ಮನೆ ಸುದ್ದಿ ಜಾಲ ಸಿಎಂ ಆಗಿ ಅಜ್ಜಯ್ಯನ ಹೆಸರಲ್ಲೇ ಪ್ರಮಾಣವಚನ ̧   ತಡರಾತ್ರಿ ಮಠಕ್ಕೆ ಭೇಟಿ ನೀಡಿ ವಿಶೇಷ ಸಲಹೆ...

ಸಿಎಂ ಆಗಿ ಅಜ್ಜಯ್ಯನ ಹೆಸರಲ್ಲೇ ಪ್ರಮಾಣವಚನ ̧   ತಡರಾತ್ರಿ ಮಠಕ್ಕೆ ಭೇಟಿ ನೀಡಿ ವಿಶೇಷ ಸಲಹೆ ಪಡೆದ ಡಿ.ಕೆ.ಶಿವಕುಮಾರ್

0

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿರುವ ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೇರುವ ಮುನ್ನ ದೈವಚಿಂತನೆಗೆ ಶರಣಾಗಿದ್ದಾರೆ. ದೆಹಲಿಯಲ್ಲಿ ಸಚಿವ ಸಂಪುಟ ಕಸರತ್ತಿನ ಜಿದ್ದಾಜಿದ್ದಿನ ಸಭೆಗಳನ್ನು ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಂತೆ, ಡಿ.ಕೆ.ಶಿವಕುಮಾರ್ ಅವರು ತಡರಾತ್ರಿಯೇ ತಮ್ಮ ಆರಾಧ್ಯ ದೈವವಾಗಿರುವ ನೊಣವಿನಕೆರೆ ಅಜ್ಜಯ್ಯನವರ ಶಾಖಾ ಮಠಕ್ಕೆ ಧಾವಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎನ್ನಲಾಗಿದೆ.

 ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಾಗ ಅಜ್ಜಯ್ಯನ ಹೆಸರಿನಲ್ಲೇ ಪ್ರಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಅವರು ಪತ್ನಿ ಉಷಾ ಶಿವಕುಮಾರ್ ಅವರೊಂದಿಗೆ ಬೆಂಗಳೂರಿನ ನಾಗರಬಾವಿಯಲ್ಲಿರುವ ಅಜ್ಜಯ್ಯನ ಶಾಖಾ ಮಠಕ್ಕೆ ಭೇಟಿ ನೀಡಿದರು. ರಾತ್ರಿ 11:40ರ ಸುಮಾರಿಗೆ ಮಠಕ್ಕೆ ಬಂದ ಕುಟುಂಬಸ್ಥರು, ತಡರಾತ್ರಿ 2 ಗಂಟೆಯವರೆಗೂ ಅಲ್ಲೇ ಉಳಿದುಕೊಂಡಿದ್ದರು. ಹಾಗೂ ಸುಮಾರು 2 ಗಂಟೆ 20 ನಿಮಿಷಗಳ ಕಾಲ ಮಠದ ಗದ್ದುಗೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆದ ಸಂಪುಟ ರಚನೆ ಹಾಗೂ ಸಿಎಂ ಪದಗ್ರಹಣದ ವಿದ್ಯಮಾನಗಳ ಕುರಿತು ಅಜ್ಜಯ್ಯನವರ ಸನ್ನಿಧಿಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ ಎನ್ನಲಾಗುತ್ತಿದೆ.

