ಮನೆ ರಾಜಕೀಯ ಬಹಿರಂಗ ಚರ್ಚೆಗೆ ಆಹ್ವಾನಿಸುವ ಮುನ್ನ ನಮ್ಮ ಬಹಿರಂಗ ಪ್ರಶ್ನೆಗಳಿಗೆ ಉತ್ತರಿಸಿ: ಸಿಎಂ ಸಿದ್ದರಾಮಯ್ಯಗೆ ಬಿವೈವಿ ಸವಾಲ್‌

ಬಹಿರಂಗ ಚರ್ಚೆಗೆ ಆಹ್ವಾನಿಸುವ ಮುನ್ನ ನಮ್ಮ ಬಹಿರಂಗ ಪ್ರಶ್ನೆಗಳಿಗೆ ಉತ್ತರಿಸಿ: ಸಿಎಂ ಸಿದ್ದರಾಮಯ್ಯಗೆ ಬಿವೈವಿ ಸವಾಲ್‌

0

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ನಮ್ಮನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುವ ಮುನ್ನ ನಮ್ಮ ಬಹಿರಂಗ ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸವಾಲೆಸೆದಿದ್ದಾರೆ.

ಈ ಕುರಿತು ತಮ್ಮ ಎಕ್ಸ್‌ ಖಾತೆಯಲ್ಲಿ ಸಂದೇಶ ಹಂಚಿಕೊಂಡಿರುವ ಅವರು, “ಆಡು ಮುಟ್ಟದ ಸೊಪ್ಪಿಲ್ಲ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಸದ ವಸ್ತುಗಳಿಲ್ಲ”. ನಿಮ್ಮ ಸರ್ಕಾರದ ಸರತೀ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಜನರ ಗಮನವನ್ನು ಬೇರೆಡೆಗೆ ಸೆಳೆಯಬಹುದು ಎಂದು ದಾವಣಗೆರೆ ಕಾರ್ಯಕ್ರಮದಲ್ಲಿ ಬಾಲಿಶವಾಗಿ ಟೀಕೆ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.

ವಿಜಯೇಂದ್ರ ಅವರ ಪ್ರಶ್ನೆಗಳು ಹೀಗಿವೆ.

