ಮನೆ ರಾಜಕೀಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ: ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿದ 63.75 ಕೋಟಿ...

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ: ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿದ 63.75 ಕೋಟಿ ಅನುಮೋದನೆ

0

ಮೈಸೂರು:  ಮೈಸೂರು ಜಿಲ್ಲೆಯ 6 ನಗರ ಸ್ಥಳೀಯ ಸಂಸ್ಥೆಗಳು ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4ರ ಯೋಜನೆಯಡಿ ತಯಾರಿಸಿದ 63.75 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬುಧವಾರ ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಹುಣಸೂರು ನಗರಸಭೆ 25.5 ಕೋಟಿ, ಕೆ.ಆರ್.ನಗರ, ಬನ್ನೂರು, ತಿ.ನರಸೀಪುರ, ಹೆಚ್.ಡಿ.ಕೋಟೆ ಪುರಸಭೆಗಳು ತಯಾರಿಸಿದ ತಲಾ 8.5 ಕೋಟಿ ಹಾಗೂ ಸರಗೂರು ಪಟ್ಟಣ ಪಂಚಾಯಿತಿ ತಯಾರಿಸಿದ 4.25 ಕೋಟಿ ರೂ.ಗಳ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಲು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಜಿಲ್ಲಾ ಮಟ್ಟದ ಸಮಿತಿಯಲ್ಲಿ ಅನುಮೋದನೆ ನೀಡಿದರು.

 ಕಳೆದ ಫೆಬ್ರವರಿ 4 ರಂದು ನಡೆದ ಇದೇ ಸಭೆಯಲ್ಲಿ ನಂಜನಗೂಡು, ಹೂಟಗಳ್ಳಿ ನಗರಸಭೆಗಳು, ಪಿರಿಯಾಪಟ್ಟಣ ಪುರಸಭೆ, ಬೋಗಾದಿ, ರಮ್ಮನಹಳ್ಳಿ, ಶ್ರೀರಾಮಪುರ, ಕಡಕೋಳ ಪಟ್ಟಣಪಂಚಾಯಿತಿಗಳು ಸಿದ್ಧಪಡಿಸಿದ್ದ ಒಟ್ಟು 76.5 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ್ದರು.

ಮುಖ್ಯಮಂತ್ರಿಗಳ ಅಮೃತ್ ನಗರೋತ್ಥಾನ (ಮುನಿಸಿಪಾಲಿಟಿ) ಹಂತ-4ರ ಯೋಜನೆಯಡಿ ಜಿಲ್ಲೆಯ ನಗರಸಭೆಗಳಿಗೆ 30 ಕೋಟಿ, ಪುರಸಭೆಗಳಿಗೆ 10 ಕೋಟಿ ಹಾಗೂ ಪಟ್ಟಣ ಪಂಚಾಯಿತಿಗಳಿಗೆ 5 ಕೋಟಿ ರೂ.ಗಳ ಅನುದಾನ ಲಭ್ಯವಾಗುತ್ತದೆ. ಜಿಲ್ಲೆಯ ಎಲ್ಲಾ 13 ನಗರ ಸ್ಥಳೀಯ ಸಂಸ್ಥೆಗಳಿಂದ ಜಿಲ್ಲೆಗೆ 165 ಕೋಟಿ ರೂ. ಲಭ್ಯವಾಗಿದೆ ಎಂದು ಹೇಳಿದರು.

ನಿಗದಿಯಾಗಿರುವ ಅನುದಾನದ ಶೇ.85ರಷ್ಟು ಮೊತ್ತಕ್ಕೆ ಕ್ರಿಯಾಯೋಜನೆ ತಯಾರಿಸಿ, ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ಅನುಮೋದನೆ ಪಡೆದ ಸರ್ಕಾರಕ್ಕೆ ಸಲ್ಲಿಸುವಂತೆ ಸರ್ಕಾರ ಆದೇಶ ನೀಡಿತ್ತು.

ಸಭೆಯಲ್ಲಿ ಶಾಸಕರಾದ ಹೆಚ್.ಪಿ.ಮಂಜುನಾಥ್, ಸಾ.ರಾ. ಮಹೇಶ್, ಅನಿಲ್ ಚಿಕ್ಕಮಾದು, ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಅಶಾದ್ ಆರ್. ಷರೀಫ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಶ್ರೀಕಂಠಸ್ವಾಮಿ, ಎ.ಇ.ಇ. ಸೋಮನಾಥ್, ಶ್ರೀನಿವಾಸ್, ಆಯಾ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರುಗಳು ಮತ್ತಿತರರು ಉಪಸ್ಥಿತರಿದ್ದರು.