ಮನೆ ರಾಜ್ಯ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟಾಂಡ್​ ಗಳಿಗೆ ರಾಜ್ಯದ ದಿಗ್ಗಜ ಕ್ರಿಕೆಟಿಗರ ಹೆಸರಿಡುವಂತೆ ಸಿಎಂ ಮನವಿ

ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟಾಂಡ್​ ಗಳಿಗೆ ರಾಜ್ಯದ ದಿಗ್ಗಜ ಕ್ರಿಕೆಟಿಗರ ಹೆಸರಿಡುವಂತೆ ಸಿಎಂ ಮನವಿ

0

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟಾಂಡ್​ ಗಳಿಗೆ ರಾಜ್ಯದ ದಿಗ್ಗಜ ಕ್ರಿಕೆಟಿಗರಾದ ಇಎಎಸ್ ಪ್ರಸನ್ನ, ಜಿ.ಆರ್.ವಿಶ್ವನಾಥ್ ಮತ್ತು ಬಿ.ಎಸ್.ಚಂದ್ರಶೇಖರ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ​ಸಿಎ) ಅಧ್ಯಕ್ಷ ರಘುರಾಮ್ ಭಟ್​ ಅವರಿಗೆ ಪತ್ರ ಬರೆದಿದ್ದಾರೆ.

Join Our Whatsapp Group

ಈ ಸಂಬಂಧ ಇತಿಹಾಸಕಾರ ರಾಮಚಂದ್ರ ಗುಹಾ ತಮಗೆ ಬರೆದ ಪತ್ರವನ್ನು ಲಗತ್ತಿಸಿ ಸಿಎಂ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಪತ್ರ ಬರೆದಿದ್ದಾರೆ. ಮಾರ್ಚ್ 29ಕ್ಕೆ ಗುಹಾ ಬರೆದ ಪತ್ರವನ್ನು ಉಲ್ಲೇಖಿಸಿರುವ ಅವರು, ಈ ಮಾರ್ಚ್​ನಲ್ಲಿ ರಾಜ್ಯ ಮೊದಲ ಬಾರಿಗೆ ರಣಜಿ ಟ್ರೋಫಿ ಗೆಲುವು ಸಾಧಿಸಿದ 50ನೇ ವಾರ್ಷಿಕೋತ್ಸವವನ್ನು ಪೂರೈಸಿದೆ. 1974ರ ವಿಜಯದ ಮೂವರು ಕರ್ನಾಟಕದ ಕ್ರಿಕೆಟ್ ದಿಗ್ಗಜರನ್ನು ಗೌರವಿಸುವಂತೆ ಅಭಿಮಾನಿಗಳಿಂದ ಸತತವಾಗಿ ಮನವಿ ಸಲ್ಲಿಸಲಾಗುತ್ತಿದೆ. ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಇತರ ಕಡೆ ಸ್ಥಳೀಯ ಕ್ರಿಕೆಟ್ ದಿಗ್ಗಜರ ಹೆಸರನ್ನು ಸ್ಟೇಡಿಯಂ ಸ್ಟಾಂಡ್​ಗಳಿಗೆ ನಾಮಕರಣ ಮಾಡಲಾಗಿದೆ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ನನ್ನ ಪ್ರಕಾರ ಗುಹಾ ಬರೆದ ಪತ್ರದಲ್ಲಿ ಬಹಳಷ್ಟು ಸತ್ಯಾಂಶ ಇದೆ. ಹೀಗಾಗಿ ಚಿನ್ನಸ್ವಾಮಿ ಸ್ಟೇಡಿಯಂನ ಸ್ಟಾಂಡ್​ಗಳಿಗೆ ಕರ್ನಾಟಕದ ಕ್ರಿಕೆಟ್ ಲೆಂಜೆಂಡ್​ಗಳಾದ ಇಎಎಸ್ ಪ್ರಸನ್ನ, ಜಿ.ಆರ್.ವಿಶ್ವನಾಥ್ ಮತ್ತು ಬಿ.ಎಸ್.ಚಂದ್ರಶೇಖರ್ ಹೆಸರನ್ನು ನಾಮಕರಣ ಮಾಡುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಇದು ಮುಂಬರುವ ಕ್ರಿಕೆಟಿಗರಿಗೆ ಉತ್ತೇಜನ ನೀಡಲಿದೆ ಎಂದು ಎಂದು ಸಿಎಂ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗೆ ರಾಮಚಂದ್ರ ಗುಹಾ ಬರೆದ ಪತ್ರದಲ್ಲಿ ಒಂದು ವೇಳೆ ಕೆಎಸ್​ಸಿಎ ಸ್ಟೇಡಿಯಂನ ಸ್ಟಾಂಡ್​ಗಳಿಗೆ ಮೂವರ ಹೆಸರನ್ನು ನಾಮಕರಣ ಮಾಡಲು ಒಪ್ಪಿಲ್ಲವಾದರೆ, ರಾಜ್ಯ ಸರ್ಕಾರ ಸ್ಟೇಡಿಯಂ ಪಕ್ಕದ ರಸ್ತೆಗಳಿಗೆ ಈ ಮೂವರ ಹೆಸರನ್ನು ನಾಮಕರಣ ಮಾಡುವಂತೆ ಕೋರಿದ್ದಾರೆ. ಈ ರಸ್ತೆಗಳು ಪ್ರಸಕ್ತ ಬ್ರಿಟಿಷ್ ಆಡಳಿತಗಾರರ ಹೆಸರನ್ನು ಹೊಂದಿದೆ ಎಂದು ಹೇಳಿದ್ಧಾರೆ.

ಹಿಂದಿನ ಲೇಖನಚುನಾವಣಾ ಅಕ್ರಮ: ರಾಜ್ಯದಲ್ಲಿ ಇದುವರೆಗೆ 44 ಕೋಟಿ ನಗದು ಸೇರಿ 288 ಕೋಟಿ ಮೌಲ್ಯದ ವಸ್ತುಗಳು ವಶಕ್ಕೆ
ಮುಂದಿನ ಲೇಖನಏಪ್ರಿಲ್ 18ರಂದು ವಾಹನಗಳಿಗೆ ಫ್ಯಾನ್ಸಿ ನಂಬರ್‌ ಗಳ ಹರಾಜು: ಅರ್ಜಿ ಆಹ್ವಾನ