ಈ ಕುರಿತು ತಮ್ಮನ್ನು ಹುಡುಕಿಕೊಂಡು ಬಂದ ಡಿ.ಕೆ.ಶಿವಕುಮಾರ್‌ ಅವರಿಗೆ ಅಜ್ಜಯ್ಯನವರು ಕೆಲವು ಪ್ರಮುಖ ರಾಜಕೀಯ ಸಲಹೆಗಳ ಜೊತೆಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ ಎನ್ನಲಾಗಿದೆ. “ಅಧಿಕಾರ ಸಿಕ್ಕ ತಕ್ಷಣ ದೊಡ್ಡ ಮಟ್ಟದ ಆರ್ಭಟ ಅಥವಾ ಸಂಭ್ರಮಾಚರಣೆ ಬೇಡ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಹತ್ತೆಂಟು ಬಾರಿ ಯೋಚಿಸಿ ತೀರ್ಮಾನಿಸಿ. ಪ್ರಕೃತಿಯ ಮಳೆಗೆ ಪರಿಹಾರ ಕಂಡುಕೊಳ್ಳಬಹುದು, ಆದರೆ ರಾಜಕಾರಣದ ಸಮಯ ಮತ್ತು ಸಂದರ್ಭದ ತೀರ್ಮಾನಗಳು ಸಂಪೂರ್ಣ ನಿಮ್ಮ ಕೈಯಲ್ಲೇ ಇವೆ” ಎಂದು ಅಜ್ಜಯ್ಯ ಎಚ್ಚರಿಸಿದ್ದಾರೆ ಎನ್ನಲಾಗಿದೆ. ನಂತರ ಡಿ.ಕೆ.ಶಿವಕುಮಾರ್ ಅವರು ಅಜ್ಜಯ್ಯನವರ ಪರಮ ಭಕ್ತರಾಗಿದ್ದು, ಅವರ ಅಪ್ಪಣೆ ಇಲ್ಲದೆ ರಾಜಕೀಯದ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂಬುದನ್ನು ಈ ಹಿಂದೆಯೇ ಹಲವು ಬಾರಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಈ ಹಿಂದೆ ದೆಹಲಿಗೆ ಪ್ರಮುಖ ಸಭೆಗೆ ತೆರಳುವ ಮುನ್ನವೂ ಒಂದೇ ದಿನದಲ್ಲಿ ಎರಡು ಬಾರಿ ನೊಣವಿನಕೆರೆಯ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ದರ್ಶನ ಪಡೆದಿದ್ದರು. ಸದ್ಯ ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕ ಬೆನ್ನಲ್ಲೇ ತಡರಾತ್ರಿ ಮಠಕ್ಕೆ ಭೇಟಿ ನೀಡಿ ಮಾರ್ಗದರ್ಶನ ಪಡೆದಿರುವುದು, ಅವರು ಅಜ್ಜಯ್ಯನ ಹೆಸರಲ್ಲೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಆರು ವರ್ಷಗಳ ಕಾಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಆಗಿ ಕಾರ್ಯನಿರ್ವಹಿಸಿದ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾವಚನ ಸ್ವೀಕರಿಸುತ್ತಿದ್ದಾರೆ. 18ನೇ ವಯಸ್ಸಿನಲ್ಲಿಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಿದ್ಯಾರ್ಥಿ ವಿಭಾಗ ಎನ್‌ಎಸ್‌ಯುಐ ಮೂಲಕ ರಾಜಕೀಯ ಪಾದಾರ್ಪಣೆ ಮಾಡಿದ ಶಿವಕುಮಾರ್ ಅತ್ಯಂತ ಕಿರಿಯ ವಯಸ್ಸಿಗೇ ವಿಧಾನಸಭೆ ಪ್ರವೇಶಿಸಿದರು.

ಆದರಿಂದ ಮೊದಲ ಬಾರಿ ಶಾಸಕರಾಗಿರುವಾಗಲೇ ಸಚಿವರಾಗಿ ಕಾರ್ಯನಿರ್ವಹಿಸಿ ಸೈ ಎನಿಸಿಕೊಂಡವರು. ಹಿರಿಯ ನಾಯಕ ಎಸ್ ಬಂಗಾರಪ್ಪಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ 29ನೇ ವಯಸ್ಸಿಗೆ ಡಿಕೆಶಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. 1989ರಲ್ಲಿ ಆಗ ಇದ್ದ ಸಾತನೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಆಗಿನ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಅನಾರೋಗ್ಯದ ಕಾರಣ ಪದತ್ಯಾಗ ಮಾಡಬೇಕಾಗಿ ಬಂತು. ಅವರು ಉತ್ತರಾಧಿಕಾರಿಯಾಗಿ ಬಂಗಾರಪ್ಪ ಆಯ್ಕೆಯಾದಾಗ ಡಿಕೆಶಿ ಅವರು ಬಂಧೀಖಾನೆ ಖಾತೆ ಸಹಾಯಕ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು ಎನ್ನಲಾಗಿದೆ.