ಮನೆ ರಾಜಕೀಯ ಪಂಚಮಸಾಲಿ ಮೀಸಲಾತಿಗೆ ಬಿಎಸ್‌ವೈ ಅಡ್ಡಿ ಪಡಿಸಿಲ್ಲ: ಸಚಿವ ನಿರಾಣಿ

ಪಂಚಮಸಾಲಿ ಮೀಸಲಾತಿಗೆ ಬಿಎಸ್‌ವೈ ಅಡ್ಡಿ ಪಡಿಸಿಲ್ಲ: ಸಚಿವ ನಿರಾಣಿ

0

ಬೆಂಗಳೂರು(Bengaluru): ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸುವ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಡ್ಡಗಾಲು ಹಾಕಿಲ್ಲ. ಈ ಬಗ್ಗೆ ಕೇಳಿಬಂದಿರುವ ಆರೋಪ ಸತ್ಯಕ್ಕೆ ದೂರವಾದುದು ಎಂದು ಬೃಹತ್  ಮತ್ತು ಮಧ್ಯಮ ಕೈಗಾರಿಕೆ ಸಚಿವ ಡಾ.ಮುರುಗೇಶ ಆರ್‌. ನಿರಾಣಿ ಸ್ಪಷ್ಟಪಡಿಸಿದ್ದಾರೆ.

ಪಂಚಮಸಾಲಿ ಸಮುದಾಯದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಗಳು ಯಡಿಯೂರಪ್ಪನವರು ತಮ್ಮ ಸಮುದಾಯಕ್ಕೆ ಮೀಸಲಾತಿ ಕೊಡಲು ಅಡ್ಡಿಯಾಗಿದ್ದಾರೆ. ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಮೇಲೆ ಒತ್ತಡ ಹಾಕಿದ್ದಾರೆ ಹೀಗಾಗಿ ಅವರ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಎಂದು ಕರೆ ಕೊಟ್ಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿನ್ನಲೆಯಲ್ಲಿ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, “ಪಂಚಮಸಾಲಿ ಸಮುದಾಯಕ್ಕೆ ನ್ಯಾಯ  ಒದಗಿಸಲು ನಮ್ಮ ನಾಯಕರಾದ ಬಿ.ಎಸ್. ಯಡಿಯೂರಪ್ಪನವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಯೇ ಹೊರುತು,  ಅಡ್ಡಿಪಡಿಸುವ ಕೆಲಸವನ್ನು ಎಂದೂ ಮಾಡಿಲ್ಲ,” ಎಂದು ಪುನರುಚ್ಚರಿಸಿದರು.

“ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯವನ್ನು ಅಭಿವೃದ್ಧಿಪಡಿಸುವ ಏಕೈಕ ಸದ್ದುದ್ದೇಶದಿಂದ ಪ್ರಾಧಿಕಾರ ರಚಿಸಿ 500 ಕೋಟಿ ರೂ. ಅನುದಾನವನ್ನು  ಕೊಟ್ಟಿದ್ದರು. ಅದೇ ರೀತಿ 2ಎ ಮೀಸಲಾತಿ ಕೊಡುವ ಸಂಬಂಧ ಸಚಿವ ಸಂಪುಟ ಉಪಸಮಿತಿಯನ್ನು ಮಾಡಿದ್ದು ಸಹ ಯಡಿಯೂರಪ್ಪನವರು.  ಅವರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಬಾರದು,” ಎಂದು ನಿರಾಣಿ ತಿರುಗೇಟು ನೀಡಿದರು.

ಸಿಎಂ ಭರವಸೆ:

“ಮುಖ್ಯಮಂತ್ರಿ ಬೊಮ್ಮಾಯಿ ಅವರು ಪಂಚಮಸಾಲಿ   ಸಮುದಾಯಕ್ಕೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಮೀಸಲು ಕಲ್ಪಿಸುವ ಸಂಬಂಧ ಅಧ್ಯಯನ ನಡೆಸುತ್ತಿರುವ ಆಯೋಗ ವರದಿ ನೀಡಿದ ನಂತರ ಸರ್ಕಾರ ಸೂಕ್ತ ಕ್ರಮ ವಹಿಸಲಿದೆ,” ಎಂದರು.

“ಮೀಸಲು ಸಂಬಂಧ ನಮ್ಮ ಸರ್ಕಾರ ಈಗಾಗಲೇ  ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಶಿಫಾರಸು ಮಾಡಿದೆ.  ಆಯೋಗವು  ಕುಲಶಾಸ್ತ್ರ ಅಧ್ಯಯನ ನಡೆಸುತ್ತಿದೆ.  ಇನ್ನು ಕೆಲವು ಜಿಲ್ಲೆಗಳಿಗೆ ಭೇಟಿ ಕೊಡಬೇಕಾಗಿದೆ.  ಇವೆಲ್ಲದಕ್ಕೂ ಸಮಯ ಅವಕಾಶ ಬೇಕಾಗುತ್ತದೆ. ಅನಿವಾರ್ಯ ಕಾರಣಗಳಿಂದ ವಿಳಂಬವಾದಾಗ ಕಾರಣಕ್ಕೆ ಟೀಕೆ ಮಾಡುವುದು ಸರಿಯಲ್ಲ,”ಎಂದು ನಿರಾಣಿ ವಿವರಿಸಿದರು.

ಕಾಂಗ್ರೆಸ್‌ ವಿರುದ್ಧ ಕಿಡಿ: “ನಮ್ಮ ಸಿಎಂ ಎಂದರೆ ಕಾಮನ್‌ ಮ್ಯಾನ್‌  ಎನ್ನುವ ಮಟ್ಟಿಗೆ ಸರಳ ವ್ಯಕ್ತಿತ್ವ ಅವರದ್ದು. ಇಡೀ ಕರ್ನಾಟಕದ ಜನತೆಯ ನೆಚ್ಚಿನ ನಾಯಕರು ಅವರು.  ಆದರೆ, ಕಾಂಗ್ರೆಸ್  ಪಕ್ಷದವರು ನಮ್ಮ ಮುಖ್ಯಮಂತ್ರಿ ವಿರುದ್ಧ ಸುಳ್ಳುಆರೋಪ ಮಾಡಿದ್ದಾರೆ. ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಕಾಂಗ್ರೆಸ್‌  ತನ್ನ ಭ್ರಷ್ಟಾಚಾರ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ,” ಎಂದರು.

“ಬೊಮ್ಮಾಯಿ ಅವರ ವಿರುದ್ಧ ಮಾಡಿರುವ  ಆರೋಪ ನಿರಾಧಾರ. ಪ್ರತಿಪಕ್ಷದವರು ಅವರ ತಟ್ಟೆಯಲ್ಲಿ ಬಿದ್ದಿರುವ ಹೆಗ್ಗಣದ ಬಗ್ಗೆ ಗಮನ ಹರಿಸಲಿ, ಬೇರೆಯವರ ತಟ್ಟೆ ನೋಡುವ ಅಗತ್ಯವಿಲ್ಲ,” ಎಂದು ಕಿಡಿಕಾರಿದರು.

ಹಿಂದಿನ ಲೇಖನಮಂಗಳೂರು: ವಿದ್ಯಾರ್ಥಿನಿಲಯದಿಂದ ಮೂವರು ವಿದ್ಯಾರ್ಥಿನಿಯರು ನಾಪತ್ತೆ
ಮುಂದಿನ ಲೇಖನಬೀಟ್ರೂಟ್ ಸಕತ್ ಆರೋಗ್ಯಕಾರಿ ತರಕಾರಿ