ನಿರ್ಮಾಣ ಮಾಡುತ್ತಿದ್ದಾರೆ. ಅಕ್ಟೋಬರ್ 1ರಿಂದ ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಚಿತ್ರತಂಡ ಸಜ್ಜಾಗಿದೆ.