ಬೆಂಗಳೂರು : ಕುರ್ಚಿ ಆಸೆಗಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ವಿರೋಧಿ ಬಣದ ನಾಯಕರನ್ನು ಹೊಂಚು ಹಾಕಿ, ಸಂಚು ರೂಪಿಸಿ, ಮುಗಿಸುತ್ತಿದ್ದಾರೆ ಎಂದು ಜೆಡಿಎಸ್ ಕಿಡಿಕಾರಿದೆ.
ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕಾಂಗ್ರೆಸ್ನಿಂದ ಮುಸ್ಲಿಂ ನಾಯಕ ಅಬ್ದುಲ್ ಜಬ್ಬರ್ ಅಮಾನತು ವಿಚಾರವಾಗಿ ಆಕ್ರೋಶ ಹೊರಹಾಕಿದೆ. ಕಾಂಗ್ರೆಸ್ ಪಕ್ಷದಲ್ಲಿ ಸಾಮಾಜಿಕ ಅನ್ಯಾಯ ನಡೆಯುತ್ತಿದೆ. ಅಂದು ಪರಿಶಿಷ್ಟ ಸಮುದಾಯದ ವಾಲ್ಮೀಕಿ ಜನಾಂಗದ ನಾಯಕ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ಏಕಾಏಕಿ ಕಿತ್ತು ಹಾಕಿದ್ದರು.
ಇಂದು ಅಲ್ಪಸಂಖ್ಯಾತ ಸಮುದಾಯದ ಮುಖಂಡ ಅಬ್ದುಲ್ ಜಬ್ಬರ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಕುರ್ಚಿ ಆಸೆಗಾಗಿ ಡಿಕೆ ಶಿವಕುಮಾರ್ ತಮ್ಮ ವಿರೋಧಿ ಬಣದ ನಾಯಕರನ್ನು ಹೊಂಚು ಹಾಕಿ, ಸಂಚು ರೂಪಿಸಿ, ಒಬ್ಬೊಬ್ಬರನ್ನೇ ಮುಗಿಸುತ್ತಿದ್ದಾರೆ ಎಂದು ಆರೋಪಿಸಿದೆ.
ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ವಿಚಾರದಲ್ಲಿ ಎಲ್ಲವೂ ಸರಿಯಲ್ಲ. ಅಧ್ಯಕ್ಷರು ತಪ್ಪು ಮಾಡಿದರೆ ಕೇವಲ ಕ್ಷಮೆ ಕೇಳಿದರೆ ಸಾಕು, ಆದರೆ ಪರಿಶಿಷ್ಟ ಮತ್ತು ಅಲ್ಪಸಂಖ್ಯಾತ ನಾಯಕರಿಗೆ ಮಾತ್ರ ವಜಾ ಮತ್ತು ಉಚ್ಚಾಟನೆಯ ಶಿಕ್ಷೆ ನೀಡುತ್ತಾರೆ.
ಹಣ ಬಲ, ತೋಳ್ಬಲದಿಂದ ಮೆರೆಯುತ್ತಿರುವ ಡಿಕೆಶಿ ಸ್ವಾರ್ಥಕ್ಕೆ ಕಾಂಗ್ರೆಸ್ಗಾಗಿ ದುಡಿದ ತಳಮಟ್ಟದ ದಲಿತ ಮತ್ತು ಹಿಂದುಳಿದ ವರ್ಗಗಳ ನಾಯಕರನ್ನು ಗುರಿಯಾಗಿಸಿ, ಅವರ ರಾಜಕೀಯ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದಾರೆ. ಇದು ಕಾಂಗ್ರೆಸ್ನ ಅಸಲಿ ಮುಖ ಎಂದು ಟೀಕಿಸಿದೆ.