• ನಿಮ್ಮ ಹೊಣೆಗೇಡಿತನದ ನಿರ್ಧಾರದಿಂದಾಗಿ ಕ್ರಿಕೆಟ್ ಕಾಲ್ತುಳಿತದಲ್ಲಿ ಮಡಿದವರು, ನೊಂದವರಿಗಾಗಿ ಕನಿಷ್ಠವೂ ನೀವು ಮಿಡಿಯಲ್ಲಿಲ್ಲ, ನೈತಿಕ ಹೊಣೆ ಹೊರುವ ಮಾತೇ ಹೊರಡುವುದಿಲ್ಲ.
• ಅಧಿಕಾರಕ್ಕೆ ಅಂಟಿ ಕೂರುವ ಜಾಯಮಾನಕ್ಕೆ ಸೇರಿದ ನೀವು ₹165 ಕೋಟಿ ವ್ಯಯಿಸಿದ ಕಾಂತರಾಜು ವರದಿಗೆ ರಾಹುಲ್ ಗಾಂಧಿ ಅಣತಿ ಯಂತೆ ತರ್ಪಣ ಬಿಟ್ಟು ಅಹಿಂದವರ್ಗಕ್ಕೆ ಮಕ್ಮಲ್ ಟೋಪಿ ಹಾಕಿದಿರಿ.
• ಜನಗಣತಿಯೊಂದಿಗೆ ಜಾತಿ ಗಣತಿಯನ್ನೂ ಸೇರ್ಪಡೆಗೊಳಿಸಿ ಐತಿಹಾಸಿಕ ಅಧಿಸೂಚನೆ ಹೊರಡಿಸಿರುವ ಹೆಮ್ಮೆಯ ಮೋದಿ
ಜೀ ಅವರ ಸರ್ಕಾರದ ದಿಟ್ಟ ನಿರ್ಧಾರವನ್ನು ಅಭಿನಂದಿಸುವ ಬದಲು ಅದಕ್ಕೂ ಅಪಸ್ವರ ನುಡಿಯುತ್ತಿದ್ದೀರಿ, ರಾಜ್ಯವೇ ಹೊಸದಾಗಿ ಜಾತಿ ಗಣತಿ ನಡೆಸುತ್ತೇವೆಂದು ಬೊಗಳೆ ಬಿಡುತ್ತಿದ್ದೀರಿ, ಇದಕ್ಕಾಗಿ ಜನರ ತೆರಿಗೆಯ ಇನಷ್ಟು ಕೋಟಿ ಹಣ ಚೆಲ್ಲಲು ಸಿದ್ಧರಾಗಿದ್ದೀರಿ,
• ಅಂತರಾಷ್ಟ್ರೀಯ ಮಾರುಕಟ್ಟೆಯನ್ನವಲಂಬಿಸಿ ಏರಿಕೆಯಾಗುವ ಚಿನ್ನದ ದರಕ್ಕೂ ಮೋದಿಯವರೇ ಕಾರಣ ಎಂಬ ನಿಮ್ಮ ಹೇಳಿಕೆ ಅತ್ಯಂತ ಹಾಸ್ಯಸ್ಪದ ಹಾಗೂ ಜನರನ್ನು ಮೂರ್ಖರನ್ನಾಗಿಸುವ ವ್ಯರ್ಥ ಪ್ರಯತ್ನ. ಇನ್ನಿಲ್ಲದಂತೆ ಪ್ರತಿಯೊಂದು ವಸ್ತುಗಳ ಮೇಲೂ ಪ್ರತಿ ದಿನವೂ ಬೆಲೆ ಏರಿಕೆಯ ಬರೆ ಎಳೆಯುತ್ತಲೇ ಇದ್ದೀರಿ,
• ಸೂರು ಕಟ್ಟಿಕೊಳ್ಳುವ ಜನರ ಕನಸುಗಳನ್ನು ಭಗ್ನಗೊಳಿಸಲು ದುಪ್ಪಟು ಸ್ಟಾಂಪ್ ಡ್ಯೂಟಿ ಹೆಚ್ಚಿಸಿದ್ದು ನೀವಲ್ಲವೇ?
• ಡೀಸೆಲ್ ದರ ಏರಿಕೆಯಾದರೂ ಕೇಂದ್ರ ಸರ್ಕಾರ ಜನರ ಮೇಲೆ ಹೇರಲಿಲ್ಲ ಆದರೆ ರಾಜ್ಯದಲ್ಲಿ ಪ್ರತಿ ಲೀಟರ್ ಗೆ ₹2 ರೂ ಡೀಸೆಲ್ ದರ ಏರಿಕೆ ಮಾಡಿದ್ದು ನೀವಲ್ಲದೇ ಮತ್ಯಾರು?
• ಹಾಲು ಬಿಸಿಯಾಗುವ ಮುನ್ನವೇ ಅದರ ಬೆಲೆ ಏರಿಕೆಯ ಬಿಸಿ ಜನರಿಗೆ ತಟ್ಟಿಸಿದವರಾರು?
• ಕಳೆದೆರಡು ವರ್ಷಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಳನ್ನು ಗಗನಕ್ಕೇರಿಸಿ ನಿಲ್ಲಿಸಿರುವುದು ನಿಮ್ಮ ಆಡಳಿತದಲ್ಲಲ್ಲವೇ?
• ಶಕ್ತಿ ಯೋಜನೆ ಕೊಟ್ಟಿದ್ದೇವೆಂದು ಹೇಳಿ, ಬಸ್ ಪ್ರಯಾಣ ದರ ಹೆಚ್ಚಿಸಿದವರು ನೀವಲ್ಲವೇ?
• ದಿನನಿತ್ಯ ತಮ್ಮ ಸುಲಲಿತ ಪ್ರಯಾಣಕ್ಕಾಗಿ ಮೆಟ್ರೋ ಅವಲಂಭಿಸಿರುವ ಪ್ರಯಾಣಿಕರಿಗೆ ದರ ಹೆಚ್ಚಳದ ಬರೆ ಎಳೆದವರು ನೀವಲ್ಲವೇ?
• ಉಚಿತ ವಿದ್ಯುತ್ ಕೊಡುತ್ತೇವೆಂದು ಹೇಳಿ, ದಿನದಿಂದ ದಿನಕ್ಕೆ ವಿದ್ಯುತ್ ಬಿಲ್ ದರ ಏರಿಸುತ್ತಿರುವವರು ನೀವಲ್ಲವೇ?
• ಕುಡಿಯುವ ನೀರಿನ ದರ ಏರಿಕೆ ಮಾಡಿ ಜನಸಾಮಾನ್ಯರ ಗಂಟಲು ಒಣಗಿಸಿದವರು ನೀವೇ ಅಲ್ಲವೇ?
• ಎಲ್ಲಾ ಅಗತ್ಯ ಸರಕು – ಸೇವೆಗಳ ಬೆಲೆ ಏರಿಸಿ ಸಾಮಾನ್ಯವರ್ಗದ ಜನರ ಬದುಕು ಹಿಂಡುತ್ತಿರುವ ಸರ್ಕಾರ ನಿಮ್ಮದಲ್ಲವೇ?