ಮನೆ ರಾಜಕೀಯ ಬನ್ನಿ ಮೋದಿ ನಮ್ಮ ಊರಿಗೆ… ಟಾರು ಕಾಣದ ನಮ್ಮ ಬೀದಿಗೆ…: ಆಪ್ ವ್ಯಂಗ್ಯ

ಬನ್ನಿ ಮೋದಿ ನಮ್ಮ ಊರಿಗೆ… ಟಾರು ಕಾಣದ ನಮ್ಮ ಬೀದಿಗೆ…: ಆಪ್ ವ್ಯಂಗ್ಯ

0

ಬೆಂಗಳೂರು: ಬನ್ನಿ ಮೋದಿ ನಮ್ಮ ಊರಿಗೆ… ಟಾರು ಕಾಣದ ನಮ್ಮ ಬೀದಿಗೆ… 40-80 ಪರ್ಸೆಂಟ್‌ ನುಂಗಿದ ನಿಮ್ಮ ಬಿಜೆಪಿ ನಾಯಕರ ಭ್ರಷ್ಟಾಚಾರದ ತವರಿಗೆ, ಹೇಳಿಬಿಡಿ ನಿಮ್ಮದೆಷ್ಟು – ನಿಮ್ಮ ಕೋರ್ ಕಮಿಟಿಗೆಷ್ಟು? ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕ ಚಾಟಿ ಬೀಸಿದೆ.

ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮೋದಿ ಆಗಮನದ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಮುಚ್ಚುತ್ತಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜಧಾನಿಗೆ ನ.11ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಮಿಸುತ್ತಿರುವುದರಿಂದ ಬಿಬಿಎಂಪಿ ತ್ವರಿತಗತಿಯಲ್ಲಿ ರಸ್ತೆಗಳಿಗೆ ಕಾಯಕಲ್ಪ ನೀಡುವ ಕಾರ್ಯದಲ್ಲಿ ತೊಡಗಿದೆ.

ಪ್ರಧಾನಿ ಸಾಗುವ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಪಾಲಿಕೆ ಆದ್ಯತೆ ನೀಡಿದ್ದು, ಸಮರೋಪಾದಿಯಲ್ಲಿ ಈ ಕಾರ್ಯ ನಡೆದಿದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಗುಬ್ಬಿ ತೋಟದಪ್ಪ ರಸ್ತೆ, ಎಚ್‌ಎಎಲ್ ವಿಮಾನ ನಿಲ್ದಾಣ ರಸ್ತೆ ಮತ್ತು ಓಕಳೀಪುರಂ ರಸ್ತೆ ಸೇರಿ ನಗರದ ವಿವಿಧ ರಸ್ತೆಗಳಿಗೆ ಡಾಂಬರೀಕರಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ.

ಈ ಕುರಿತು #ಬೊಮ್ಮಾಯಿಗುಂಡಿಮುಚ್ಚಿಸಿದರುಮೋದಿ ಎಂಬ ಹ್ಯಾಷ್‌ಟ್ಯಾಗ್ ಬಳಸಿ ಸರಣಿ ಟ್ವೀಟ್ ಮಾಡಿರುವ ಆಮ್‌ ಆದ್ಮಿ ಪಕ್ಷದ ರಾಜ್ಯ ಘಟಕ ,ಮಾಡುವುದು 40 ಪರ್ಸೆಂಟ್‌ ಅನಾಚಾರ, ಮೋದಿ ಬಂದಾಗ ಮಾಡ್ತಾರೆ ಬೃಂದಾವನ. ಇಷ್ಟೇ ಯಾಕೆ , ಬಿಟ್ರೆ ಅಕ್ಕಪಕ್ಕ ಏನು ಕಾಣದಂತೆ ಬಿಳಿಯ ಬಟ್ಟೆ ಕಟ್ಟಿಬಿಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಕಣ್ಣಿಗೆ ಬಟ್ಟೆ ಕಟ್ಟಿದ್ದರು. ಬಿಜೆಪಿಯವರು ಮೋದಿ ಕಣ್ಣಿಗೆ ಬಟ್ಟೆ ಕಟ್ಟೋ ಮನೋಭಾವದವರು ಎಂದು ವ್ಯಂಗ್ಯ ಮಾಡಿದೆ.

 ‘ಧನ್ಯವಾದಗಳು ಮೋದಿಯವರೇ ತಿಂಗಳಿಗೊಮ್ಮೆ ಬರ್ತಾ ಇರಿ’ ಎಂದು ಕುಹಕವಾಡಿದೆ.

2020ರ ಫೆಬ್ರುವರಿ ತಿಂಗಳಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಿದ್ದರು. ಅದು ವರೆಗೆ ಗುಂಡಿಗಳು ತುಂಬಿದ್ದ ಅಹಮದಾಬಾದಿನ ಅನೇಕ ರಸ್ತೆಗಳು ಟ್ರಂಪ್‌ ಆಗಮನದ ಹಿನ್ನೆಲೆಯಲ್ಲಿ ಡಾಂಬರಿನಿಂದ ಕಂಗೊಳಿಸಿದ್ದವು. ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ಮಾರ್ಗಗಳು ನಿರ್ಮಾಣವಾಗಿದ್ದವು. ಮೇಲಾಗಿ ರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿದ್ದ ಎಲ್ಲಾ ಬಗೆಯ ‘ಅಂದಗೇಡಿ ಆಕೃತಿ’ಗಳನ್ನು ಮರೆಮಾಚಲು ಹಸಿರು ಬಣ್ಣದ ಪರದೆಗಳನ್ನು ಕಟ್ಟಲಾಗಿತ್ತು. ಅದಕ್ಕಿಂತ ಮುಖ್ಯವಾಗಿ ಟ್ರಂಪ್‌ ಸಂಚರಿಸುವ ಹಾದಿಯಲ್ಲಿ ಇರುವ ಒಂದೆರಡು ಕೊಳೆಗೇರಿಗಳು ಗೋಚರಿಸದಂತೆ ಗೋಡೆಗಳು ಎದ್ದುನಿಂತಿದ್ದವು. ಟ್ರಂಪ್‌ ಆಗಮನಕ್ಕಾಗಿ ಗುಜರಾತ್‌ನ ಬಿಜೆಪಿ ಸರ್ಕಾರ ಮಾಡಿದ್ದ ಈ ವ್ಯವಸ್ಥೆ ಭಾರೀ ಟೀಕೆಗೆ ಗುರಿಯಾಗಿತ್ತು.

ಹಿಂದಿನ ಲೇಖನನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರೀಸ್ : ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಅತ್ಯಾಚಾರ ಪ್ರಕರಣ: ಚಾಕೊಲೇಟ್ ರೂಪದ ಅಮಲು ಪದಾರ್ಥ ನೀಡಿ ಅತ್ಯಾಚಾರ, ಜೀವ ಬೆದರಿಕೆ- ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