ಬೆಂಗಳೂರು(Bengaluru): ಜಿರಳೆ ಕಾಟದಿಂದ ಬೇಸತ್ತ ಮಾಲೀಕ ಬಾಡಿಗೆ ಮನೆಗಳಿಗೆ ಜಿರಳೆ ಔಷಧಿ ಸಿಂಪಡಿಸಿದ ಪರಿಣಾಮ ಅಸ್ವಸ್ಥಗೊಂಡ ಬಾಲಕಿ ಅಹನಾ (8) ಮಂಗಳವಾರ ಸಾವನ್ನಪ್ಪಿರುವ ಘಟನೆ ವಸಂತನಗರದಲ್ಲಿ ನಡೆದಿದೆ.ಲ
ಬಾಲಕಿಯ ತಂದೆ ವಿನೋದ್ ಮತ್ತು ತಾಯಿ ನಿಶಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾರಮ್ಮ ದೇವಸ್ಥಾನದ ಬಳಿಯ ಶಿವಪ್ರಸಾದ್ ಎಂಬುವರು ತಮ್ಮ ಕಟ್ಟಡದ ನಾಲ್ಕು ಮನೆಗಳಿಗೆ ಜಿರಳೆ ಔಷಧಿ ಸಿಂಪಡಿಸಿ, ಒಂದು ವಾರ ಮನೆ ಖಾಲಿ ಬಿಡುವಂತೆ ಬಾಡಿಗೆದಾರರಿಗೆ ಸೂಚಿಸಿದ್ದರು ಎನ್ನಲಾಗಿದೆ.
ಬಾಲಕಿಯ ಪೋಷಕರು ಮನೆ ಖಾಲಿ ಮಾಡಿ ನಾಲ್ಕೇ ದಿನಕ್ಕೆ ವಾಪಸಾಗಿದ್ದರು. ಮನೆಯನ್ನೂ ಸ್ವಚ್ಛಗೊಳಿಸದೆ ವಾಸ್ತವ್ಯ ಮಾಡಿದ್ದರು. ಸೋಮವಾರ ರಾತ್ರಿ ಬಾಲಕಿ ಹಾಗೂ ಪೋಷಕರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಲಕಿಯ ಮರಣೋತ್ತರ ಪರೀಕ್ಷೆ ಇಂದು ನಡೆಯಲಿದೆ. ಮಾಲೀಕ ಶಿವಪ್ರಸಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.