ಮನೆ ಅಪರಾಧ ಖ್ಯಾತ ಗಾಯಕ ಕೆಕೆ ಸಾವು: ಅಸಹಜ ಸಾವು ಪ್ರಕರಣ ದಾಖಲು

ಖ್ಯಾತ ಗಾಯಕ ಕೆಕೆ ಸಾವು: ಅಸಹಜ ಸಾವು ಪ್ರಕರಣ ದಾಖಲು

0

ಕೋಲ್ಕತ್ತ: ಖ್ಯಾತ ಗಾಯಕ ಕೃಷ್ಣಕುಮಾರ್ ಕುನ್ನತ್ (53) ಅವರ ನಿಧನಕ್ಕೆ ಸಂಬಂಧಿಸಿ ಕೋಲ್ಕತ್ತದ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣವನ್ನು ದಾಖಲಿಸಲಾಗಿದ್ದು, ಕುಟುಂಬಸ್ಥರ ಒಪ್ಪಿಗೆ ದೊರೆತ ಬಳಿಕ ಪಂಚನಾಮೆ ಹಾಗೂ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕುಟುಂಬಸ್ಥರು ಈಗಾಗಲೇ ಆಸ್ಪತ್ರೆಗೆ ತಲುಪಿದ್ದಾರೆ. ಇತ್ತ ಕೋಲ್ಕತ್ತದ ಎಸ್‌ಎಸ್‌ಕೆಎಂ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕೋಲ್ಕತ್ತದ ಜಂಟಿ ಪೊಲೀಸ್ ಕಮಿಷನರ್ (ಅಪರಾಧ ವಿಭಾಗ) ಮುರಳೀಧರ್ ಶರ್ಮಾ ನೇತೃತ್ವದ ಅಧಿಕಾರಿಗಳ ತಂಡ ಕೃಷ್ಣಕುಮಾರ್ ಕುನ್ನತ್ ತಂಗಿದ್ದ ಹೋಟೆಲ್‌ ಒಬೆರಾಯ್ ಗ್ರ್ಯಾಂಡ್‌ಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಕೃಷ್ಣಕುಮಾರ್ ಕುನ್ನತ್ ಅವರು ಕೋಲ್ಕತ್ತದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸುಮಾರು ಒಂದು ಗಂಟೆ ಕಾಲ ಹಾಡಿದ್ದರು. ಆದರೆ, ಹೋಟೆಲ್‌ ತಲುಪಿದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.