ಮೈಸೂರು: ಮೈಸೂರು ವಿಶ್ವವಿದ್ಯಾನಿಲಯ ತಾಂತ್ರಿಕ ಶಾಲೆ ಆರಂಭವಾಗಿ ಆರು ತಿಂಗಳ ಮೊದಲ ಸೆಮಿಸ್ಟರ್ ಪೂರ್ಣಗೊಂಡಿದೆ. ಹೀಗಾಗಿ ಇನ್ನು ಮೂರುವರೆ ವರ್ಷದಲ್ಲಿ ವಿವಿಯಿಂದ 180 ಎಂಜಿನಿಯರ್ ಗಳು ಹೊರಹೊಮ್ಮಲಿದ್ದಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಪ್ರೊ.ಜಿ. ಹೇಮಂತ ಕುಮಾರ್ ತಿಳಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ತಾಂತ್ರಿಕ ಶಾಲೆಯಲ್ಲಿ ಮೊದಲ ವರ್ಷದ ವಿದ್ಯಾರ್ಜನೆ ಆರಂಭಿಸಿರುವ ವಿದ್ಯಾರ್ಥಿಗಳಿಗೆ ಬೋಧನೆ ವಿಷಯಗಳ ಕುರಿತ ಪರಿಚಯಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾನಾ ಮೈಲಿಗಲ್ಲುಗಳನ್ನು ಸಾಧಿಸಿರುವ ಮೈಸೂರು ವಿಶ್ವ ವಿದ್ಯಾನಿಲಯ ಇನ್ನು ಮುಂದೆ ತಾಂತ್ರಿಕ ಪದವಿ ವಿದ್ಯಾರ್ಥಿಗಳನ್ನು ಸೃಷ್ಟಿಸಲಿದೆ. ಈ ವಿದ್ಯಾರ್ಥಿಗಳು ಸಂಸ್ಥೆಯ ಮೊದಲ ರಾಯಭಾರಿಯಾಗಲಿದ್ದಾರೆ. ಈ ವಿದ್ಯಾರ್ಥಿಗಳು ಮುಂದಿನ ಭವಿಷ್ಯದ ಬಗ್ಗೆ ದೊಡ್ಡ ಕನಸುಗಳನ್ನು ಕಾಣಬೇಕು. ಉತ್ತಮ ಭವಿಷ್ಯ ರೂಪಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಕಾಲೇಜನ್ನು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮೈಸೂರು ವಿವಿ ಜಾಗದಲ್ಲಿ ಆರಂಭಿಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ನಾನಾ ಕಾರಣಗಳಿಂದ ವಿವಿ ಆವರಣದಲ್ಲಿಯೆ ಪ್ರಾರಂಭಿಸಲಾಯಿತು. ಈ ಮಾದರಿಯ ಕಾಲೇಜು ಆರಂಭಿಸಲು ರಾಜ್ಯದಿಂದ 60ಕ್ಕೂ ಹೆಚ್ಚು ಸಂಸ್ಥೆಗಳು ಎಐಸಿಟಿಇ(ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕಷೇಷನ್)ಗೆ ಮನವಿ ಸಲ್ಲಿಸಿದ್ದವು. ಆದರೆ ಮೈಸೂರು ವಿವಿಗೆ ಮಾತ್ರವೇ ಅನುಮತಿ ಸಿಕ್ಕಿದೆ. ಹೀಗಾಗಿ ಈ ಸೌಲಭ್ಯವನ್ನು ವಿದ್ಯಾರ್ಥಿಗಳು ಅರ್ಥಪೂರ್ಣವಾಗಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡಿಕೆರೆ ಗೋಪಾಲ್, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಮೈಸೂರು ವಿವಿ ರಿಜಿಸ್ಟಾರ್ ಪ್ರೊ.ಆರ್. ಶಿವಪ್ಪ, ಡಾ.ಎ.ಪಿ. ಜ್ಞಾನಪ್ರಕಾಶ್, ವಿಶೇಷ ಅಧಿಕಾರಿ ಡಾ.ಚೇತನ್, ಎಂಯುಎಸ್ ಇ ಡೈರೆಕ್ಟರ್ ಡಾ.ಟಿ. ಅನಂತಪದ್ಮನಾಭ ಇದ್ದರು.