ಮನೆ ಕೃಷಿ ಕಬ್ಬಿನ ಎಫ್ ​ಆರ್ ​ಪಿ 25 ರೂ. ಹೆಚ್ಚಿಸಿದ ಕೇಂದ್ರ ಸರ್ಕಾರ:  ಪ್ರತಿ ಕ್ವಿಂಟಲ್‌ ದರ...

ಕಬ್ಬಿನ ಎಫ್ ​ಆರ್ ​ಪಿ 25 ರೂ. ಹೆಚ್ಚಿಸಿದ ಕೇಂದ್ರ ಸರ್ಕಾರ:  ಪ್ರತಿ ಕ್ವಿಂಟಲ್‌ ದರ 340 ರೂ.

0

ನವದೆಹಲಿ: ಮುಂಬರುವ ಹಂಗಾಮಿನಲ್ಲಿ ಕಬ್ಬು ಖರೀದಿ ದರವನ್ನು ಪ್ರತಿ ಕ್ವಿಂಟಲ್​ ಗೆ 25 ರೂಪಾಯಿ ಹೆಚ್ಚಳ ಮಾಡಿದೆ. ಅಂದರೆ ಈಗಿರುವ 315 ರೂಪಾಯಿಗೆ 25 ಸೇರಿಸಿ 340 ರೂಪಾಯಿ ಫೇರ್​ ಅಂಡ್​​ ರೆಮ್ಯುನ್​ರೇಟಿವ್​ ಪ್ರೈಸ್​ (ಎಫ್ ​ಆರ್​ಪಿ) ನಿಗದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಎಫ್‌ ಆರ್‌ ಪಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಸಾರ್ವತ್ರಿಕ ಲೋಕಸಭೆ ಚುನಾವಣೆಗೂ ಮುನ್ನ ರೈತರಿಗೆ ನೀಡಿದ ಭರ್ಜರಿ ಉಡುಗೊರೆಯಾಗಿದೆ.

ಅಕ್ಟೋಬರ್‌ ನಿಂದ ಪ್ರಾರಂಭವಾಗುವ 2024-25ರ ಹಂಗಾಮಿಗೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಕನಿಷ್ಠ ಬೆಲೆಯನ್ನು ಕ್ವಿಂಟಲ್‌ ಗೆ 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ರೈತರಿಂದ ಪ್ರತಿ ಕ್ವಿಂಟಲ್​​ಗೆ 340 ರೂ.ನಂತೆ ನೀಡಿ ಕಾರ್ಖಾನೆಗಳು ಕಬ್ಬು ಖರೀದಿಸುವಂತೆ ಸರ್ಕಾರ ನಿರ್ಧರಿಸಿದೆ.

ಕಬ್ಬು ಖರೀದಿ ದರದಲ್ಲಿ ಈವರೆಗೂ ಮಾಡಲಾದ ಅತಿ ಹೆಚ್ಚು ಏರಿಕೆ ಇದಾಗಿದೆ. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಬ್ಬಿಗೆ ಘೋಷಿಸಿದ ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಾಗಿದೆ. ಎರಡನೇ ಬಾರಿಗೆ ಕೇಂದ್ರ ಸರ್ಕಾರ ಎಫ್‌ ಆರ್‌ ಪಿಯನ್ನು ಪ್ರತಿ ಕ್ವಿಂಟಲ್ ​ಗೆ 25 ರೂ. ಹೆಚ್ಚಳ ಮಾಡಿದೆ. ಈ ಹಿಂದೆ 2017-18 ನೇ ಸಾಲಿನಲ್ಲೂ ಇಷ್ಟೇ ಪ್ರಮಾಣದ ಹೆಚ್ಚಳ ಮಾಡಲಾಗಿತ್ತು.

ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, ಸಿಸಿಇಎ 2024-25ರ ಕಬ್ಬಿನ ಎಫ್‌ ಆರ್‌ ಪಿಯನ್ನು ಪ್ರತಿ ಕ್ವಿಂಟಲ್‌ ಗೆ 340 ರೂ.ಗೆ ಏರಿಸಿದೆ. ಇದು ಕಬ್ಬಿನ ಖರೀದಿಯಲ್ಲಿಯೇ ಅತಿ ಹೆಚ್ಚು ಬೆಲೆಯಾಗಿದ್ದು, 2023-24 ರ ಕಬ್ಬಿನ ಎಫ್​ಆರ್​ಪಿಗಿಂತ ಶೇಕಡಾ 8 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಈ ನಿರ್ಧಾರ ಕಬ್ಬು ಬೆಳೆಗಾರರ ಆರ್ಥಿಕಾಭಿವೃದ್ಧಿಗೆ ನೆರವಾಗಲಿದೆ. ಕಬ್ಬರಿಗೆ ವಿಶ್ವದಲ್ಲೇ ಭಾರತವು ಅತಿ ಹೆಚ್ಚು ದರ ನೀಡುತ್ತಿದೆ. ಪರಿಷ್ಕೃತ ಖರೀದಿ ದರ ಅಕ್ಟೋಬರ್ 1, 2024 ರಿಂದ ಜಾರಿಗೆ ಬರಲಿದೆ. ಸರ್ಕಾರದ ಈ ನಿರ್ಧಾರವು 5 ಕೋಟಿಗೂ ಹೆಚ್ಚು ಕಬ್ಬು ರೈತರು ಮತ್ತು ಸಕ್ಕರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಲಕ್ಷಾಂತರ ಜನರಿಗೆ ಪ್ರಯೋಜನವನ್ನು ನೀಡಲಿದೆ ಎಂದು ತಿಳಿಸಿದರು.

ರೈತರ ಆದಾಯವನ್ನು ದ್ವಿಗುಣಗೊಳಿಸುವ ಮೋದಿ ಗ್ಯಾರಂಟಿಯ ದೃಢೀಕರಣವಾಗಿದೆ. 2023-24 ರ ಹಂಗಾಮಿಗೆ ಒಟ್ಟು ಬಾಕಿ ಮೊತ್ತದ ಶೇಕಡಾ 80 ಕ್ಕಿಂತ ಹೆಚ್ಚು ಹಣವನ್ನು ಈಗಾಗಲೇ ರೈತರಿಗೆ ಪಾವತಿಸಲಾಗಿದೆ ಎಂದು ಠಾಕೂರ್ ಹೇಳಿದರು.

ಹಿಂದಿನ ಲೇಖನರಾಜ್ಯದಲ್ಲಿ ಹುಕ್ಕಾ ಬಾರ್ ನಿಷೇಧ: 1 ರಿಂದ 3 ವರ್ಷದವರೆಗೆ ಜೈಲು- 1 ಲಕ್ಷ ರೂ.ವರೆಗೆ ದಂಡ
ಮುಂದಿನ ಲೇಖನಇಂದಿನಿಂದ ಮಾ.1ರ ವರೆಗೆ ವೇಣೂರು ಬಾಹುಬಲಿಯ ಮಹಾಮಸ್ತಕಾಭಿಷೇಕ