ಮನೆ ಕಾನೂನು ವಕೀಲರ ಮೇಲೆ ದೌರ್ಜನ್ಯ: ಹಾನಗಲ್ ಪಿಎಸ್’ಐ ಶ್ರೀಶೈಲ ಪಟ್ಟಣಶೆಟ್ಟಿ ಅಮಾನತು

ವಕೀಲರ ಮೇಲೆ ದೌರ್ಜನ್ಯ: ಹಾನಗಲ್ ಪಿಎಸ್’ಐ ಶ್ರೀಶೈಲ ಪಟ್ಟಣಶೆಟ್ಟಿ ಅಮಾನತು

0

ಹಾವೇರಿ(Haveri): ಅಶಿಸ್ತು ಮತ್ತು ಕರ್ತವ್ಯ ಲೋಪ ಆರೋಪ ಹಿನ್ನೆಲೆ ಹಾನಗಲ್​ ಪೊಲೀಸ್​ ಠಾಣಾ ಪಿಎಸ್’​ಐ ಶ್ರೀಶೈಲ​ ಪಟ್ಟಣಶೆಟ್ಟಿ ಅವರನ್ನು ಕೆಲಸದಿಂದ ಅಮಾನತುಗೊಳಿಸಿ ಜಿಲ್ಲಾ ಎಸ್’​ಪಿ ಹನುಮಂತರಾಯ ಆದೇಶ ಹೊರಡಿಸಿದ್ದಾರೆ.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಿಸಲು ಪೊಲೀಸ್​ ಠಾಣೆಗೆ ತೆರಳಿದ್ದ ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪ ಶ್ರೀಶೈಲ ಅವರ ಮೇಲಿದೆ.

ಅಲ್ಲದೇ ಅವ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

ಪ್ರಕರಣದ ವಿವರ:

ಡಿಸೆಂಬರ್​ 27 ರಂದು ತಾಲೂಕಿನ ಗೆಜ್ಜಿಹಳ್ಳಿ ಗ್ರಾಮದ ಮಂಜುನಾಥ ಬಾರ್ಕಿ ಎಂಬುವರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ನ್ಯಾಯವಾದಿ ಶಿವಕುಮಾರ ತಳವಾರ ಎಂಬುವರು ಪ್ರಕರಣದ ಕುರಿತು ವಿಚಾರಿಸಲು ಹಾನಗಲ್​ ಪೊಲೀಸ್​ ಠಾಣೆಗೆ ಹೋಗಿದ್ದರು. ಈ ವೇಳೆ ಪಿಎಸ್’​ಐ ಶ್ರೀಶೈಲ ಅವರು ಶಿವಕುಮಾರ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಸಾರ್ವಜನಿಕರ ಎದುರಿಗೆ ಅವಮಾನವಾಗುವಂತೆ ಮಾತನಾಡಿದ್ದಾರೆ. ಅಲ್ಲದೇ ಕೊರಳಪಟ್ಟಿ ಹಿಡಿದು ಜಾತಿ ನಿಂದನೆ ಮಾಡಿದ್ದು, ಹಲ್ಲೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದರು.

ಈ ಸಂಬಂಧ ನ್ಯಾಯವಾದಿ ಶಿವಕುಮಾರ ಅವರು ಶ್ರೀಶೈಲ ವಿರುದ್ಧ ಕಲಂ 323, 504, 506, ಸಹಕಲಂ 34 ಐಪಿಸಿ ಮತ್ತು ಜಾತಿನಿಂದನೆ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪೊಲೀಸ್​ ಠಾಣೆ ಎದುರಿಗೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಪಿಎಸ್‌’ಐ ಅಮಾನತ್ತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಪ್ರಕರಣದ ಗಂಭೀರತೆ ಅರಿತ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಹನುಮಂತರಾಯ ಅವರು ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸಿದ್ದರು.

ಹಿಂದಿನ ಲೇಖನಫುಟ್’ಬಾಲ್ ದಂತಕಥೆ ಪೆಲೆ ನಿಧನ
ಮುಂದಿನ ಲೇಖನನಕಲಿ ವೈದ್ಯರಿಗೆ ಸಿಬಿಐ ಶಾಕ್: ಏಕಕಾಲಕ್ಕೆ 91 ಸ್ಥಳಗಳಲ್ಲಿ ದಾಳಿ